Dr. Ajith Harishi
ಉಪರಿ
ಉಪರಿ
Publisher - ವೀರಲೋಕ ಬುಕ್ಸ್
- Free Shipping Above ₹300
- Cash on Delivery (COD) Available
Pages - 89
Type - Paperback
Couldn't load pickup availability
ಅಜಿತ್ ಅವರ ಉಪರಿ ಸಂಕಲನವನ್ನು ಓದುವಾಗ ಸಣ್ಣಕಥೆಗಳೆಂದರೆ ಇಂಥದ್ದೇ ಆಶಯ ಮತ್ತು ಆಕೃತಿಯನ್ನು ಹೊಂದಿರಬೇಕು ಅನಿಸಿಬಿಟ್ಟಿತು. ಇಲ್ಲಿ ಬಳಸಿರುವ ಶೈಲಿ ನಮ್ಮ ಸಮಕಾಲೀನರಿಗಿಂತ ವಿಭಿನ್ನ ಮತ್ತು ವಿಶಿಷ್ಟ ಅನಿಸುವುದು ಈ ಕಥೆಗಳ ಗತಿ ಮತ್ತು ಗಾತ್ರದಿಂದ. ತಮ್ಮ ಕಥೆಗಳ ವೈಚಾರಿಕತೆ, ಅರಿವು, ಆಳ, ವಿಸ್ತಾರ. ವ್ಯಾಪ್ತಿಗಳನ್ನು ಎಲ್ಲಿಯೂ ವಾಚ್ಯವಾಗಿಸದೆ ಓದುಗನ ಗ್ರಹಿಕೆಗೆ ಬಿಟ್ಟಿರುವುದು ಲೇಖಕನ ಜಾಣ್ನೆಯಾಗಿದೆ. ಅನಗತ್ಯ ವಿವರಗಳನ್ನು ತುಂಬಿ ಓದುಗರ ಗಮನವನ್ನು ಅತ್ತಿತ್ತ ಹೋಗುವಂತೆ ಮಾಡದೆ. ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕಂದುಕೊಂಡಷ್ಟನ್ನೇ ಹೇಳುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಹಗ್ಗದ ಮೇಲೆ ನಡೆಯುವಂತಹ ಏಕಾಗ್ರತೆಯಿಂದ ಗಮ್ಯದತ್ತ ಸಾಗುವ ಇಲ್ಲಿನ ಕಥೆಗಳಲ್ಲಿ ನಗರ ಜೀವನದ ಸಂಕೀರ್ಣತೆಯೂ ಇದೆ: ಹಳ್ಳಿಗಳ ಮುಗ್ಧ ಬದುಕಿನ ಸರಳತೆಯೂ ಇದೆ. ಅಜಿತ್ ಆರಿಸಿಕೊಂಡಿರುವ ಕಥಾವಸ್ತುಗಳು ಯಾವುದೇ ಒಂದು ಪ್ರದೇಶಕ್ಕೆ, ವರ್ಗಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರನ್ನೂ ಒಳಗಿಳಿಸಿಕೊಂಡು ಪಾತ್ರಗಳೊಂದಿಗೆ ಬೆಸೆಯುತ್ತವೆ.
ಅಂತರ್ಗತ ಕಥೆಯಲ್ಲಿ ಕತೆಗಾರನೊಂದಿಗೆ ಅವನು ಬರೆದ ಕಥೆಯ ಪಾತ್ರಗಳು ಎದುರಿಗೆ ಬಂದು ಜಗಳವಾಡುವುದು ಒಂದು ಅನನ್ಯ ಕಲ್ಪನೆಯಾಗಿದೆ. ಹುಟ್ಟಿದಾಗಿನಿಂದ ದುರದೃಷ್ಟವನ್ನೇ ತಂದವಳೆಂದು ಅಪ್ಪ ಅಮ್ಮಂದಿರಿಂದಲೇ ಅಜ್ಜಿಯ ಮನೆಗೆ ಸಾಗಿಹಾಕಲ್ಪಟ್ಟ ಗೀತಾ. ಕೆಂದಾವರೆಗಳೇ ತುಂಬಿದ ಊರ ಕೆರೆಯಲ್ಲಿ ಇಂದಾದರೂ ನೀಲಿ ಕಮಲ ಅರಳಿರಬಹುದೇ ಎಂದು ಅರಸುವಾಗ ಕಾಡುತ್ತಾಳೆ. ಉಪರಿ ಕಥೆಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹುಚ್ಚನೊಬ್ಬ. ಎಲ್ಲರಿಗೂ ಉಂಟು ಹುಚ್ಚು. ನಂಗೆ ಹೆಚ್ಚು, ನಂಗಿಂಥ ಹೆಚ್ಚಾದವ ನೀ ಬಂದೆ. ಮುಕ್ತಿ ಕೊಟ್ಟೆ ಶಿವಾ, ಅಲೆಯಬೇಕು ನೀನು, ಹೆದ್ದಾರಿ- ಮೋರಿ ಎಲ್ಲ. ಹೆದ್ದಾರಿ ಬಿಟ್ಟು ಬರೋಂವ ಒಬ್ಬ ಸಿಕ್ಕೇ ಸಿಗತಾನ. ಅಲ್ಲಿವರೆಗೂ ಅಲೀ..' ಎಂದು ಹೇಳಿ ತನ್ನ ಹುಚ್ಚನ್ನು ದಾಟಿಸಿಹೋಗುವ ಪರಿ ಮಾರ್ಮಿಕವಾಗಿದೆ. ಗಂಡನ ಮೇಲಿನ ಸಿಟ್ಟಿಗೇ ಮಗ ಮನೆ ಬಿಟ್ಟು ಹೋಗಿರುವುದು ಎಂದೇ ನಂಬಿದ್ದ ಗಂಗಾದೇವಮ್ಮನ ಮಗ ಮರಳಿ ಬರುತ್ತಾನೆನ್ನುವ ಕನವರಿಕೆಗಳಲ್ಲೇ ಕಥೆಯು ಅನಾವರಣಗೊಳ್ಳುವುದು, ವ್ಯಕ್ತ ಕಥೆಯ ವಿಶಿಷ್ಟತೆ. ಕಾಲ ವಟಿ ಕಥೆಯ ಆಶಯ ಶೃಂಗಾರ ರಸದ ಸಿಂಚನವಲ್ಲದಿದ್ದರೂ. ಚಂದ್ರಬಕ್ಕೆ ಹಲಸಿನ ತೊಳೆಗಳಂತೆ ರಸಿಕತೆಯನ್ನೇ ಉಣಬಡಿಸುತ್ತದೆ. ಒಟ್ಟಾರೆ ಸರಸರನೆ ಓದಿಸಿಕೊಂಡು ಹೋಗುವ ಚೆಂದದ ಸಂಕಲನವಿದು.
-ಪೂರ್ಣಿಮಾ ಮಾಳಗಿಮನಿ
Share


Subscribe to our emails
Subscribe to our mailing list for insider news, product launches, and more.