Bharati B. V.
Publisher - ಸಾವಣ್ಣ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮಹಾನಗರಗಳಲ್ಲಿ ಪ್ರತಿ ಮನುಷ್ಯ ಸಹ ಒಂದೊಂದು ದ್ವೀಪ ಅನ್ನುತ್ತೇವೆ, ಆದರೆ ದ್ವೀಪಗಳಿಗೆ ಸೇತುವೆ ಕಟ್ಟಬೇಕಾದರೆ ಬೇಕಾಗುವ ಒಂದು ತೋಳು, ನಾಲ್ಕು ಮಾತು ನಮ್ಮ ಬಳಿಯೂ ಇದೆ ಎನ್ನುವುದನ್ನು ಮರೆಯುತ್ತೇವೆ. ಬೆಂಗಳೂರಿನ ಉಸಿರು ಕಟ್ಟಿಸುವ ಟ್ರಾಫಿಕ್, ತಡವಾಯಿತು ಎನ್ನುವ ಆತಂಕ, ಒಳಗಿನ ಹತ್ತಾರು ಕಳವಳ, ತಳ್ಳಂಕಗಳ ನಡುವೆ ಅಪರಿಚಿತರೊಡನೆ ಹಂಚಿಕೊಳ್ಳುವ ಮಾತುಗಳು ಕೆಲವು ಸಲ ತಂಗಾಳಿಯಂತೆ ಮನಸ್ಸನ್ನು ತಂಪು ಮಾಡುತ್ತದೆ. ಭಾರತಿ ಬಿ.ವಿ ಹಾಗೆ ಆಡಿದ ನಾಲ್ಕು ಮಾತುಗಳೇ ಈ 'ಜಸ್ಟ್ ಮಾತ್ ಮಾತಲ್ಲಿ',
ಇಲ್ಲಿನ ಗಾಡಿ ಓಡಿಸುವವರಿಗೆಲ್ಲಾ ಈ ವೇಗ, ನುಗ್ಗಾಟ, ಧೂಳು, ಕೆಂಪು ಹಸಿರು ದೀಪಗಳು ಎಷ್ಟರ ಮಟ್ಟಿಗೆ ರೇಜಿಗೆ ಹುಟ್ಟಿಸುತ್ತವೆ ಎನ್ನುವುದರ ಅರಿವಿರುತ್ತದೆ. ದಿನವಿಡೀ ಇವುಗಳ ನಡುವೆಯೇ ಬದುಕುವ, ಇದು ಕೆಲಸದ ಒಂದು ಘಟ್ಟವಷ್ಟೇ ಆಗಿರದೆ, ಕೆಲಸವೇ ಆಗಿರುವ ಆಟೋ ಚಾಲಕರ 'ರಸ್ತೆ ರೇಜಿಗೆ' ಯಾವ ಮಟ್ಟದ್ದಿರಬಹುದು? ಇಲ್ಲಿ ಬಿ ಎಂ ಬಶೀರ್ ಅವರು ಬರೆದಿರುವ ಒಂದು ಹನಿಘಟನೆ ನೆನಪಾಗುತ್ತಿದೆ, ಆಟೋ ಡ್ರೈವರ್ ಒಬ್ಬ ಒಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ತುಂಬಾ ಖುಷಿಯಾಗಿರುತ್ತಾನೆ. ಹೆಂಡತಿ, ಏನು ಸಮಾಚಾರ ಎಂದು ಕೇಳಿದಾಗ, ಅವನು ಹೇಳುವುದು ಒಂದೇ ಮಾತು, "ಇಂದು ಯಾರೋ ಬಾಡಿಗೆ ಇಳಿದು ಹೋಗುವಾಗ, 'ಥ್ಯಾಂಕ್ಯೂ ಸರ್' ಅಂದರು"- ಒಂದು ಸಣ್ಣ ಮಾತು ಅವರ ಶ್ರಮಕ್ಕೆ ಒಂದು ಘನತೆ ತಂದುಕೊಡಬಲ್ಲುದಾದರೆ, ಒಂದು ಸಣ್ಣ ಮಾತು ಅವರ ದಿನದ ದುಡಿತದ ಕೊನೆಯಲ್ಲಿ ಮುಖದ ಮೇಲೆ ಒಂದು ನಗು ತರಬಹುದಾದರೆ, ಅದನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಲ್ಲವೆ? ಭಾರತಿ ಇಲ್ಲಿ ಮಾಡಿರುವುದೂ ಇದನ್ನೇ ಅವರ ಬರಹದ ಮೂಲಕ ಅವರು ಯೂನಿಫಾರ್ಮ್ ಹಿಂದಿರುವ ಅನೇಕ ಬದುಕುಗಳನ್ನು ಪರಿಚಯ ಮಾಡಿಸುತ್ತಾರೆ. ಲಘುಧಾಟಿಯಲ್ಲೇ ಕಾಣುವ ಅವರ ಬರಹಗಳ ಆಳದಲ್ಲಿ ಇಂತಹ ಹಲವಾರು ಸಾಕ್ಷಾತ್ಕಾರಗಳಿರುತ್ತವೆ.
ಸಂಧ್ಯಾ ರಾಣಿ-ಲೇಖಕಿ
ಸಾವಣ್ಣ ಪ್ರಕಾಶನ
