Harivu Books
Publisher - ಅಂಕಿತ ಪುಸ್ತಕ
- Free Shipping above ₹1,000
- Cash on Delivery (COD) Available
Pages - 312
Type - Paperback
Couldn't load pickup availability
ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ ಕಂಡಿದ್ದ ಮುಂಬಯಿ ಶಹರಕ್ಕೆ ಬಂದ ಹುರುಪಿನ ಕಿಶೋರಿ ಸರಯೂ, ಆ ಮಹಾನಗರದ 'ಮಗಜಮಾರಿ'ಯ ಗೌಜಿಯಲ್ಲಿ ತನ್ನ ಹೆಜ್ಜೆ ದನಿಗಳನ್ನು ಹೊಸದಾಗಿ ಆಲಿಸುತ್ತ, 'ಕಿಟಕಿಯನ್ನು ಒದ್ದೆ ಬಟ್ಟೆಯಿಂದ ಒರೆಸುತ್ತ', ರೂಪುಗೊಂಡ ನಿಬಿಡ ಆವರಣ ಇದು.
ಸಮಾಜ ಹೇರುವ ಅಯಾಚಿತ ಅಚ್ಚುಗಳಿಂದ, ಪಾತ್ರಗಳಿಂದ ಮುಕ್ತಗೊಳ್ಳುವುದು ನಿಜವಾದ 'ಗುರುತೆ'? ಅಥವಾ ಹೊಸದೊಂದು ಗುರುತಿಗಾಗಿ ಹವಣಿಸುವುದೇ? ಅಥವಾ ಯಾವುದೇ ಗುರುತಿನ ಹಂಗಿಲ್ಲದೆ ಪ್ರವಹಿಸುವುದೆ? - ಈ ಮೂರು ಎಳೆಗಳನ್ನು ನಲ್ಮೆಯಿಂದ ಹಿಡಿದು ಕಟ್ಟಿದ ಜಡೆಯಂಥ ಈ ಕಾದಂಬರಿಯ ಹೆಣಿಗೆ ಘನವಾದದ್ದು. ನಿಡುಗಾಲದ ಮುಂಬಯಿವಾಸಿನಿ, ಹಿತಭಾಷಿಣಿ ಅಮಿತಾ ಭಾಗವತ್ ಅವರು ಯಾವ ತರಾತುರಿ ಇಲ್ಲದೆ ಬರೆದಿರುವ ಈ ಮೊದಲ ಕಾದಂಬರಿಯ ಶ್ರುತಿ, ಓಘ, ಸಂಯಮ, ಪಕ್ವತೆ ಅಚ್ಚರಿ ಹುಟ್ಟಿಸುವಂತಿದೆ. ಇಸ್ಪೀಟಿನ ಎಲೆಗಳನ್ನು ತಕ್ಷಣ ಅಲ್ಲಲ್ಲೇ ಕಲೆಸಿ ಹಂಚಿ ಮತ್ತೆ ಆಟ ಮುಂದುವರೆಸುವಂತೆ, ಇಲ್ಲಿಯ ಸನ್ನಿವೇಶ, ಪಾತ್ರ, ಅವರಣಗಳು ಒಂದರೊಳಗೊಂದು ಕಲೆಯುತ್ತ ಅಲ್ಲಲ್ಲೇ ಬೇರ್ಪಡುತ್ತ, ಮುಂದೆ ಚಲಿಸುವ ನಮೂನೆ ಚುರುಕಾಗಿದೆ, ಮುಂಬಯಿತನದ ಪ್ರತಿಫಲನವೂ ಆಗಿದೆ. ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಗುಜರಾತಿ.. ಎಲ್ಲ ಬೆರೆತ ಧಾಟಿಯೊಂದು ಇಲ್ಲಿಯ ಒಕ್ಕಣೆಗಿದೆ. ನಿತ್ಯ ಜೀವನದ ಅಗಣಿತ ಆರ್ದ್ರ ವಿವರಗಳಲ್ಲಿ ಮೈದಾಳಿರುವ ಈ ಕಾದಂಬರಿಯಲ್ಲಿ, ಬಿಡಿ ಮತ್ತು ಇಡಿ-ಗಳ ನಡುವೆ ಲೇಖಕಿ ಸಾಧಿಸಿರುವ ಹದ ಅಪರೂಪದ್ದಾಗಿದೆ. ಎಲ್ಲವೂ ಅಪರಿಚಿತದೆಡೆ ಮುಖ ಮಾಡಿದೆ.
ಮುಂಬಯಿ ಎಂಬ ಒಂದು ಸಂಯುಕ್ತ ಮಹಾ ಮನಸ್ಸಿನ ವಿವಿಧ ಕಿಟಕಿಗಳನ್ನು ಕನ್ನಡಕ್ಕೆ ತೆರೆಯುತ್ತ ಬಂದ ಮುಂಬಯಿವಾಸಿ ಕಾದಂಬರಿಕಾರರ ಒಂದು ಜಾಯಮಾನವೇ ಇದೆ. ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ವ್ಯಾಸರಾವ್ ನಿಂಜೂರ್, ಉಮಾ ರಾವ್.. ಇವರ ಮುಂಬಯಿ ನೆಲೆಯ ಮಹತ್ವದ ಪರಿಪೂರಕ ಕಾದಂಬರಿಗಳ ಸಾಲಿನಲ್ಲಿ, ಎಷ್ಟೋ ವರುಷಗಳ ನಂತರ, ಈಗ, ಅಮಿತಾ ಭಾಗವತ್ ಅವರ ಈ ಸತ್ವಶಾಲಿ ಕೃತಿ ಸೇರಿಕೊಳ್ಳುತ್ತಿದೆ. ಮುಕ್ತವಾದ ತಾಜಾ ಕಿಟಕಿಯೊಂದನ್ನು ತೆರೆಯುತ್ತಿದೆ. ಅವರನ್ನು ಹಿಗ್ಗಿನಿಂದ ಹೆಮ್ಮೆಯಿಂದ ಅಭಿನಂದಿಸುತ್ತೇನೆ.
-ಜಯಂತ ಕಾಯ್ಕಿಣಿ

