Dr. K. Shivaram Karanth
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಾರಂತರ ಹುಚ್ಚು ಮನಸಿನ ಹತ್ತು ಮುಖಗಳು ಓದಿದಂದಿನಿಂದ ಕಾರಂತರ ಬಗೆಗೊಂದು ಅಚ್ಚರಿ ಅಳಿಸಲಾಗದೇ ಉಳಿದಿದೆ. ಅಂಥಹ ಅಗಾಧ ವ್ಯಕ್ತಿತ್ವ ಮತ್ತೊಬ್ಬರಲ್ಲಿ ಕಾಣಲಿಕ್ಕಿಲ್ಲ. ಇನ್ನು ಅವರ ಹೇಳುವ ಕಥೆಗಳೆಲ್ಲ ಅತಿಶಯೋಕ್ತಿ, ಆಡಂಬರಗಳಿಲ್ಲದೇ ದಿನನಿತ್ಯದ ಜೀವನವನ್ನು ಪ್ರತಿಬಿಂಬಿಸುವ ಸಹಜ ನೆಲೆಗಟ್ಟಿನ ಮೇಲೆ ನಿಂತವು. ದಶಕಗಳು ಕಳೆದರೂ ಇಂದಿಗೂ ಪ್ರಸ್ತುತವೆನ್ನಿಸುವ, ಎಲ್ಲಾ ಕಾಲಕ್ಕೂ ಸಲ್ಲುವಂತಹವು. ಪಾತ್ರಗಳನ್ನು ಕಲ್ಪಿಸಿಕೊಳ್ಳುವುದೇ ಬೇಕಿಲ್ಲ. ನಮ್ಮ ಸುತ್ತಮುತ್ತಲಿನವರೇ, ನಮ್ಮ ಸಂಪರ್ಕಕ್ಕೆ ಬಂದವರೇ ಬಹುತೇಕ ಹೊಲಿಕೆಯಾಗಿ ಬಿಡುತ್ತಾರೆ. ಘಟನೆಗಳು ನಮ್ಮ ಸುತ್ತಲೂ ನಡೆಯುವಂತೆ ಅದರ ಮಧ್ಯದಲ್ಲಿ ನಾವು ಪ್ರೇಕ್ಷರರಾಗಿ ನೋಡುತಿರುವಂತೆ ಕೆಲವೊಮ್ಮೆ ನಮ್ಮದೇ ಮನೆಯ ಕಥೆಯೇನೊ ಎನ್ನುವಂತೆ ಭಾಸವಾಗುತ್ತದೆ.
ಇನ್ನೊಂದು ವಿಶಿಷ್ಟವೆಂದರೆ ಕಾರಂತರ ಭಾಷಾ ಶೈಲಿ. ಅವರ ಬಹುತೇಕ ಬರಹಗಳು ದಕ್ಷಿಣ, ಉತ್ತರ ಕನ್ನಡಗಳ ನಡುವೆ ಗಿರಕಿ ಹೊಡೆಯುವುದರಿಂದ ಅಲ್ಲಿಯ ಭಾಷೆಯ ಸೊಗಡು, ಪ್ರಕೃತಿ, ಪ್ರದೇಶದ ವರ್ಣನೆಗಳಿಂದ ಬಹುವಾಗಿಯೇ ಇಷ್ಟವಾಗುತ್ತದೆ. ಅಲ್ಲಲ್ಲಿ ಬರುವ ನವಿರಾದ ಹಾಸ್ಯ ಇನ್ನಷ್ಟು ಆಪ್ತವಾಗಿಸಿಬಿಡುತ್ತದೆ.
ಹಳ್ಳಿ ಎಂದ ಮೇಲೆ ಒಳ ಜಗಳಗಳು, ಪ್ರಾದೇಶಿಕ ರಾಜಕೀಯ, ಸೇಡು ದ್ವೇಷ, ಸ್ನೇಹ, ಸಂಬಂಧಗಳು ಎಲ್ಲವೂ ಇದ್ದೇ ಇರುತ್ತವೆ. ಅವುಗಳಿದ್ದರೇನೇ ಊರು ಎನ್ನಿಸಿಕೊಳ್ಳುವುದು. ದಿನನಿತ್ಯದ ಜೀವನದ ರಂಗುಗಟ್ಟುವುದು ಇವುಗಳಿಂದಲೇ.
ಹಳ್ಳಿಗಳಲ್ಲಿ ಹಲಕೆಲವು ಪ್ರಮುಖರು ಇರಲೇಬೇಕು. ಶ್ರೀಮಂತಿಕೆಯಿಂದ
ತಮ್ಮ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳುವ, ದೊಡ್ಡವರಾಗಬಯಸುವವರು ಅನೇಕ ತರಲೆಗಳನ್ನು ಏಳಿಸುತ್ತಿರುತ್ತಾರೆ. ಇವೆಲ್ಲವೂ ಅಲ್ಲಿಯವರಿಗೆ ಒಂದು ಬಗೆಯ ಪುಕ್ಕಟೆ ಮನರಂಜನೆಯೂ ಹೌದು. ಇಲ್ಲಿ ಕಾರಂತರು ಹಳ್ಳಿಯ ಇಂತಹ ಕೆಲವು ಕುಳಗಳನ್ನು ಪರಿಚಯಿಸಿದ್ದಾರೆ.
ಸೀತೈತಾಳರು, ನಾಗಯ್ಯ ಶೆಟ್ಟರು, ಜನ್ನ ಪೈಗಳು, ಮೀಸೆ ಸುಬ್ಬ, ಮೊಗೆರ ಅಣ್ಣು, ಅಕ್ಕಸಾಲಿ ತಿಮ್ಮಪ್ಪ, ಪಾಟಾಳಿ ಪರಮಯ್ಯ, ಅಕ್ಕಣ್ಣಿ ಹೆಂಗಸು ಹೀಗೆ ಇನ್ನನೇಕರ ವೃತ್ತಿ, ಮನೋವೃತ್ತಿಗಳನ್ನೂ, ರೀತಿ ನೀತಿಗಳನ್ನು ಅಂದಿನ ಸಾಮಾಜಿಕ ಜೀವನದಲ್ಲಿ ಜಾತಿಯ ಸ್ತರಗಳು ವಹಿಸುವ ಪಾತ್ರಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಹಳ್ಳಿಗಳಲ್ಲಿಯ ಬಡತನ ಸಿರಿತನಗಳು,ಮತ್ಸರ, ಅಹಂಭಾವ, ಸ್ವರ್ಧೆಗಳು ಮೊದಲಾದವುಗಳು ಜಾತಿಯನ್ನೂ ಮೀರಿ ಎಲ್ಲರಲ್ಲೂ ಇರುವುದನ್ನು ಕಾಣಬಹುದು.
ಒಟ್ಟಾರೆ, ಹಳ್ಳಿಯ ಸೊಗಡನ್ನು ಕಣ್ಣ ಮುಂದೆ ಕಟ್ಟಿನಿಲ್ಲಿಸುವ ಚಂದದ ಕೃತಿ. ನೀವೂ ಓದಿ. ಇಷ್ಟವಾಗದೇ ಇರದು.
ಧನ್ಯವಾದಗಳು.
–ಕವಿತಾ ಭಟ್
