Dr. H. S. Gopal Rao
Publisher - ನವಕರ್ನಾಟಕ ಪ್ರಕಾಶನ
- Free Shipping Above ₹200
- Cash on Delivery (COD) Available
Pages -
Type -
ಕರ್ನಾಟಕವನ್ನು ಅರಿಯುವುದು ಹೇಗೆ? ಅದಕ್ಕೆ ಒದಗುವ ಸಹಾಯಕ ಸಾಹಿತ್ಯ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ. ಪ್ರತಿಯೊಬ್ಬ ಕನ್ನಡಿಗನೂ ವಿದ್ವಾಂಸನಾಗಿ, ಸಂಶೋಧಕನಾಗಿ ಇರಲು ಸಾಧ್ಯವಿಲ್ಲ. ಹೆಬ್ಬೊತ್ತಿಗೆಗಳನ್ನು ಓದಿ ವಿಷಯಗಳನ್ನು ಸಂಗ್ರಹಿಸುವುದೂ ಸಾಧ್ಯವಿಲ್ಲ. ಪ್ರೌಢಶಾಲೆಯ ಶಿಕ್ಷಣವನ್ನೊ, ಪದವಿಪೂರ್ವ ತರಗತಿಗಳ ಓದನ್ನೂ ಪಡೆದಿರುವ ಕನ್ನಡಿಗನಿಗೆ ತನ್ನನ್ನು ತನ್ನ ಪರಂಪರೆಯನ್ನು ಅರಿತುಕೊಳ್ಳಲು ಇರುವ ಸಾಧನ ಸಂಪತ್ತು ಯಾವಾಗಲೂ ವಿರಳವಾದದ್ದೆ. ಅಂಥ ಸಂಪತ್ತು ಅಧಿಕೃತವೆನ್ನಿಸಿರುವುದು ಇನ್ನೂ ವಿರಳ. ಈ ದಿಸೆಯಲ್ಲಿ ಪ್ರಕಟಗೊಂಡಿರುವ ಒಂದು ಪುಸ್ತಕ 'ನಮ್ಮ ನಾಡು ಕರ್ನಾಟಕ'.
ಕರ್ನಾಟಕದ ಪರಂಪರೆ ಎಷ್ಟು ವಿಸ್ತಾರವಾದದ್ದು, ಶ್ರೀಮಂತವಾದದ್ದು ಎಂದರೆ ಅದನ್ನೆಲ್ಲ ಒಂದು ಕೈಪಿಡಿಯನ್ನಾಗಿ ಭಟ್ಟಿ ಇಳಿಸುವುದು ಸುಲಭವಾದ ಕೆಲಸವಲ್ಲ. ಆ ಕೆಲಸಕ್ಕೆ ಕೈ ಹಾಕುವವರಿಗೆಲ್ಲ ಎದುರಾಗುವ ದೊಡ್ಡ ಸಮಸ್ಯೆಯೆಂದರೆ, ಯಾವುದನ್ನು ಬಿಡುವುದು, ಯಾವುದನ್ನು ಹಿಡಿಯುವುದು ಎಂಬ ಆಯ್ಕೆಯದು. ಪರಂಪರೆಯನ್ನು ಪ್ರತಿನಿಧಿಸುವ ಎಲ್ಲ ಮುಖಗಳನ್ನೂ ಚೆನ್ನಾಗಿ ಅರಿತವರು ಮಾತ್ರವೇ ಈ ಕೆಲಸವನ್ನು ಮಾಡಬಲ್ಲರು. ಆಯ್ದುಕೊಂಡದ್ದನ್ನು ಆಕರ್ಷಕವಾಗಿ, ಪರಿಣಾಮಕಾರಿಯಾಗಿ ನಿರೂಪಿಸುವುದು ಮತ್ತೊಂದು ಮಜಲು. ಆದ್ದರಿಂದ ಗ್ರಹಿಕೆಯಲ್ಲಿ ಹಾಗೂ ಅಭಿವ್ಯಕ್ತಿಯಲ್ಲಿ ಪರಿಣತರಾದವರಷ್ಟೇ ಇಂಥ ಕೈಪಿಡಿಗಳನ್ನು ರಚಿಸಬಲ್ಲರು. ನಮ್ಮ ನಾಡಿನ ಬಗೆಗೆ ಸೂಕ್ತ ತಿಳುವಳಿಕೆ ಕೊಡಬಲ್ಲ ಒಂದು ಪುಸ್ತಕವನ್ನು ರಚಿಸಿರುವ ಡಾ|| ಎಚ್. ಎಸ್. ಗೋಪಾಲ ರಾಯರು ಈ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ನಮ್ಮ ನಾಡು ಕರ್ನಾಟಕ' ಎಂಬ ಅವರ ಈ ಪುಸ್ತಕ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ತಕ್ಕಷ್ಟು ಚಿಕ್ಕ ವ್ಯಾಪ್ತಿಯಲ್ಲಿ ತುಂಬ ಸಮರ್ಪಕವಾಗಿ ನಿರೂಪಿಸುತ್ತದೆ ಎನ್ನುವುದು ಸಂತೋಷದ ಸಂಗತಿ.
-ಹಾ. ಮಾ. ನಾಯಕ (ಕರ್ಮವೀರ, 30-1-1994)
ಕೃತಿಯ ಲೇಖಕರು ಎಚ್. ಎಸ್. ಗೋಪಾಲ ರಾವ್ : ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಇತಿಹಾಸಕಾರ, ಕರ್ನಾಟಕದ ಇತಿಹಾಸ ಮತ್ತು ಶಾಸನಗಳ ಸಂಶೋಧಕ. ಸುದೀರ್ಘ ಕಾಲ ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಉದ್ಯೋಗ, ಸ್ವಯಂ ನಿವೃತ್ತಿ ಪಡೆದು ಈಗ ಪೂರ್ಣವಾಗಿ ಶಾಸನಗಳ ಸಂಶೋಧನೆ ಮತ್ತು ಬರವಣಿಗೆಯಲ್ಲಿ ಇವರು ತೊಡಗಿಕೊಂಡಿದ್ದಾರೆ. ಇವರು ಹಲವು ವರ್ಷಗಳ ಕಾಲ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದರು. 'ರಾಶಿ', 'ಕರ್ನಾಟಕ ಏಕೀಕರಣ ಇತಿಹಾಸ' 'ಸಮಗ್ರ ಕರ್ನಾಟಕ ದರ್ಶನ', ಮುಂತಾದ ಇವರ ಪ್ರಮುಖ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಇವರು ಕಾದಂಬರಿಕಾರರೂ ಆಗಿದ್ದಾರೆ.