K. P. Poornachandra Tejaswi, Dr, V. V. Belavadi
Publisher - ಪುಸ್ತಕ ಪ್ರಕಾಶನ
- Free Shipping Above ₹200
- Cash on Delivery (COD) Available
Pages -
Type -
ಮೊದಲ ಮಾತು
ಮನುಷ್ಯ ತನಗೆ ಉಪಯುಕ್ತವಲ್ಲದ್ದು ಭೂಮಿಗೆ ಅನಗತ್ಯವಾದುದು. ಎಂದು ತಿಳಿದಿರುವುದರಿಂದ ಹುಳು ಹಪ್ಪಟೆಗಳತ್ತ ಗಮನ ಕೊಡುವುದು ಕಡಿಮೆ, ಅಥವಾ ಅವುಗಳಿಂದ ಏನಾದರೂ ತೊಂದರೆಯಾದಾಗ ಅವುಗಳನ್ನು ನಾಶಮಾಡಲಷ್ಟೆ ಗಮನಿಸುತ್ತಾನೆ. ಹೀಗಾಗಿ ಹುಲಿ, ಸಿಂಹ, ಆನೆಗಳಂಥ ಕಾಡುಮೃಗಗಳ ಬಗ್ಗೆ ಕೊಟ್ಟಷ್ಟು ಗಮನ ನಾವು ಸುತ್ತಮುತ್ತ ಇರುವ ಹಕ್ಕಿಗಳ ಬಗ್ಗೆ ಹರಿಸುವುದಿಲ್ಲ. ಹಕ್ಕಿಗಳ ಬಗ್ಗೆ ಕೊಟ್ಟಷ್ಟು ಗಮನ ಹುಳು ಹಪ್ಪಟೆಗಳಿಗೆ ಕೊಡುವುದಿಲ್ಲ. ಅವು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವುದರಿಂದ ಮತ್ತು ಇತರರ ಗಮನಕ್ಕೆ ಬೀಳದೆ ಬದುಕುವುದರಲ್ಲಿ ಪಾರಂಗತವಾಗಿರುವುದರಿಂದ ಎಷ್ಟೋ ಜನ ಕೀಟಗಳ ಅದ್ಭುತ ಲೋಕಕ್ಕೆ ಅಜ್ಞಾತರಾಗೇ ಜೀವಮಾನ ಕಳೆಯುತ್ತಾರೆ. ಪರಿಸರ ಎಂದರೆ ಎಲ್ಲೋ ಇರುವ ಕಾಡುಗಳು, ಪರ್ವತಗಳು, ನದಿಗಳು ಮುಂತಾದವು ಮಾತ್ರ ಎಂದು ಊಹಿಸಿ ಪರಿಸರ ಎನ್ನುವುದು ತಮ್ಮಿಂದ ಪ್ರತ್ಯೇಕವಾದ ಯಾವುದೋ ಒಂದು ವಸ್ತು ಎಂದು ತೀರ್ಮಾನಿಸುತ್ತಾರೆ. ಕಾಡುಗಳಲ್ಲೂ ಪೇಟೆಗಳಲ್ಲೂ ತಾವು ಹುಟ್ಟಿದಾಗಿಂದಲೂ ತಮ್ಮನ್ನು ಸುತ್ತುವರಿದಿರುವ ಅಸಂಖ್ಯ ಕೀಟಗಳ ಜೀವಜಾಲದ ಪರಿಸರ ಅನೇಕರ ಗಮನಕ್ಕೆ ಬರುವುದೇ ಇಲ್ಲ, ಅನೇಕ ಮಿಲಿಯ ವರ್ಷಗಳಿಂದ, ಮನುಷ್ಯ ಉದ್ಭವಿಸುವುದಕ್ಕೆ ಎಷ್ಟೋ ಮೊದಲಿನಿಂದ ಜೀವನ ಸಂಗ್ರಾಮದಲ್ಲಿ ಬದುಕಿ ಬಂದಿರುವ ಕೀಟಗಳು ಭೂಮಿಯ ಮೇಲೆ ಮನುಷ್ಯ ಕಂಡು ಕೇಳಿಲ್ಲದಂಥ ಪ್ರಳಯಗಳನ್ನೂ ತಳಮಳಗಳನ್ನೂ ಎದುರಿಸಿವೆ. ವಾತಾವರಣದ ಎಲ್ಲ ರೌದ್ರಾವತಾರಗಳನ್ನೂ ಎದುರಿಸಿ ಹೊಂದಾಣಿಕೆ ಮಾಡಿಕೊಳ್ಳುತ್ತ ಬದುಕುವಲ್ಲಿ ಯಶಸ್ವಿಯಾಗಿವೆ. ಕಣ್ಣು ಬಿಟ್ಟಲ್ಲೆಲ್ಲ ಕಾಣಸಿಗುವ ಈ ಕ್ಷುದ್ರ ಅದ್ಭುತ ಜೀವಿಗಳ ಕೌತುಕಮಯ ಜೀವನ ವಿಧಾನದತ್ತ ನಾವು ಗಮನ ಹರಿಸುತ್ತಾ ಬ೦ದ೦ತೆ ನಿಧಾನವಾಗಿ ಪರಿಸರ ನಮಗೆ ತತ್ ಕ್ಷಣದ ವರ್ತಮಾನವಾಗುತ್ತ ಬರುತ್ತದೆ. ಈ ಪುಸ್ತಕದ ಕತೆಗಳು ಓದುಗರಿಗೆ ಈ ಪ್ರಯತ್ನದಲ್ಲಿ ಸಹಾಯ ಮಾಡಲಿ, ನಮ್ಮೆಲ್ಲರನ್ನೂ ಒಳಗೊಂಡ ಜೀವಜಾಲದ ವಿಶ್ವರೂಪ ಅರಿಯುವತ್ತ ಅವರು ಸಾಗಲಿ ಎಂಬುದು ನಮ್ಮ ಹಾರೈಕೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಡಾ. ವಿ. ವಿ. ಬೆಳವಾಡಿ