ಗಂಗಾವತಿ ಪ್ರಾಣೇಶ್
Publisher: ಸಾವಣ್ಣ ಪ್ರಕಾಶನ
Couldn't load pickup availability
ಜೋಗಿ
ಈ ಕಷ್ಟಕಾಲದಲ್ಲಿ ನಗಿಸುವುದು ಕೂಡ ಒಂದು ಪುಣ್ಯದ ಕೆಲಸ. ಆ ಕೆಲಸವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಾಡಿಕೊಂಡು ಬರುತ್ತಿರುವ ಗಂಗಾವತಿ ಪ್ರಾಣೇಶ್ ಕನ್ನಡದ ಹೆಮ್ಮೆಯನ್ನು ಗಡಿಯಾಚೆ ದಾಟಿಸಿದವರು. ಹಾಸ್ಯವೆಂಬುದು ಸಭ್ಯತೆಯ ಗಡಿದಾಟುತ್ತಿದ್ದ ದಿನಗಳಲ್ಲಿ ಅಕುಟಿಲ ಮುಗುಳ್ನಗೆಯೊಂದು ಮೂಡುವಂತೆ ಮಾಡಿದ್ದು ಪ್ರಾಣೇಶ್ ಸಾಧನೆ. ಅವರು ಹೇಳಿದ ಹಾಸ್ಯ ಪ್ರಸಂಗಗಳನ್ನು ಕೇಳಿ ನಾನು ಮುದಗೊಂಡಿದ್ದೇನೆ.
ಇದೀಗ ಪ್ರಾಣೇಶ್ ಅಕ್ಷರ ಜಗತ್ತಿಗೂ ಕಾಲಿಟ್ಟಿದ್ದಾರೆ. ಅವರ ಬರಹಗಳ ಶಕ್ತಿಯೆಂದರೆ ಅವರ ವಿಸ್ತಾರವಾದ ಓಡಾಟ ಮತ್ತು ವೈವಿಧ್ಯಮಯ ವ್ಯಕ್ತಿಗಳೊಂದಿಗಿನ ಒಡನಾಟ. ಆಧುನಿಕ ಜನಪದ ರೂಪುಗೊಳ್ಳುವುದೇ ಸಮಾಜದ ಜೊತೆಗಿನ ಒಡನಾಟದಿಂದ ಎಂದು ನಂಬಿರುವ ಎಲ್ಲರಿಗೂ ಪ್ರಾಣೇಶ್ ಹೇಳುವ ಪ್ರಸಂಗಗಳು ಪ್ರತ್ಯಕ್ಷ ಸಾಕ್ಷಿ. ಅವರು ಸುತ್ತಿದ ಊರು, ಕೇಳಿದ ಕತೆ, ಓದಿದ ಆಖ್ಯಾನ, ಅನುಭವಿಸಿದ ತಲ್ಲಣ, ಆ ಕ್ಷಣದ ಗ್ರಹಿಕೆ ಮತ್ತು ಅನುಭವದಿಂದ ಹುಟ್ಟಿದ ಅನುಭಾವ~ ಎಲ್ಲವೂ ಈ ಕೃತಿಯೊಳಗೆ ಹರಳುಗಟ್ಟಿವೆ.
ಹಾಸ್ಯವೆಂಬುದು ಅತ್ಯಂತ ಪ್ರಬಲವಾದ ಆಯುಧ. ರೋಷತಪ್ಪ ಮಾತಿನಿಂದ ಪ್ರತಿಭಟಿಸುವುದು ಒಂದು ವಿಧಾನ. ಹಾಸ್ಯದ ಮೂಲಕ ಒಡಂಬಡಿಸುವುದು ಮತ್ತೊಂದು. ಯುದ್ಧವೋ ಸಂಧಿಯೋ ಎಂಬ ಪ್ರಶ್ನೆ ಬಂದಾಗ ಇಡೀ ಸಮಾಜದ ಉತ್ತರ ಸಂಧಾನವೇ ಆಗಿರುತ್ತದೆ. ಅಂಥ ಸಂಧಾನಕ್ಕೆ ತಿಳಿಹಾಸ್ಯವೇ ಅನುಸಂಧಾನದ ಹಾದಿ. ಆ ಹಾದಿಯ ನಿರಂತರ ಪಯಣಿಗ ಪ್ರಾಣೇಶ್ ಅವರನ್ನು ಅಭಿನಂದಿಸುತ್ತಾ ನಮ್ಮ ಒಳಗೆ ಹೊಗೆಯಾಡುವ ಧಗೆಯನ್ನು ನಿಮ್ಮದೇ ನಗೆಯ ಬಗೆಯಿಂದ ತೆಗೆಯುತ್ತಿರಿ ಎಂದು ವಿನಂತಿಸಿಕೊಳ್ಳುವೆ.
-ಜೋಗಿ
ಸಾವಣ್ಣ ಪ್ರಕಾಶನ
