Skip to product information
1 of 2

R. Lakshminarayana

ಹಾಲು ಮತ್ತು ಹಂಸ

ಹಾಲು ಮತ್ತು ಹಂಸ

Publisher -

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 264

Type - Paperback

ಡಾ. ಆರ್. ಲಕ್ಷ್ಮೀನಾರಾಯಣ ಅವರು ಕನ್ನಡ, ಸಂಸ್ಕೃತ ಇಂಗ್ಲಿಷ್, ಹಿಂದಿ ಮತ್ತು ಭಾರತದ ಪ್ರಾಚೀನ ಭಾಷೆಗಳ ಸಾಹಿತ್ಯ ಅಧ್ಯಯನದಲ್ಲಿ ತೊಡಗಿರುವ ಪ್ರಮುಖ ವಿದ್ವಾಂಸರು. ಅವರ ಪ್ರಾಕೃತ- ಕನ್ನಡ ಬೃಹತ್ ನಿಘಂಟು, ಪಾಲಿ ಕನ್ನಡ ಪದಕೋಶ, ಅನುವಾದಗಳು, ಅವರ ವಿದ್ವತ್ತಿಗೆ ನಿದರ್ಶನವಾಗಿವೆ, ಕುಂತಕನ ವಕ್ರೋಕ್ತಿ ಜೀವಿತವನ್ನು ಅಚ್ಚುಕಟ್ಟಾಗಿ ಅನುವಾದಿಸಿದ್ದಕ್ಕಾಗಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಅವರು ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲೂ ಹಲವಾರು ಕೃತಿಗಳನ್ನು ಪ್ರಕಟಸಿದ್ದಾರೆ. ಜಗತ್ತಿನ ಶ್ರೇಷ್ಠವಾದ ಚಿಂತನೆಗಳು ಕನ್ನಡಕ್ಕೆ ಬರಬೇಕೆಂಬುದು ಅವರ ಆಶಯ ಅವರ ವಿಮರ್ಶಾ ಬರಹಗಳನ್ನು ಓದಿದಾಗ ದೇಶೀಯ ಮತ್ತು ಜಾಗತಿಕ ಚಿಂತನೆಗಳನ್ನು ಕನ್ನಡ ಸಂಸ್ಕೃತಿಯ ಚಿಂತನಧಾರೆಗೆ ಅನ್ವಯಿಸಿ ಅಧ್ಯಯನ ಮಾಡಿರುವ ವಿದ್ವತ್ತೂರ್ಣವಾದ ಕ್ರಮವೊಂದು ಕಂಡುಬರುತ್ತದೆ. ಸಾಹಿತ್ಯಕೃತಿಯ ಪಠ್ಯದ ಒಡಲನಿಂದಲೇ ವಿಮರ್ಶೆಯ ತಾತ್ವಿಕ ಚೌಕಟ್ಟುಗಳನ್ನು ರೂಪಿಸಿಕೊಂಡು ಅದಕ್ಕೆ ಪೂರಕವಾಗಿ ಪುರಾಣ, ಧರ್ಮ, ತತ್ವಶಾಸ್ತ್ರ, ಚರಿತ್ರೆಯನ್ನು ಅವಶ್ಯಕತೆಗನುಗುಣವಾಗಿ ಅನುಸಂಧಾನಗೊಳಿಸಿ ಸಾಹಿತ್ಯ ಕೃತಿಯ ಒಳನೋಟಗಳನ್ನು ಜೋಡಿಸುತ್ತಾರೆ. ಹರಿಹರನ ರಗಳೆಗಳ ಗದ್ಯ, ರತ್ನಾಕರ ವರ್ಣಿಯ ಕಾವ್ಯದ ಅನನ್ಯತೆ, ಶರಣರ ಕ್ರಾಂತಿ, ಪಂಪಭಾರತದ ಒಂದು ಪದ್ಯದ ಪಾಠ ಮತ್ತು ಅರ್ಥ ಜಿಜ್ಞಾಸೆ, ಕಾಳಿದಾಸನ ಕಾವ್ಯಾಭಿವ್ಯಕ್ತಿಯ ಅನನ್ಯತೆ, ಶ್ರೀರಾಮಾಯಣ ದರ್ಶನಂ-ಒಂದು ವಿಮರ್ಶಾತ್ಮಕ ಅಧ್ಯಯನ – ತೌಲನಿಕ ದೃಷ್ಟಿ, ಮುಂತಾದ ಲೇಖನಗಳಲ್ಲಿ ಕಥೆಯ ವಿವರಣೆ. ರಸಗ್ರಹಣಗಳಿಗಷ್ಟೇ ಸೀಮಿತವಾಗದೆ, ಆಯಾ ಕೃತಿಗಳ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಮಹತ್ವವನ್ನು ವಿಶ್ಲೇಷಿಸುವ ಕ್ರಮ ಅನನ್ಯವಾಗಿದೆ. ಸಾಹಿತ್ಯಕೃತಿಗಳಲ್ಲಿನ ವಿಚಾರಗಳು ವರ್ತಮಾನಕ್ಕೆ ಪ್ರಸ್ತುತವೆನಿಸುವಂತೆಯೂ ಚರ್ಚಿಸಲಾಗಿದೆ. ಕೃತಿಯ ವಸ್ತು, ಪಾತ್ರಗಳ ವಿವೇಚನೆ, ನಿರೂಪಣೆ, ತಂತ್ರ ಕಥನಗಾರಿಕೆ, ಆಶಯ, ಆಕೃತಿಗಳನ್ನು ಒಂದು ಸಾವಯವ ಸಮಗ್ರೀಕರಣ ಶಿಲ್ಪದ ನೆಲೆಯಲ್ಲಿ ಹಾಗೂ ಕನ್ನಡ ದೇಶೀಯತೆಯ ಮತ್ತು ಜಾಗತಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿರುವುದರಿಂದ ಇಲ್ಲಿನ ಲೇಖನಗಳಿಗೆ ಅಧಿಕೃತತೆ ಬಂದಿದೆ. ವಿದ್ವತ್ತು ಅನ್ವೇಷಣೆಯ ಪ್ರವೃತ್ತಿ, ತಾರ್ಕಿಕವಾದ ಆಲೋಚನೆ, ಮಾತ್ರವಲ್ಲದೆ, ಯಾವ ವಿವಾದಗಳಿಗೂ ಕಟ್ಟುಬೀಳದೆ ಸಂಯಮದಿಂದ ಕನ್ನಡ ಸಂಸ್ಕೃತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ತಾತ್ವಿಕ ವಿಚಾರಗಳನ್ನು ಶೋಧಿಸುವುದನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ಇದರಿಂದಾಗಿ ಇಲ್ಲಿನ ವಿಮರ್ಶೆಗೆ ತೌಲನಿಕ ನೆಲೆ ತಾನೇತಾನಾಗಿ ಬಂದುಬಿಟ್ಟಿದೆ. ಎಚ್. ಜೆ. ಲಕ್ಕಪ್ಪಗೌಡರ ರಾಮಾಯಣ ದರ್ಶನಂ-ಒಂದು ವಿವೇಚನಾತ್ಮಕ ಅಧ್ಯಯನ, ಎಚ್. ಎಸ್. ವೆಂಕಟೇಶ ಮೂರ್ತಿಯವರ ಬುದ್ಧಚರಣ ಹಾಗೂ ರತ್ನಾಕರವರ್ಣಿಯ ಭರತೇಶವೈಭವವನ್ನು ಕುರಿತ ಲೇಖನಗಳಲ್ಲಿ ತೌಲನಿಕ ಅಧ್ಯಯನವು ಯಾವ ಬಗೆಯದಾಗಿರಬೇಕೆಂಬುದಕ್ಕೆ ಉತ್ತಮ ನಿದರ್ಶನ. ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವಾಗ, ಭಾಷೆ, ಶೈಲಿ, ವಿನ್ಯಾಸಗಳನ್ನು ಚರ್ಚಿಸುತ್ತಾ ಆ ಕೃತಿಯ ತಾತ್ವಿಕತೆಯನ್ನು ಅನಾವರಣಗೊಳಿಸುವ ಕ್ರಮ ಇಲ್ಲಿದ್ದು ಮುಂದಿನ ಓದಿಗೆ ಇವು ಪ್ರೇರಕವಾಗಬಲ್ಲವು.

-ಡಾ. ಎಚ್. ದಂಡಪ್ಪ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)