ನಾವು ನೋಡುವ ಬಹುತೇಕ ಸಿನಿಮಾಗಳು, ಓದುವ ಕಾದಂಬರಿಗಳು ಕಾಲ್ಪನಿಕವಾದವುಗಳೇ. ಕಲ್ಪನೆಗಳಿಗೆ ಬರಹಗಾರ ತನ್ನ ಅನುಭವ ಮತ್ತು ಕೆಲವು ವಾಸ್ತವಿಕ ಘಟನೆಗಳನ್ನು ದೃಢ ಪಾತ್ರಗಳೊಂದಿಗೆ ಸೇರಿಸಿದಾಗ ಅಚ್ಚುಕಟ್ಟಾದ ಒಂದು ಕೃತಿ ನಮಗೆ ಓದಲು ಸಿಗುತ್ತದೆ. ವಾಸ್ತವ,ಕಲ್ಪನೆ ಮತ್ತು ಅನುಭವಗಳ ಮಿಶ್ರಣ ಪದಚಿಹ್ನ ಅವರ "ಸ್ವಪ್ನಗಿರಿ ಡೈರೀಸ್."
ಇಲ್ಲಿ ಎಲ್ಲರದ್ದೂ ಒಂದೊಂದು ಕಥೆ ಇರುತ್ತದೆ. ಎಲ್ಲರೂ ಕಥೆ ಹೇಳುತ್ತಾರೆ ಎನ್ನುವ ಲೇಖಕರು ತಮ್ಮ ಕಾಲ್ಪನಿಕ ಕಥೆಯನ್ನು ಹೇಳಲು "ಸ್ಲೀಪ್ ಪ್ಯಾರಲಿಸಿಸ್" ಎಂಬ ಮನೋವೈದ್ಯಕ್ಕೆ ಸಂಬಂಧಿಸಿದ ವಿಷಯದ ನೆರವನ್ನು ಪಡೆದುಕೊಂಡಿರುವುದು ವಿಶೇಷ. ಸ್ಲೀಪ್ ಪ್ಯಾರಲಿಸಿಸ್ ಎಂದರೇನು? ಅದರ ಲಕ್ಷಣಗಳೇನು? ಬಗೆಗಳಾವುವು? ಎನ್ನುವುದರೆಲ್ಲವುಗಳ ಬಗ್ಗೆ ಒಂದಷ್ಟು ಮಾಹಿತಿ ಕಾದಂಬರಿಯಲ್ಲಿದೆ. ಈ ಪ್ರಯತ್ನ ನನಗೆ ಇಷ್ಟವಾಯಿತು.
ಹುಡುಕಾಟದ ಜೀವನವೇ ಸ್ವಾರಸ್ಯ ಎಂದು ಏನನ್ನೋ ಹುಡುಕಲು ಹೊರಟ ಲೇಖಕರು ಕಟ್ಟಿಕೊಡುವ ಸ್ವಪ್ನಗಿರಿ ಎಂಬ ಊರು ಮತ್ತು ಅಲ್ಲಿನ ಪರಿಸ್ಥಿತಿ, ಆಧುನಿಕ ಬೆಳವಣಿಗೆಗಳು ನಂಬಲು ಕೊಂಚ ಅಸಾಧ್ಯವನಿಸಿದರೂ ಕಾಲ್ಪನಿಕವಾದ್ದರಿಂದ ನಂಬಲೇಬೇಕಾಗುತ್ತದೆ. ಕಾರಣ, ಕಲ್ಪನೆಗೆ ಕೊನೆ ಅಥವಾ ಮಿತಿಯಿಲ್ಲ.
ಕನ್ನಡದಲ್ಲಿ ಹೊಸ ರೀತಿಯ ರೋಚಕ ಕಾದಂಬರಿಯನ್ನು ಕಡಿಮೆ ಸಮಯದಲ್ಲಿ ನೀವು ಓದಲು ಬಯಸುವವರಾಗಿದ್ದರೆ "ಸ್ವಪ್ನಗಿರಿ ಡೈರೀಸ್" ಓದಬಹುದು.
***
ಸ್ವಪ್ನಗಿರಿ ಡೈರೀಸ್ ಕಾದಂಬರಿಯನ್ನು ಕೊಳ್ಳಲು ಭೇಟಿ ನೀಡಿ : https://harivubooks.com/products/swapnagiri-diaries-novel-pradachihna-harivu-books-kannada-book
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com
]]>
ಒಮ್ಮೆ ಊರಿನಲ್ಲಿ ಟೆಂಪೋ ಹತ್ತಿ ಕೂತಿದ್ದೆ (ಟೆಂಪೋ ಅಂದ್ರೆ ಉತ್ತರ ಕನ್ನಡ ಜನರಿಗೆ ಅರ್ಥ ಆಗತ್ತೆ. ಬಸ್ ತರಾನೇ ಓಡಾಟಕ್ಕೆ ಅಂತ ಇರುವ ಖಾಸಗಿ ವಾಹನ.) ಟೆಂಪೋ ಕಿಟಕಿಯಿಂದ ಹೊರಗಿನ ದೃಶ್ಯ ನೋಡ್ತಾ ಇದ್ದೆ. ಏನು ಕಂಡಿತು ಅಂತ ಇವಾಗ ಸರಿಯಾಗಿ ನೆನಪಿಲ್ಲ.
ಆವಾಗ ಆ ಕ್ಷಣದಲ್ಲಿ ನನ್ನ ಎದೆಬಡಿತ ತಪ್ಪಿತ್ತು. ಅಯ್ಯೋ... ಈ ಟೆಂಪೋ ಕಿಟಕಿ ಇಂದ ಕಾಣುತ್ತಿರೋ ದೃಶ್ಯವನ್ನು ನಾನು ಮೊದಲು ಎಲ್ಲೋ ನೋಡಿದ್ದೀನಿ. ಇದೇ ಚಲನೆಗಳು. ಮುಂದೆ ಎರಡು ಕ್ಷಣದಲ್ಲಿ ಇದೇ ದೃಶ್ಯ ಬರುತ್ತೆ ಅಂತ ನನ್ನ ಮನಸ್ಸು ಹೇಳ್ತಾ ಇತ್ತು. ನಿಜವಾಗಲೂ ನಡೆದಿತ್ತು. ಆ ಕ್ಷಣ ನಾನು ಬೆವರಿ ಹೋಗಿದ್ದೆ.
ಇದಿಷ್ಟು ಆಗಿದ್ದು ಹೆಚ್ಚು ಅಂದರೆ 10 ಸೆಕೆಂಡ್ಗಳ ಕಾಲ ಅಷ್ಟೇ. ಆದರೆ ಆ ಘಟನೆ 15 ವರ್ಷಗಳ ನಂತರವೂ ನನ್ನ ನೆನಪಿನಲ್ಲಿ ಹಚ್ಚ ಹಸಿರು. ಈ ಅನುಭವ ನನಗೆ ಆಮೇಲೂ ತುಂಬಾ ಸಲ ಆಗಿದೆ. ಇದಕ್ಕೆ ದೇಜಾವು ಅನ್ನುತ್ತಾರೆ. ದೇಜಾವು ತುಂಬಾ ಜನಕ್ಕೆ ಆಗುತ್ತೆ ಅಂತ ನನಗೆ ಗೊತ್ತಾಗಿದ್ದು ತುಂಬಾ ತಡವಾಗಿ.
ಇದೆಲ್ಲಾ ಘಟನೆ ನೆನಪಾಗಿದ್ದು ನಾನು ಸ್ವಪ್ನಗಿರಿ ಡೈರೀಸ್ ಕಾದಂಬರಿ ಓದಿದ ಮೇಲೆ.
ಈ ದೇಜಾವು ಅನ್ನೋ ವಿಷಯ ನನ್ನ ಅನುಭವ ಆಗಿರೋದ್ರಿಂದ ಈ ಪುಸ್ತಕ ನನ್ನನ್ನು ಬೇಗ ಒಳಕ್ಕೆ ಎಳೆದುಕೊಂಡು ಹೋಯಿತು. ಪುಟ್ಟ ಪುಸ್ತಕ ಸರಿಯಾಗಿ ಕೂತ್ರೆ ಎರಡು ತಾಸಲ್ಲಿ ಮುಗಿಸಬಹುದು. ಕಥೆ ತುಂಬಾ ವೇಗವಾಗಿ ಸಾಗುತ್ತದೆ.
ಹರೆಯವೇ ಹಾಗೆ ಹುಚ್ಚು ವೇಗ, ಆವೇಗ. ಅದು ದುಡಿಮೆಯಲ್ಲೇ ಇರಲಿ, ಪ್ರೇಮದಲ್ಲೇ ಇರಲಿ, ನಿರ್ಧಾರಗಳಲ್ಲಿಯೇ ಇರಲಿ, ಹುಂಬುತನವೇ ಇರಲಿ. ಅಂತಹ ಹರಯದಲ್ಲಿ ಇರುವ ನಾಯಕ ಹುಂಬ. ಅವನಿಗೆ ಒಂದು “ಸ್ಲಿಪ್ ಪ್ಯಾರಲಸಿಸ್” ಎನ್ನುವ ಕಾಯಿಲೆ ಎಂದರೆ, ಕಾಯಿಲೆ ಅಲ್ಲ ಅನ್ನೋ ತರಹದ ಕಾಯಿಲೆ. ಕನಸಿನಲ್ಲಿ ಏನೇನು ಕಾಣುತ್ತಾನೆ. ಆವಾಗ ಆವಾಗ ಅನುಭವಕ್ಕೆ ಬರುವ ದೇಜಾವುಗಳು. ಅದರ ಬೆನ್ನು ಹತ್ತಿ ಒಂದೂರಿನ ರಹಸ್ಯ ಬಿಡಿಸಲು ಹೋಗುತ್ತಾನೆ. ಅಲ್ಲಿ ಏನಾಗತ್ತೆ ಅನ್ನೋದೇ ಕಥೆ.
***
ಸ್ವಪ್ನಗಿರಿ ಡೈರೀಸ್ ಕಾದಂಬರಿಯನ್ನು ಕೊಳ್ಳಲು ಭೇಟಿ ನೀಡಿ : https://harivubooks.com/products/swapnagiri-diaries-novel-pradachihna-harivu-books-kannada-book
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ https://harivubooks.com/
]]>ಆಟಿಕೆಗಳು, ಫನ್ ಬೋರ್ಡ್ಗಳು, ಫ್ಲ್ಯಾಶ್ಕಾರ್ಡ್ಗಳು ಮುಂತಾದವುಗಳನ್ನು ರಿಟರ್ನ್ ಗಿಫ್ಟ್ಗಳಾಗಿ ಕೊಡುವ ನೀವು ಈ ಪುಸ್ತಕಗಳನ್ನು ಯಾವುದೇ ಅನುಮಾನಗಳಿಲ್ಲದೆ ಕೊಡಬಹುದು. ತಂದೆ ತಾಯಿಯರೇ ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ಕನ್ನಡ ವರ್ಣಮಾಲೆಯ ಪರಿಚಯದಲ್ಲಿ, ಕಲಿಕೆಯಲ್ಲಿ, ಪುಸ್ತಕಗಳ ಓದುವಿನಲ್ಲಿ, ಸುತ್ತಮುತ್ತಲಿನ ಪರಿಸರದ ಬಗ್ಗೆ ಆಸಕ್ತಿ ಹುಟ್ಟಿಸಲು ಬಹಳ ಉಪಯೋಗಕಾರಿ. ಈ ಪುಸ್ತಕಗಳಲ್ಲಿ ಬರುವ ಪ್ರಾಣಿಗಳೊಂದಿಗೆ ಮಾತಾಡುವ ರಿಕ್ಷವೋ, ಮುದ್ದು ಹುಡುಗಿ ಚಿನ್ನಿಯ ಕತೆಯೋ, ತಾಳಬದ್ಧವಾದ ಪದ್ಯಗಳೋ ಅಥವಾ ಗೋಲಿ ಆಟವೋ ಮಕ್ಕಳನ್ನ ಮಾಯಾಲೋಕಕ್ಕೆ ಕರೆದೊಯ್ಯುವುದು ಖಂಡಿತ.
ಹರಿವು ಬುಕ್ಸ್ನ ಎಲ್ಲಾ ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿ ನೀಡಿ :
https://harivubooks.com/collections/harivu-publication-childrens-book
ಇನ್ನಷ್ಟು ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿ ನೀಡಿ :
https://harivubooks.com/collections/kids-books-kannada
]]>
ನಾನಿನ್ನೂ ಹೈಸ್ಕೂಲಿನಲ್ಲಿ ಇದ್ದೆ ಎಂದು ಕಾಣುತ್ತೆ. ಆಗೆಲ್ಲಾ ನಾವಿರುವ ಹಳ್ಳಿ ಅಥವಾ ಊರಿನ ಹೊರಗಡೆ ಫೋನಿನಲ್ಲಿ ಮಾತನಾಡಲು ಟ್ರಂಕ್ ಕಾಲ್ ಮಾಡಬೇಕಿತ್ತು. ಒಮ್ಮೆ ನನ್ನ ಸೋದರತ್ತೆಯ ಮಗಳು ನಂದಕ್ಕನ ಜೊತೆ ಮಾತನಾಡುತ್ತಾ, ʻಈ ಟ್ರಂಕ್ ಕಾಲ್ ಬದಲು, ಲೋಕಲ್ ಕಾಲ್ ಥರ ಎಲ್ಲಾ ಕಡೆಗೆ ಫೋನ್ ತಿರುಗಿಸೋ ಥರ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ವಾ?ʼ ಎಂದು ಹೇಳಿದೆ.
ಟಿವಿ ಇನ್ನೂ ಹಳ್ಳಿಗಳಿಗೆ ಬಂದಿಲ್ಲದ ಕಾಲದಲ್ಲಿ, ನಂದಕ್ಕ ಜೋರಾಗಿ ನಕ್ಕುಬಿಟ್ಟರು. ʻಹಾಗೇನಾದ್ರೂ ಮಾಡಿದ್ರೆ, ಮನೆಯಲ್ಲಿ ಅಡುಗೆ ಮಾಡೋವ್ರು ಯಾರು? ಹೆಂಗಸರೆಲ್ಲ ಫೋನ್ ಹತ್ತಿರಾನೇ ಕೂತು ಬಿಡ್ತಾರೆ ಅಷ್ಟೆ,ʼ ಎಂದು ಹೇಳಿದರು.
ಇನ್ನು ಕೆಲವೇ ವರ್ಷಗಳಲ್ಲಿ ಭಾರತಕ್ಕೆ ʻಸಿ ಡಾಟ್ʼ ಎನ್ನುವ ಯೋಜನೆ ಬಂದು, ʻಎಸ್ ಟಿ ಡಿʼ ಎನ್ನುವ ಪದ್ದತಿ ಬರುತ್ತದೆ ಎನ್ನುವುದರ ಕಲ್ಪನೆ ನನಗಾಗಲೀ, ನಂದಕ್ಕನಿಗಾಗಲೀ ಇರಲಿಲ್ಲ. ಮೊಬೈಲ್ ಫೋನ್ ಗಳ ಬಗ್ಗೆ ಯಾವುದೇ ಕನಸುಗಳನ್ನು ಕಾಣುವಷ್ಟು ಬುದ್ದಿ ಬೆಳೆದಿರಲಿಲ್ಲ. ನೋಡ ನೋಡುತ್ತಲೇ, ಇವೆಲ್ಲದರ ಅವಿಷ್ಕಾರವಾಗಿ, ನಾವಿಬ್ಬರೂ ಆ ಪ್ರಪಂಚದಲ್ಲಿ ಬದುಕುತ್ತಿದ್ದೇವೆ.
ಮನುಷ್ಯ ಎನ್ನುವ ಪ್ರಾಣಿ ಸಂಘ ಜೀವಿಯಾಗಿ ಸುಮಾರು ಹದಿನಾಲ್ಕು ಸಾವಿರ ವರ್ಷಗಳಾಗಿರಬಹುದು. ಅಂದಿನಿಂದ, ಅವಿಷ್ಕಾರ ಎನ್ನುವುದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕಳೆದ ಮೂರ್ನಾಲ್ಕು ಶತಮಾನಗಳಿಂದ, ಅವಿಷ್ಕಾರಕ್ಕೆ ವಿಜ್ಞಾನದ ಲೇಪ ಸೇರಿ, ಅವಿಷ್ಕಾರಗಳ ವೇಗ ವೃದ್ದಿಯಾಗುತ್ತಲೇ ಹೋಗುತ್ತಿದೆ. ನಾವು ನೋಡುತ್ತಿರುವ ಕಳೆದ ಎರಡು ದಶಕಗಳಲ್ಲಂತೂ, ಅವಿಷ್ಕಾರದ ವೇಗಕ್ಕೆ ಮನುಷ್ಯರು ಮತ್ತು ಇತರ ಪ್ರಾಣಿಗಳು ಹೊಂದಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಮೊದಲೆಲ್ಲ ಈ ವೈಜ್ಞಾನಿಕ ಅವಿಷ್ಕಾರಗಳು ಮಾನವನ ಜೀವನವನ್ನು ಸುಲಭ ಮತ್ತು ಸುರಕ್ಷಿತ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳಾದರೆ, ಮುಂದಿನ ದಿನಗಳಲ್ಲಿ ಅವು ವ್ಯಾಪಾರೀಕರಣ ಮತ್ತು ಸಂಪತ್ತು ಕ್ರೂಢೀಕರಣದ ನಿಟ್ಟಿನಲ್ಲಿ ಹೆಜ್ಜೆ ಹಾಕಿದವು. ಪ್ರತಿಯೊಂದನ್ನೂ ಸವಾಲಾಗಿ ಸ್ವೀಕರಿಸುವ ಮನುಷ್ಯನು, ತನ್ನ ಅವಿಷ್ಕಾರವನ್ನು ಪ್ರಕೃತಿಯ ನಿಯಮವನ್ನು ಮೀರಿ ನಿಲ್ಲಲೂ ಸಹ ಪ್ರಯತ್ನಿಸಿ, ಅದರಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾನೆ ಎಂದು ಹೇಳಬಹುದು. ಆದರೆ, ಪ್ರಕೃತಿಯು ತನ್ನ ನಿಯಮ ಮೀರಿದವರ ವಿರುದ್ದ ಅದರದೇ ರೀತಿಯಲ್ಲಿ ಪ್ರತಿಕಾರ ತೆಗೆದುಕೊಳ್ಳುವ ವಿಧಾನವನ್ನು ಹೊಂದಿದೆ ಎನ್ನುವುದನ್ನು ಮನುಷ್ಯ ತಿಳಿದುಕೊಳ್ಳುವ ಹೊತ್ತಿಗೆ ಬಹಳಷ್ಟು ತಡವಾಗಿದೆ ಎಂದೇ ಹೇಳಬಹುದು.
ಇಂದಿನ ನಾಗರೀಕತೆಯ ಅತ್ಯಂತ ದೊಡ್ಡ ಜಿಜ್ಞಾಸೆ ಎಂದರೆ, ವೈಜ್ಞಾನಿಕ ಅವಿಷ್ಕಾರಗಳ ʻಲಕ್ಷ್ಮಣ ರೇಖೆ ಯಾವುದು?ʼ ಎನ್ನುವುದನ್ನು ನಿರ್ಧರಿಸುವುದು. ಮಾನವ ಕುಲದ ಉಪಯೋಗಕ್ಕಾಗಿ ಅಣು ವಿಕರಣಗಳನ್ನು ಕಂಡು ಹಿಡಿದರೂ, ಕೊನೆಗೆ ಆ ವಿಕರಣಕ್ಕೆ ದೇಹ ಹೆಚ್ಚಾಗಿ ಪ್ರದರ್ಶನವಾದ್ದರಿಂದ, ಕ್ಯಾನ್ಸರ್ ಗೆ ತುತ್ತಾದರು. ಇಂತಹ ದುರಂತಗಳಿಗೆ ಚರಿತ್ರೆಯಲ್ಲಿ ಕೊನೆ-ಮೊದಲಿಲ್ಲ. ವೈಜ್ಞಾನಿಕ ಅವಿಷ್ಕಾರಗಳ ನೈತಿಕತೆಯ ಬಗ್ಗೆ ಬಹಳಷ್ಟು ಚರ್ಚೆಗಳಾದರೂ, ʻಲಕ್ಷ್ಮಣ ರೇಖೆʼ ಎಳೆಯಲು ಯಾರೂ ಒಪ್ಪುವುದಿಲ್ಲ. ಏಕೆಂದರೆ, ಇದು ಸಂಪತ್ತಿನ ಪ್ರಶ್ನೆ ಮತ್ತು ಮುಂದೆ ಹೇಗೋ ನಡೆದು ಹೋಗುತ್ತದೆ ಎನ್ನುವ ಉಡಾಫೆ.
ಇವನ್ನೆಲ್ಲ ಯೋಚಿಸುವಾಗ ನನಗೆ ಹೋಮರ್ ಬರೆದಿರುವ ಇಲಿಯಾಡ್ ನ ಒಂದು ಸಾಲು ನೆನಪಿಗೆ ಬರುತ್ತದೆ. ಯುದ್ದಕ್ಕಾಗಿ ಟ್ರಾಯ್ ಗೆ ಹೊರಡುವ ಮುಂಚೆ ಅಖಿಲಿಸ್ ತನ್ನ ತಾಯಿಯಾದ ಥೇಟಿಸ್ ಳನ್ನು ಭೇಟಿಯಾಗುತ್ತಾನೆ. ಅಖಿಲಿಸ್ ಯುದ್ದಕ್ಕೇ ಏಕೆ ಹೋಗಲೇಬೇಕು ಎನ್ನುವುದನ್ನು ಹೇಳುವ ಥೇಟಿಸ್, ತನ್ನ ಮಗ ಯುದ್ದದಿಂದ ಹಿಂದೆ ಬರುವುದಿಲ್ಲ ಎಂದೂ ಭವಿಷ್ಯ ನುಡಿಯುತ್ತಾ, ಹೇಳುತ್ತಾಳೆ: ʻyour glory walks hand in hand with your doomʼ.
ಇದು ನನಗೆ ಬಹಳ ಇಷ್ಟವಾದ ವಾಕ್ಯ ಮತ್ತು ನನ್ನ ವೈಯಕ್ತಿಯ ಅಭಿಪ್ರಾಯದಲ್ಲಿ, ಥೆಟಿಸ್ ಮನುಕುಲಕ್ಕೆ ಕೊಟ್ಟ ಸಂದೇಶ. ಇದನ್ನು ಬಹಳಷ್ಟು ಕಡೆ ನನ್ನ status ಆಗಿ ಉಪಯೋಗಿಸುತ್ತೇನೆ ಕೂಡ.
ಇದೆಲ್ಲ ಮತ್ತೆ ನೆನಪಾಗಿದ್ದು ಡಾ ಶಾಂತಲ ಎಂಬ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಬರೆದ ಎರಡು ಪುಸ್ತಕಗಳನ್ನು ಓದುವಾಗ. ಮೊದಲನೆಯದು ʻಬಾನಂಚಿನ ಆಚೆʼ ಎಂಬ ಹತ್ತು ʻರೋಚಕ ವೈಜ್ಞಾನಿಕ ಕತೆಗಳುʼ ಪುಸ್ತಕ ಮತ್ತು ಎರಡನೆಯದು ʻದೇವರಾಗಲು ಮೂರೇ ಗೇಣುʼ ಎನ್ನುವ ಕಾದಂಬರಿ. ಎರಡು ಪುಸ್ತಕಗಳನ್ನೂ ಇತ್ತೀಚೆಗೆ ಪುಸ್ತಕ ಪ್ರಕಾಶನ ಜಗತ್ತಿಗೆ ಕಾಲಿಟ್ಟ ರತೀಶ್ ಅವರ ʻಹರಿವು ಪುಸ್ತಕʼ ಹೊರ ತಂದಿದೆ.
ತಮ್ಮ ಹತ್ತು ಸಣ್ಣ ಕಥೆಗಳಲ್ಲಿ, ಡಾ ಶಾಂತಲ ಅವರು ಬಹಳಷ್ಟು ಅವಿಷ್ಕಾರ ಮತ್ತು ಸಂಶೋಧನೆಗಳನ್ನು ವಿವರವಾಗಿ ಪರಿಚಯಿಸಿದ್ದಾರೆ. ಅದೊಂದು ಬೋರಿಂಗ್ ಪಠ್ಯದಂತೆ ಇರದೆ, ಸಾಮಾನ್ಯ ಜನರ ಮಧ್ಯೆ ನಡೆಯುವ ಸಂಭಾಷಣೆ ಮತ್ತು ನಮ್ಮ ಜೀವನದಲ್ಲೂ, ನಮಗೆ ಪರಿವೆ ಇಲ್ಲದಂತೆ ನಡೆಯುವ ಘಟನೆಗಳಂತೆ ಇವೆ. ಮುಂದೆ ಹೋಗುತ್ತಾ, ಈ ಘಟನೆಗಳು ವಿಸ್ಮಯಕಾರಿ ವೈಜ್ಞಾನಿಕ ಅವಿಷ್ಕಾರಗಳು ನಮ್ಮ ಸುತ್ತಲೂ ಸುತ್ತುತ್ತಿರುವಂತೆ ಭಾಸವಾಗುತ್ತವೆ.
ಡಾ ಶಾಂತಲ ಅವರು ಬರೀ ಕಥೆ ಹೇಳುವುದಕ್ಕಾಗಿ ವೈಜ್ಞಾನಿಕ ಅವಿಷ್ಕಾರಗಳನ್ನು ಬಳಸಿಲ್ಲ. ನಮಗರಿವಾಗದಂತೆ, ವೈಜ್ಞಾನಿಕ ಅವಿಷ್ಕಾರಗಳ ನೈತಿಕತೆಯ ಸುತ್ತಲೂ ಒಂದು ಚರ್ಚೆಯನ್ನು ಆರಂಭಿಸಿ, ಓದುಗರಲ್ಲಿ ಒಂದು ಚಿಂತನೆಯನ್ನು ಹುಟ್ಟು ಹಾಕುತ್ತಾರೆ. ನನಗೆ ಬಹಳ ಇಷ್ಟವಾದ ಅಂಶ ಎಂದರೆ, ತಮ್ಮ ಮುನ್ನುಡಿಯಿಂದ ಹಿಡಿದು, ಪ್ರತೀ ಕಥೆಯ ಆರಂಭದಲ್ಲಿ, ಐಸಾಕ್ ಅಸಿಮೋವ್, ಜೂಲ್ಸ್ ವರ್ನ್, ಸ್ಟೀಫನ್ ಹಾಕಿಂಗ್, ಐನ್ಸ್ ಟೈನ್ ನಂತಹ ಮಹಾನ್ ವಿಜ್ಞಾನಿಗಳಿಂದ ಹಿಡಿದು, ಭಾರತೀಯ ಗ್ರಂಥಗಳಾದ ಅಥರ್ವ ವೇದ, ಆಚಾರ್ಯ ಚರಕ ಮತ್ತು ಉಪನಿಷತ್ ಗಳಿಂದ ಉಲ್ಲೇಖಗಳನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ವೈದ್ಯಕೀಯ ಪ್ರಪಂಚವಲ್ಲದೆ, ಭೌತಶಾಸ್ತ್ರ, ಕಂಪ್ಯೂಟರ್ ಜಗತ್ತು, ಬಾಹ್ಯಾಕಾಶಗಳಲ್ಲಿ ಆಗುತ್ತಿರುವ ಅವಿಷ್ಕಾರಗಳನ್ನು ಸಹ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ಕುತೂಹಲಕಾರಿ ಕಥೆಗಳ ಮೂಲಕ ನಿರೂಪಿಸಿದ್ದಾರೆ. ಇದು ಲೇಖಕರಿಗೆ ವಿಷಯದ ಬಗ್ಗೆ ಇರುವ ಹಿಡಿತವನ್ನು ತೋರಿಸುತ್ತದೆ.
ʻದೇವರಾಗಲು ಮೂರೇ ಗೇಣುʼ ಕಾದಂಬರಿಯನ್ನು ಡಾ ಶಾಂತಲ ಅವರು ತಮ್ಮ ವೈದ್ಯಕೀಯ ಜಗತ್ತಿನ ಅವಿಷ್ಕಾರಗಳ ಸುತ್ತ ಹೆಣೆದಿದ್ದಾರೆ. ಅದರಲ್ಲೂ ಸಹ, ತಳಿ ತಂತ್ರಜ್ಞಾನ (genetics), ಪೀಳಿಕಟ್ಟುಗಳು (chromosomes) ಮತ್ತು ಒಂದು ಬಹುರಾಷ್ಟ್ರೀಯ ವಿಜ್ಞಾನಿಗಳು ಮಾಡಿದ ʻhuman genome projectʼ ಸುತ್ತ ಹೆಣೆದಿದ್ದಾರೆ. ಆ ಆವಿಷ್ಕಾರಗಳ ಸಾಧ್ಯತೆಗಳ ಆಳವನ್ನು ಮತ್ತು ʻmade to order babiesʼ ಎಂಬ ಕಲ್ಪನೆಯ ಸುತ್ತ ಹೆಣೆದಿರುವ ಘಟನಾವಳಿಗಳಲ್ಲಿ, ಅವುಗಳಿಂದಾಗಬಹುದಾದ ದುರಂತಗಳನ್ನು ಸಹ ವಿಶ್ಲೇಷಿಸಿದ್ದಾರೆ.
ಈ ಕಾದಂಬರಿ ಒಂದು ರೋಚಕ ಸಿನೆಮಾದಂತೆ ಸಾಗುತ್ತದೆ. ವಿಜ್ಞಾನಿಗಳ ಮಹತ್ವಾಕಾಂಕ್ಷೆ, ಕಾರ್ಪೋರೇಟ್ ಜಗತ್ತಿನ ಯೋಚನೆಗಳು ಮತ್ತು ಸಾಮಾನ್ಯ ಜನರ ದುರಾಸೆಗಳು ಒಟ್ಟಿಗೆ ಸೇರಿದಾಗ ಆಗುವ ಕಥೆ ಇದು. ಈ ಕಾದಂಬರಿ ಓದುವಾಗ ಹ್ಯಾರಿಸನ್ ಫೋರ್ಡ್ ನ ಫ್ಯುಜಿಟಿವ್ ಸಿನೆಮಾ ನೆನಪಾಯಿತು.
ಓದುಗರ ಆಸಕ್ತಿ ಹಾಳು ಮಾಡಬಾರದೆಂಬ ಉದ್ದೇಶದಿಂದ, ಈ ಪುಸ್ತಕಗಳಲ್ಲಿ ಬರುವ ಪಾತ್ರ ಅಥವಾ ಕಥಾ ಹಂದರವನ್ನು ನಾನು ಚರ್ಚಿಸಿಲ್ಲ. ಕನ್ನಡದಲ್ಲಿ ಉತ್ತಮ ವೈಜ್ಞಾನಿಕ ಕಥೆಗಳು ಬರುತ್ತಿಲ್ಲ ಎಂದು ಯಾರಾದರೂ ವಾದಿಸುತ್ತಿದ್ದರೆ, ಡಾ ಶಾಂತಲ ಅವರು ತಮ್ಮ ಕೃತಿಗಳ ಮೂಲಕ ಉತ್ತರಿಸಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ.
'ದೇವರಾಗಲು ಮೂರೇ ಗೇಣು' ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻
https://harivubooks.com/products/devaragalu-moore-genu-novel-dr-shantala-harivu-publication
ಬಾನಂಚಿನ ಆಚೆ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/kn/products/baanachina-aache-kannada-books
ಬಾನಂಚಿನ ಆಚೆ ಪುಸ್ತಕದ ಲೇಖಕಿಯಾದ ಡಾ.ಶಾಂತಲ ಅವರ ಸಂದರ್ಶನ - https://youtu.be/syknvMCqZvs
ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com
]]>ಬಹಳ ಸಮಯದ ನಂತರ ಒಂದಿಷ್ಟು ಬಾಲ್ಯದ ಗೆಳೆಯರು ಒಟ್ಟಿಗೆ ಸೇರಿ ಮಾತುಕತೆಗೆ ಕುಳಿತರೆ ಹೇಗಿರಬಹುದು? ಏನೆಲ್ಲಾ ವಿಷಯಗಳು ಬರಬಹುದು? ಒಂದು ಸ್ವಲ್ಪ ಹೊತ್ತಿನವರೆಗೆ ವರ್ತಮಾನದ ಕೆಲವು ವಿಷಯಗಳನ್ನು ಚರ್ಚಿಸಬಹುದು. ಅದಾದ ಬಳಿಕ ಮಾತುಗಳು ಮರಳುವುದು ಬಾಲ್ಯದ ದಿನಗಳಿಗೆ. ಏಕಾಂತದಲ್ಲಿ ಕುಳಿತು ಯೋಚಿಸುವಾಗಲೂ ಯಾವುದೋ ಒಂದು ಹಂತದಲ್ಲಿ ಮನಸ್ಸು ಬಾಲ್ಯಕ್ಕೆ ಮರಳುತ್ತದೆ. ಬಹಳ ದುಃಖವಾದಾಗಲೂ ಮನಸ್ಸು ಬಾಲ್ಯದ ಸುಂದರ ದಿನಗಳನ್ನು ನೆನಪು ಮಾಡಿಕೊಂಡು ಆ ದಿನಗಳೇ ಚೆನ್ನಾಗಿದ್ದವು ಎಂದುಕೊಳ್ಳುತ್ತದೆ. ಬಾಲ್ಯದಲ್ಲಿ ನಾವು ರೂಢಿಸಿಕೊಂಡ ಅದೆಷ್ಟೋ ಅಭ್ಯಾಸಗಳು ಈಗಲೂ ನಮ್ಮಲ್ಲಿ ಗಟ್ಟಿಯಾಗಿ ಬೇರೂರಿರುತ್ತವೆ. ವಿಕಾಸ್ ನೇಗಿಲೋಣಿ ಅವರು ಬರೆದ ರಥಬೀದಿ ಎಕ್ಸ್ಪ್ರೆಸ್ ನಮ್ಮ ಬಾಲ್ಯ ಮತ್ತು ಯೌವನ ದಿನಗಳತ್ತ ತಿರುಗಿ ನೋಡಲು ಒಂದೊಳ್ಳೆಯ ನೆಪವಾಗುತ್ತದೆ.
ಬಾಲ್ಯ ಮತ್ತು ಯೌವನ ನಮ್ಮನ್ನು ಆಗಾಗ ಕಾಡುವ ವಿಷಯಗಳು. ಬಾಲ್ಯ ಹಾಗೂ ಯೌವನದ ದಿನಗಳು ಒಂದು ರೀತಿಯಲ್ಲಿ, ಆಗಾಗ ಕುಡಿದು ಖುಷಿಪಡಬಹುದಾದ ಸಖತ್ ಲೆಮೆನ್ ಟೀ. ಬಹುತೇಕ ಹುಡುಗರ ದಿನಗಳು ಸುತ್ತುವುದು ಗೆಳೆಯರ ಗ್ಯಾಂಗ್ ನಡುವೆ. ಆ ದಿನಗಳಲ್ಲಿ ಎಲ್ಲರೂ ತಮಗೆ ತಾವೇ ಹೀರೋಗಳು ಎಂಬ ಫೀಲ್ನಲ್ಲಿ ಇರುತ್ತೇವೆ. ನಮ್ಮದೇ ಪ್ರಪಂಚ ಎಂಬ ಒಂದು ವಿಚಿತ್ರ ಗರ್ವ. ಮತ್ತೆ ಮತ್ತೆ ನೆನಪಿಸಿಕೊಂಡಷ್ಟು ಆ ದಿನಗಳೇ ಚೆಂದ ಅನಿಸುತ್ತದೆ. ಅಂತಹ ದಿನಗಳ ಕಥೆಯನ್ನು, ನಮ್ಮ ಅನುಭವವನ್ನು ಎಲ್ಲರೂ ಓದುವಂತೆ ಬರೆದಿದ್ದಾರೆ ವಿಕಾಸ್.
ಅಂಜಿಕೆ ಇದ್ದರೂ ಏನೋ ಒಂದು ತುಂಟಾಟ ಮಾಡಲು ಭಂಡ ಧೈರ್ಯ, ನೋಟ್ ಬುಕ್ನ ಕೊನೆಯ ಹಾಳೆಯಲ್ಲಿ ಬರೆದ ಟೀಚರ್ ಚಿತ್ರಗಳು, ಡೆಸ್ಕಿನ ಮೇಲೆ ಕೆತ್ತಿದ್ದ ಮೊದಲ ಕ್ರಷ್ ಹೆಸರು, ಹುಡುಗಿಗೆ ನೀಡಬೇಕಾಗಿದ್ದು ಫ್ರೆಂಡ್ಸ್ ಕೈಗೆ ಸೇರಿ ಹಾಸ್ಯಕ್ಕೆ ಒಳಗಾದ ಮೊದಲ ಪ್ರೇಮ ಪತ್ರ, ರಿಸಲ್ಟ್ ಬರುವ ಹಿಂದಿನ ದಿನ ಆಗುವ ಹೆದರಿಕೆ, ಗೆಳೆಯರೊಡನೆ ಆಟವಾಡಲು ಮನೆಯಲ್ಲಿ ಮಾಡುವ ನಾಟಕ, ಇಂತಹ ಅನೇಕ ವಿಷಯಗಳು ಬಾಲ್ಯ ಮತ್ತು ಹರೆಯದ ದಿನಗಳನ್ನು ಸಮೃದ್ಧಗೊಳಿಸಿರುತ್ತದೆ. ವಿಕಾಸ್ ಅವರು ಈ ಕೃತಿಯಲ್ಲಿ ಇಂತಹ ಅನೇಕ ಸಂಗತಿಗಳನ್ನು ಹದವಾಗಿ ಬೆರೆಸಿದ್ದಾರೆ ಹಾಗೂ ಆ ವಯಸ್ಸಿನ ಹುಡುಗರಲ್ಲಿ ಆಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳನ್ನು ಅಷ್ಟೇ ನಾಜೂಕಾಗಿ ನಿರೂಪಿಸಿದ್ದಾರೆ. ಓದುವಾಗ ಏನೋ ಒಂದು ರೀತಿಯ ಆನಂದವಾದರೆ, ಓದಿ ಮುಗಿಸುವಾಗ ಒಂದು ಸಮಾಧಾನ ಆಗುತ್ತದೆ.
ಹಳ್ಳಿಯಿಂದ ಪಟ್ಟಣ. ಅಲ್ಲಿನ ಹೊಸ ರಸ್ತೆಗಳು, ಹೊಸ ವಾತಾವರಣ. ಎಲ್ಲವೂ ಆ ಹುಡುಗನ ಮೇಲೆ ಪ್ರಭಾವ ಬೀರುವಂಥವೆ. ಉಡುಪಿಯ ರಥಬೀದಿಯಲ್ಲಿ ಸುತ್ತು ಹಾಕುವಾಗ ಅವೆಲ್ಲ ಅನುಭವವಾಗುತ್ತವೆ. ಮೊದಲು ನೋಡಿದ ಸಿನಿಮಾ, ಇಡ್ಲಿ ಸಾಂಬಾರ್ ತಿನ್ನಲು ಹೋಗುವ ಹೋಟೆಲು, ಅಲಂಕಾರ್. ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ, ಸಂಸ್ಕೃತ ಹಾಗೂ ಕನ್ನಡ ಮೇಷ್ಟ್ರು, ಗ್ರೇಟ್ ಎಸ್ಕೇಪ್ ಪ್ಲಾನು, ಊರಿಂದ ಊರಿಗೆ ತಿರುಗುವ ಬಸ್ಸು ಎಲ್ಲಕ್ಕಿಂತ ಮುಖ್ಯವಾಗಿ ಗೆಳೆತನ ಮತ್ತು ಹಾಸ್ಟೆಲ್. ಎಲ್ಲವೂ ಉಡುಪಿಯ ಬೇಸಿಗೆಯಲ್ಲಿ ಒಂದು ತಂಪು ಗಾಳಿಯ ಹಿತವಾದ ಅನುಭವ ನೀಡುತ್ತದೆ, ಹಾಸ್ಟೆಲ್ ಅಲ್ಲಿ ಇದ್ದವರು ಅಥವಾ ಈಗ ಇರುವವರು ಈ ಪುಸ್ತಕವನ್ನು ಓದಿದರೆ ಅವರಿಗೆ ಹೆಚ್ಚು ಆಪ್ತವೆನಿಸುತ್ತದೆ, ಬಹಳ ಬೇಗ ಕನೆಕ್ಟ್ ಆಗುತ್ತದೆ.
ಹಾಸ್ಟೆಲ್ ಹುಡುಗರೆಲ್ಲ ಸೇರಿ ಒಂದು ದೊಡ್ಡ ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಕಾರ್ಯಗತಗೊಳಿಸಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಹೋಗುವ ಸನ್ನಿವೇಶವೇ ಅದ್ಭುತ. ಯಾವ ಬಾಗಿಲಿನಿಂದ ಹೋಗುವುದು, ಎಷ್ಟೊತ್ತಿಗೆ ಹೋಗುವುದು ಎನ್ನುವ ಸಣ್ಣ ಸಣ್ಣ ವಿವರಗಳನ್ನು ಸೊಗಸಾಗಿ ಹೇಳಿದ ಭಾಗ ಹೈಲೈಟಿಂಗ್ ಅಂಶ. ಉಡುಪಿಯ ಹಬ್ಬ, ಇರುಳು, ದೀಪೋತ್ಸವದಲ್ಲಿ ಬೆಳಗುವ ಹಣತೆ, ಕಾಡುವ ಹುಡುಗಿ ಇವೆಲ್ಲ ನಮಗೊಂದು ನಾಸ್ಟಾಲ್ಜಿಯ ಫೀಲ್ ಕೊಟ್ಟು ನಮ್ಮನ್ನು ಆವರಿಸಿಕೊಳ್ಳುತ್ತದೆ.
ರಥಬೀದಿ ಎಕ್ಸ್ಪ್ರೆಸ್ ಮೂಲಕ adolescence ಸುತ್ತ ಒಂದು ಸುತ್ತು ಹಾಕಿಸಿದ್ದಕ್ಕೆ ವಿಕಾಸ್ ನೇಗಿಲೋಣಿ ಅವರಿಗೆ ಧನ್ಯವಾದ ಹಾಗೂ ಈ ಪುಸ್ತಕವನ್ನು ಮುದ್ರಣ ಮಾಡಿದ ಹರಿವು ಬುಕ್ಸ್ ಹಾಗೂ ರತೀಶ ರತ್ನಾಕರ ಅವರಿಗೆ ಕೂಡ ಅಭಿನಂದನೆ.
***
‘ರಥಬೀದಿ ಎಕ್ಸ್ಪ್ರೆಸ್’ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com
]]>ನನ್ನ ರೀಸೆಂಟ್ ಓದು
ರಥಬೀದಿ ಎಕ್ಸ್ಪ್ರೆಸ್
ಪುಟ - ೭೬
ಲೇಖಕರು - ವಿಕಾಸ್ ನೇಗಿಲೋಣಿ
ಪ್ರಕಾಶನ - ಹರಿವು ಬುಕ್ಸ್
ಸಾಮಾನ್ಯವಾಗಿ ಆತ್ಮಚರಿತ್ರೆ ಅಂದಾಗ ಮಹಾತ್ಮರ ಆತ್ಮಕಥೆ ನೆನಪಾಗುತ್ತದೆ. ಅಂತದ್ದನ್ನು ಓದುವಾಗ - "ನಾವಷ್ಟು ಕಷ್ಟಪಟ್ಟಿಲ್ಲ, ನಮಗೆ ಅದೆಲ್ಲಾ ಸಾಧ್ಯವಿಲ್ಲ ಬಿಡಪ್ಪ, ಅವರು ದೊಡ್ಡ ಮನುಷ್ಯರು!" ಅನ್ನೋ ಭಾವನೆ ಮೂಡಿ ಅವರ ಚರಿತ್ರೆಯನ್ನ ಒಂದು ಡಿಸ್ಟನ್ಸ್ ಇಂದ ನೋಡುತ್ತಿರುತ್ತೇವೆ. ಆದರೆ ವಿಕಾಸ್ ನೇಗಿಲೋಣಿಯವರ ‘ರಥಬೀದಿ ಎಕ್ಸ್ಪ್ರೆಸ್’ ಓದಿದಾಗ ಇದು ಬಹುಪಾಲು ಹುಡುಗರ ಆತ್ಮಕಥೆ ಅನ್ನಿಸೋದು ಪಕ್ಕ. ಟೀನೇಜ್ನಲ್ಲಿದ್ದಾಗ ಇರೋ ಭಯ, ಹಿಂಜರಿಕೆ, ಸಂಕೋಚ, ದಡ್ಡತನ, ಹುಂಬತನ ಎಲ್ಲವನ್ನೂ ಅನುಭವಕ್ಕೆ ತರುವ ಘಟನೆಗಳು ನನಗೆ ಬಹಳ ಹಿಡಿಸಿದವು. ಹಾಸ್ಟೆಲ್ ಮೆಟ್ಟಿಲೂ ಹತ್ತಿರದ ನನ್ನಂತ ಹುಡುಗಿಯರು ಆ ವಯಸ್ಸಿನಲ್ಲಿ - ಶಾಲೆ, ಮನೆ ಸಂಗೀತ ಕ್ಲಾಸಲ್ಲೋ ಇನ್ಯಾವುದೋ ಕ್ಲಾಸಲ್ಲೋ ನಮ್ಮ ಬಹುಪಾಲು ಸಮಯ ಕಳೆದಿರುತ್ತೇವೆ. ಹುಡುಗರಿಗೆ ಮಾತ್ರ ಸಿಗೋ ಹೊರಜಗತ್ತಿನ ಆ ಅನುಭವಗಳಿಂದ ವಂಚಿತರಾಗುತ್ತೇವೆ ಅನ್ನೋದು ನನ್ನ ಅಭಿಪ್ರಾಯ (ಸ್ವಲ್ಪ ಹೊಟ್ಟೆಉರಿ). ಈ ಪುಸ್ತಕ ಆ ಕೊರತೆಯನ್ನ ನೀಗಿಸಿದೆ.
ಅಮ್ಮನ ಸೆರಗನ್ನ ಹಿಡಿದುಕೊಂಡು ಓಡಾಡುವ, ಗಾಬರಿಯಲ್ಲಿ ಸಾಂಬರ್ ಚೆಲ್ಲಿಬಿಡುವ, ಅಳುವಾಗ ಸಂಸ್ಕೃತದಲ್ಲಿ ಅಳಬೇಕೋ ಕನ್ನಡದಲ್ಲಿ ಅಳಬೇಕೋ ಅಂತ ಗೊತ್ತಾಗದ ಈ ಹುಡುಗ ನಮ್ಮ ಕಮರ್ಶಿಯಲ್ ಸಿನಿಮಾಗಳಲ್ಲಿ ಕಾಣಸಿಗೋ ರಾಕಿ ಭಾಯ್ ಚೈಲ್ಡುಡ್ ವರ್ಶನ್ ನಂತಹ ಹುಡುಗನ ಜೊತೆ ಸೇರಿದರೆ ಯಾರು ಯಾರನ್ನ ಬದಲಾಯಿಸಬಹುದು ಎಂಬ ವಿಚಿತ್ರವಾದ ಕಲ್ಪನೆ ಬಂದು ನಗುಬಂತು. ರಥಬೀದಿಯಲ್ಲಿ ಸಿಕ್ಕ ಜನ, ಬಸ್ಸು, ಹೋಟೆಲ್ನ ಇಡ್ಲಿ, ಸೀಮೆ ಎಣ್ಣೆ ಸ್ಟವ್ ಎಲ್ಲವೂ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಆ ದಾರಿಯಲ್ಲಿ ನಮ್ಮನ್ನೂ ಟೂರ್ ಕರೆದೊಯ್ದಿದ್ದಕ್ಕೆ ವಿಕಾಸ್ ಅವರಿಗೆ ಧನ್ಯವಾದಗಳು.
]]>
ಕ್ಲಾಸುಗಳಲ್ಲಿ ಎಂಟೆಂಟ್ಲಿ ಅರವತ್ತನಾಲ್ಕು ಅನ್ನುವುದನ್ನು ಕಲಿಸುತ್ತಾರೆ. ವ್ಯಾಕರಣ ಹೇಳಿಕೊಡುತ್ತಾರೆ. ಮೊದಲ ಸಲ ಶಕುಂತಲೆಯನ್ನು ನೋಡಿದ ದುಷ್ಯಂತನಿಗೆ ಏನಾಯಿತು ಅನ್ನುವುದನ್ನು ವಿವರಿಸುತ್ತಾರೆ. ಹೇಳಬೇಕಾದ್ದನ್ನು ಹೇಳಿಕೊಟ್ಟು ಮೇಷ್ಟರು ತಮ್ಮ ತಮ್ಮ ಮನೆ ಸೇರುತ್ತಾರೆ.
ನಡುರಾತ್ರಿ ಒಂಟಿಯಾಗಿ ಮಲಗಿದ ಹುಡುಗನ ಪಕ್ಕದಲ್ಲಿಯೇ ಅದೆಲ್ಲಿಂದಲೋ ಬೆಳಕಿನ ಕೋಲೊಂದು ಬಂದು ಬೀಳುತ್ತದೆ. ಆ ಅರೆಬರೆ ಬೆಳಕಿನಲ್ಲೇ ಜ್ಞಾನೋದಯ ಆಗುತ್ತದೆ. ಅದು ಜ್ಞಾನವೋ ಸಿದ್ಧಿಯೋ ವೈರಾಗ್ಯವೋ ಯೌವನದ ಕುರುಹೋ ತನಗೊಬ್ಬನಿಗೇ ಉಂಟಾದ ಮರುಕವೋ ಜಗತ್ತಿನಲ್ಲಿ ಎಲ್ಲ ಹುಡುಗರೂ ಹುಡುಗಿಯರೂ ಹೀಗೇ ಒಂದು ಅಪರಾತ್ರಿಯಲ್ಲೇ ಯಕ್ಷಯಕ್ಷಿಯರಾಗಿ ಬದಲಾಗುತ್ತಾರೋ?
ವಿಕಾಸ್ ನೇಗಿಲೋಣಿ ತನ್ನ ಬಾಲ್ಯದ ಕತೆಯನ್ನೂ ಯೌವನದ ಕತೆಯನ್ನೂ ಬೆಸೆಯುತ್ತಾ ಹೋಗಿದ್ದಾರೆ. ಒಂದೆಡೆ ಬಾಲ್ಯದ ತಬ್ಬಲಿ ಹುಡುಗ, ಮತ್ತೊಂದೆಡೆ ಯಾರನ್ನು ತಬ್ಬಲಿ ಎಂದು ಬೆರಗುಗೊಂಡು ನಿಂತಿರುವ ಯೌವನದ ಹುಡುಗ ಏಕಕಾಲಕ್ಕೆ ಇಲ್ಲಿ ಮುಖಾಮುಖಿ ಆಗುತ್ತಾರೆ. ಹೇಳಬೇಕಾದ್ದನ್ನು ಕೊಂಚ ಮುಚ್ಚಿಟ್ಟು, ಸಂಕೋಚದ ಕೈಗೆ ಅಲ್ಲಲ್ಲಿ ಪೆನ್ನಿಟ್ಟು ಬರೆಸಿರುವಂತೆ ಕಾಣುವ ಇದು ಬಹುಶಃ ಕನ್ನಡದ ಮೊದಲ ಅಡಾಲಸೆಂಟ್ ಆತ್ಮಚರಿತ್ರೆಯೂ ಇದ್ದೀತು.
ನಮ್ಮ ಬಾಲ್ಯದಿಂದ ಯೌವನಕ್ಕೆ ನಾವು ಹೊರಡುವ ಪಯಣದ ಕತೆ ಹೆಚ್ಚು ಕಮ್ಮಿ ಒಂದೇ ಥರ ಇರುತ್ತದೆ. ನಮಗೆಲ್ಲ ಒಬ್ಬ ಪರಮಗುರು, ಅವನೇ ದಾರಿ ತೋರಿಸುವವನು. ಸೃಷ್ಟಿಯ ರಹಸ್ಯಗಳನ್ನು ಬೋಧಿಸುವವನೂ ಅವನೇ. ಮೇಷ್ಟರು ಕಲಿಸುವುದಕ್ಕಿಂತ ಅವನು ಕಲಿಸುವುದೇ ಆಕರ್ಷಕವಾಗಿರುತ್ತದೆ. ಅವನು ಕಲಿಸಿದ್ದನ್ನು ನಾವು ಪಾಲಿಸುತ್ತಾ ಕ್ರಮೇಣ ಅವನನ್ನೇ ಮೀರಿಸಿದೆವು ಎಂಬ ಹಮ್ಮಿನಲ್ಲಿ ಓಡಾಡಿಕೊಂಡಿರುತ್ತೇವೆ. ಅಲ್ಲೊಂದು ಪುಟ್ಟ ಗುಂಪು, ಸಂಕೋಚ ಮತ್ತು ಉಡಾಫೆ ಬೆರೆತ ನಿಲುವು, ದಿಟ್ಟವಾಗಲು ಯತ್ನಿಸುತ್ತಲೇ ಹಿಂಜರಿಯುವುದು, ಅನಾಥಪ್ರಜ್ಞೆಯ ಜೊತೆಗೇ ಒಂಟಿಯಾಗಿ ಬದುಕಬಲ್ಲೆ ಎಂಬ ಹಮ್ಮು- ಎಲ್ಲವೂ ಸೇರಿಕೊಂಡು ಬಡ ಹುಡುಗನ ಬಾಲ್ಯ ಅವನ ಜೀವನದ ಅತ್ಯಂತ ಶ್ರೀಮಂತ ಗಳಿಗೆಯೂ ಆಗಿಬಿಡುತ್ತದೆ.
ವಿಕಾಸ್ ನೇಗಿಲೋಣಿಯನ್ನು ಕತೆಗಾರನನ್ನೂ ಕವಿಯನ್ನೂ ಆಗಿಸಿದ ಕ್ಷಣಗಳು ಈ ಪುಟಗಳಲ್ಲಿ ಸಿಗುತ್ತವೆ. ಈ ಬರಹದ ವಿನಯವಂತಿಕೆ ಇದಕ್ಕೊಂದು ವಿಶೇಷ ಪ್ರಭೆಯನ್ನೂ ಕೊಟ್ಟಿದೆ. ವಿಕಾಸ್ ಇಡೀ ಪುಸ್ತಕದ ಉದ್ದಕ್ಕೆ ಎಲ್ಲಿಯೂ ನಾನು ಎಂಬ ಪದವನ್ನು ಬಳಸಿಲ್ಲ. ಇದರಿಂದಾಗಿ ಇದು ಆ ವಯಸ್ಸಿನ ಎಲ್ಲರ ಆತ್ಮಚರಿತ್ರೆಯೂ ಆಗಬಹುದಾದ ವಿಸ್ತಾರವನ್ನು ತಾನೇ ತಾನಾಗಿ ಪಡಕೊಂಡಿದೆ.
ಅಪ್ಪನಂತೆ ಆಗಬೇಡ ಎಂಬ ಅಮ್ಮನ ಎಚ್ಚರಿಕೆ, ತನಗೆ ಯಾರೂ ಇಲ್ಲ ಎಂಬ ಏಕಾಕಿ ಭಾವ, ತನ್ನಂತೆ ಅನೇಕರಿದ್ದಾರೆ ಎಂಬ ನೆಮ್ಮದಿ, ಬಡತನ ಮತ್ತು ಕಡುಕಷ್ಟ ಎರಡನ್ನೂ ವಿದ್ಯೆ ಮೀರಬಲ್ಲದು ಎಂಬ ಅರಿವು, ಬೆಳಗಿನ ಓದಿನಿಂದ ಪಡಕೊಂಡ ಆತ್ಮವಿಶ್ವಾಸ, ಕದ್ದು ನೋಡಿದ ಸಿನಿಮಾದ ನಾಯಕಿ ಬೋಧಿಸಿದ ನಿರ್ಲಜ್ಜ ಪಾಠ, ಕೃಷ್ಣನ ಅಂಗಳದಲ್ಲಿ ಸುಳ್ಳಾಡುವ ಪ್ರಾಮಾಣಿಕತೆ, ಅನ್ನಪೂರ್ಣೆಯ ನೆನಪು, ಪರ್ಯಾಯದ ಇರುಳು, ಅನಾಥ ಹುಡುಗಿಯೊಬ್ಬಳ ದಿಗ್ಭ್ರಮೆ- ಇವುಗಳೆಲ್ಲ ಸೇರಿ ವಿಕಾಸ್ ನೇಗಿಲೋಣಿಯನ್ನು ಬೆಳೆಸುತ್ತಾ ಹೋಗಿವೆ.
ಇದನ್ನು ಓದುತ್ತಾ ಓದುತ್ತಾ ನಿಮ್ಮಲ್ಲೊಂದು ಹುಮ್ಮಸ್ಸು ಮೂಡುತ್ತದೆ. ತನ್ನ ಬಾಲ್ಯ ಹೇಗಿತ್ತು ಅನ್ನುವುದನ್ನು ಪ್ರತಿಯೊಬ್ಬ ಹುಡುಗನೂ ಕಂಡುಕೊಳ್ಳುವುದಕ್ಕೆ ಇದೊಂದು ಕನಕನ ಕಿಂಡಿಯೂ ಆಗಬಲ್ಲದು. ನಮ್ಮ ಇಡೀ ಬದುಕಿನ ಬ್ಲೂಪ್ರಿಂಟೇ ಬಾಲ್ಯದಲ್ಲಿರುತ್ತದೆ. ಅಲ್ಲಿ ಕಂಡದ್ದು ಅನು‘ವಿಸಿದ್ದು ಕಾಡಿದ್ದು ಕನವರಿಸಿದ್ದು ರೂಪಕಗಳಾಗಿ ನಮ್ಮೊಳಗೇ ಉಳಿದಿರುತ್ತವೆ. ಅವು ನಮ್ಮನ್ನು ಕ್ರಮೇಣ ಆಳತೊಡಗುತ್ತವೆ. ಪ್ರೌಢಿಮೆ ಮತ್ತು ಬುದ್ಧಿವಂತಿಕೆ ನಮ್ಮನ್ನು ನಿಯಂತ್ರಿಸುವುದಕ್ಕಿಂತ ಬಾಲ್ಯದ ಅವಿಸ್ಮರಣೀಯ ಸಂಜ್ಞೆಗಳಿಗೆ ನಾವು ತಲೆಬಾಗುವುದರಲ್ಲಿ ಬೇರೆಯೇ ಖುಷಿಯಿದೆ.
ಅಂಥದ್ದೊಂದು ಉತ್ಸಾಹವನ್ನು ವಿಕಾಸ್ ಸಣ್ಣ ಸಣ್ಣ ಅಧ್ಯಾಯಗಳಲ್ಲಿ ನಿಮ್ಮ ಮುಂದೆ ಹರಡಿದ್ದಾರೆ. ಈ ಅಕ್ಷರಗಳ ಜೊತೆ ನಿಮ್ಮ ಸ್ಮತಿಯೂ ಬೆರೆತರೆ, ಎಂದೂ ಬಾಡದ ಬಾಲ್ಯವೆಂಬ ಸುರಗಿ ಹೂವಿನ ಘಮ ಮೂಗಿಗೆ ಬಡಿಯುತ್ತದೆ.
*****
‘ರಥಬೀದಿ ಎಕ್ಸ್ಪ್ರೆಸ್’ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com
]]>ಐವಿಎಫ್ ಎನ್ನುವ ವೈದ್ಯಕೀಯ ಅದ್ಭುತ ಲಕ್ಷಾಂತರ ಜೋಡಿಗಳ ಬಾಳಲ್ಲಿ ಬೆಳಕಾಗಿರುವುದು ಇಂದಿನ ಸತ್ಯ. ಐವಿಎಫ್ ದಿನೇ ದಿನೇ ಹುಟ್ಟುಹಾಕುತ್ತಿರುವ ಸಾಧ್ಯತೆಗಳೂ ಅಚ್ಚರಿ ಮೂಡಿಸುತ್ತವೆ. ನಮಗೊಂದು ಮಗು ಬೇಕು, ಅದು ವಿಜಯ್ ಪ್ರಕಾಶ್ ಅಷ್ಟು ಚೆನ್ನಾಗಿ ಹಾಡಬೇಕು, ಇಲ್ಲವೇ ಭೀಮ್ ಸೇನ್ ಜೋಷಿಯಂತೆ ಹಾಡಬೇಕು, ಮೈಕೆಲ್ ಜಾಕ್ಸನ್ನಂತೆ ಕುಣಿಯುವ ಮಗು ಬೇಕು, ಚೆಸ್ನಲ್ಲಿ ವಿಶ್ವ ಚ್ಯಾಂಪಿಯನ್ ಆಗುವಂತಹ ಮಗು ಬೇಕು… ಹೀಗೊಂದು ಬಯಕೆ ಹಲವು ತಂದೆ-ತಾಯಂದಿರ ಮನಸ್ಸಿನಲ್ಲಿ ಇರುತ್ತದೆ ಅಲ್ಲವೇ? ಟೈಲರ್ ಹತ್ತಿರ ಹೋಗಿ ಬೇಕಾದ ಬಣ್ಣದ ಬಟ್ಟೆಯನ್ನು ಆಯ್ದುಕೊಂಡು ಬೇಕಾದ ಅಳತೆಗೆ ಬಟ್ಟೆ ಹೊಲಿಸಿಕೊಳ್ಳುವುಂತೆ, ನಿಮ್ಮ ಬಯಕೆಗೆ ತಕ್ಕಂತೆ ‘ಜೀನ್ ಎಡಿಟಿಂಗ್’ ಮೂಲಕ, ಬೇಕಾದ ಮಗುವನ್ನು ಪಡೆಯಬಹುದು, ಅದೇ ‘ಡಿಸೈನರ್ ಬೇಬಿ’ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಆದರೆ ಇಂತಹ ಪ್ರಯೋಗಗಳಿಂದ ಹೆಚ್ಚಿನ ಅನಾಹುತ ಹಾಗೂ ಜೀವಹಾನಿ ಆಗಬಹುದು ಎಂಬ ಕಾರಣಕ್ಕೆ, ಡಿಸೈನರ್ ಬೇಬಿ ಪಡೆಯುವಂತಹ ಪ್ರಯೋಗಗಳನ್ನು ಮಾಡಬಾರದು ಎಂದು ಕಾನೂನು ಗಟ್ಟಿಯಾಗಿ ಹೇಳುತ್ತದೆ. ಹಾಗಾಗಿ, ಇದರ ಸುತ್ತ ಯಾವುದೇ ಪ್ರಯೋಗಗಳು ನಡೆದಿಲ್ಲ.
ಇದೇ ಡಿಸೈನರ್ ಬೇಬಿ ವಿಷಯದ ಸುತ್ತ ಡಾ. ಶಾಂತಲ ಅವರು ಒಂದು ರೋಚಕವಾದ ಕಾದಂಬರಿ ಬರೆದಿದ್ದಾರೆ. ಒಂದು ಒಳ್ಳೆಯ ಥ್ರಿಲ್ಲರ್ ಸಿನೆಮಾ ಹೇಗೆ ಕೊನೆಯವರೆಗೂ ಅವುಡು ಕಚ್ಚಿಕೊಂಡು ನೋಡುವ ಹಾಗೆ ಮಾಡುವುದೋ ಹಾಗೆಯೇ ಡಾ. ಶಾಂತಲ ಅವರ ‘ದೇವರಾಗಲು ಮೂರೇ ಗೇಣು’ ಕಾದಂಬರಿ ಓದುಗರನ್ನು ಆವರಿಸಿಕೊಂಡು ಬಿಡುವುದು. ವೈದ್ಯರಾಗಿ ಅಪಾರ ಅನುಭವ ಇರುವ ಡಾ. ಶಾಂತಲ ಅವರು ಆಸ್ಪತ್ರೆಯ ವಾತಾವರಣ ಹಾಗೂ ಆಗುಹೋಗುಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ವೈದ್ಯಕೀಯ ವಿಜ್ಞಾನದ ಹೊಸ ಆವಿಷ್ಕಾರಗಳ ಸುತ್ತ ಅವರಿಗೆ ಇರುವ ಅರಿವು ಹುಬ್ಬೇರಿಸುಂತಹದ್ದು. “ಡಾಕ್ಟರ್ ಒಬ್ಬರು ಮಾತ್ರೆಯ ಚೀಟಿ ಬರೆದರೆ ಮೆಡಿಕಲ್ ಸ್ಟೋರಿನವರಿಗೆ ಮಾತ್ರ ಓದಿ ಅರಿತುಕೊಳ್ಳಲು ಸಾಧ್ಯ, ಜನಸಾಮಾನ್ಯರಿಗಲ್ಲ. ಇನ್ನು ಇವರು ಕಾದಂಬರಿ ಬರೆದರೆ ಸಾಮಾನ್ಯರು ಓದುವುದುಂಟೇ!?” ಎಂದು ಯಾರಿಗಾದರು ಪ್ರಶ್ನೆ ಮೂಡಬಹುದು. ಆದರೆ ಡಾ. ಶಾಂತಲ ಅವರು ಇದಕ್ಕೊಂದು ಅಪವಾದ ಎನಿಸುತ್ತದೆ. ಐವಿಎಫ್ ನಂತಹ ಹೊಚ್ಚ ಹೊಸ ವಿಜ್ಞಾನದ ವಿಷಯವನ್ನು ಯಾವುದೇ ವಿಜ್ಞಾನದ ಹಿನ್ನಲೆ ಇರದ ವ್ಯಕ್ತಿಯೊಬ್ಬನಿಗೆ ಸುಲಭವಾಗಿ ತಿಳಿಯುವಂತೆ ಬರೆದುಕೊಂಡು ಹೋಗುತ್ತಾರೆ. ಇದು ಡಾ. ಶಾಂತಲ ಅವರ ಬರವಣಿಗೆಯ ಶಕ್ತಿ!
‘ದೇವರಾಗಲು ಮೂರೇ ಗೇಣು’ ಕೇವಲ ವಿಜ್ಞಾನದ ವಿಷಯಗಳ ಸುತ್ತ ಗಿರಕಿ ಹೊಡೆಯುವುದಿಲ್ಲ. ಅದು ಮಿಂಚಿನಂತೆ ಬಂದು ಹೋಗುತ್ತದೆ. ಅದೊಂದು ಎಳೆಯಷ್ಟೆ! ಉಳಿದಂತೆ, ಶಾಂತಲ ಕಟ್ಟಿರುವ ನಿರುಪಮಾ, ನಸೀಂ, ಹಿತೇಶ್, ಬಾಲಚಂದ್ರನಂತಹ ಪಾತ್ರಗಳಲ್ಲಿ ಗಟ್ಟಿತನವಿದೆ. ಗಂಡ ಹೆಂಡತಿಯ ಅನ್ಯೋನ್ಯ ಸಂಬಂಧ, ಗೆಳತನ, ವೈರತ್ವ, ತೆಳುಹಾಸ್ಯ ಇವೆಲ್ಲವನ್ನೂ ಹದವಾಗಿ ಬೆರೆಸಿರುವ ರೀತಿ ಮೆಚ್ಚುವಂತದ್ದು. ಓದುಗನು ಕೊನೆಯವರೆಗೂ ಕುತೂಹಲದಿಂದ ಓದುವಂತೆ ಮಾಡಿರುವ ರೀತಿ ನಿಜವಾಗಿಯೂ ಅಚ್ಚರಿಯೇ ಸರಿ. ಸುಮಾರು 280 ಪುಟಗಳ ದೊಡ್ಡ ಕಾದಂಬರಿ, ಅದರೆ ಎಲ್ಲಿಯೋ ಎಳೆಯದೇ, ಎಲ್ಲಿಯೋ ತೂಕಡಿಸದೇ ಅದು ಓದುಗನನ್ನು ಓಡಿಸಿಕೊಂಡು, ಓದಿಸಿಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ! ಕನ್ನಡದಲ್ಲಿ ದೊಡ್ಡ ಕಾದಂಬರಿ ಬರೆಯುವವರ ಎಣಿಕೆ ಕಡಿಮೆ ಆಗುತ್ತಿದೆ ಎಂಬ ಆತಂಕ ಕೇಳಿಬರುತ್ತಿದೆ. ಆದರೆ, ಡಾಕ್ಟರ್ ಆಗಿ ಇಂಗ್ಲಿಷ್ನಲ್ಲಿ ಸಾಕಷ್ಟು ಬರಹ ಹಾಗೂ ಪುಸ್ತಕಗಳನ್ನು ಬರೆಯುತ್ತಿದ್ದರೂ, ಕನ್ನಡದಲ್ಲಿ ಒಂದು ವಿಶೇಷವಾದ ಕಾದಂಬರಿ ಒಂದನ್ನು ಬರೆಯಬೇಕು ಎಂಬ ಡಾ. ಶಾಂತಲ ಅವರ ಉತ್ಸಾಹ ಕಂಡರೆ ನಲಿವಾಗುತ್ತದೆ. ಅದಕ್ಕೆ ತಕ್ಕಹಾಗೆ ಅವರು ತೂಕವಾದ ಕಾದಂಬರಿಯನ್ನೂ ಬರೆಯುತ್ತಾರೆ. ಒಂದು ಕಾದಂಬರಿಗೆ ಇರಬೇಕಾದ ಪಾತ್ರಗಳ ಗಟ್ಟಿತನ, ಪಾತ್ರ ಹಾಗೂ ಸನ್ನಿವೇಶಗಳ ಬಣ್ಣನೆ, ಓದುಗನನ್ನು ಹಿಡಿದಿಟ್ಟುಕೊಳ್ಳಲು ಇರಬೇಕಾದ ಕೌತಕ ಮತ್ತು ಬರಹದ ಧಾಟಿ, ಜೊತೆಗೆ ಮುಖ್ಯವಾಗಿ ಒಳ್ಳೆಯ ಕತೆ, ಇವೆಲ್ಲವೂ ಡಾ. ಶಾಂತಲ ಅವರ ಪುಸ್ತಕದಲ್ಲಿ ಕಾಣಸಿಗುವುದು.
ಓದುಗರು ದುಡ್ಡು ಕೊಟ್ಟು, ಪುಸ್ತಕವನ್ನು ಕೊಂಡು ಓದುತ್ತಾರೆ, ಅವರು ನನಗಾಗಿ ನೀಡುವ ಸಮಯ ಹಾಗೂ ಹಣ ಎರಡಕ್ಕೂ ತಕ್ಕ ಗೌರವ ನೀಡಬೇಕು. ಅವರಿಗೆ ಇಷ್ಟವಾಗುವಂತೆ ಬರೆಯಬೇಕು ಎಂದು ಪ್ರಾಮಾಣಿಕ ಬರವಣಿಗೆಯಲ್ಲಿ ಡಾ. ಶಾಂತಲ ಅವರು ತೊಡಗಿದ್ದಾರೆ. ಅವರ ಹೊಸ ಕಾದಂಬರಿ ದೇವರಾಗಲು ಮೂರೇ ಗೇಣು ಓದಿ ನೋಡಿ. ಈ ಹಿಂದೆ, ಹರಿವು ಬುಕ್ಸ್ನಿಂದಲೇ ‘ಬಾನಂಚಿನ ಆಚೆ’ ಎಂಬ ಕಥಾ ಸಂಕಲನ ಹೊರಬಂದಿದೆ. 3019 AD ಎಂಬ ವೈಜ್ಞಾನಿಕ ಕಾದಂಬರಿಯೂ ಮೈಲ್ಯಾಂಗ್ ಅವರಿಂದ ಹೊರಬಂದಿದೆ. ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಬರಹದಲ್ಲಿ ಮಾಗುತ್ತಿರುವ ಡಾ. ಶಾಂತಲ ಅವರು ಇನ್ನೂ ಹೆಚ್ಚು ಹೆಚ್ಚು ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಹಾರೈಸೋಣ.
'ದೇವರಾಗಲು ಮೂರೇ ಗೇಣು' ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻
https://harivubooks.com/products/devaragalu-moore-genu-novel-dr-shantala-harivu-publication
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಭೇಟಿ ಕೊಡಿ - https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ - www.harivubooks.com
]]>ಬಾನಂಚಿನ ಆಚೆ
ರೋಚಕ ವೈಜ್ಞಾನಿಕ ಕತೆಗಳು
ಲೇಖಕಿ: ಡಾ. ಶಾಂತಲ
"ಬಾನಂಚಿನ ಆಚೆ", ಇದು ಹತ್ತು ರೋಚಕ ವೈಜ್ಞಾನಿಕ ಕತೆಗಳ ಸಂಕಲನ. ಇದನ್ನು ಓದಲು ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ಕತೆಗಳಾಗಿರುವುದರಿಂದ ನನಗೆ ಅರ್ಥ ಆಗತ್ತೋ ಇಲ್ಲವೊ ಎಂಬ ಗೊಂದಲದಲ್ಲೇ ತೆಗೆದುಕೊಂಡೆ. ಪುಸ್ತಕದ ಪ್ರಾರಂಭದಲ್ಲಿ ಬರಹಗಾರರ ಮಾತಿನ ಕೊನೆಯಲ್ಲಿ ಲೇಖಕಿ ಶಾಂತಲ ಅವರು "ದೆವ್ವದ ಕತೆಗಳನ್ನು ಬರೆಯುವುದು ದೆವ್ವಗಳಿಗೆ ಅಲ್ಲವೆಂದಾದರೆ, ವೈಜ್ಞಾನಿಕ ಕತೆಗಳನ್ನು ಬರೆಯುವುದು ವಿಜ್ಞಾನಿಗಳಿಗಾಗಿ ಅಲ್ಲವಲ್ಲ. ಜನಸಾಮಾನ್ಯರಿಗಾಗಿಯೇ ಬರೆಯುತ್ತೇವೆ" ಎಂದು ಬರೆದದ್ದನ್ನು ಓದಿ ನನಗೇ ಹೇಳುತ್ತಿದ್ದಾರೇನೋ ಅನ್ನಿಸಿ ಕತೆಗಳನ್ನು ಓದಲು ಪ್ರಾರಂಭಿಸಿದೆ.
ಪುಟ್ಟ ಗಾತ್ರದಲ್ಲಿ ಅತೀ ದೊಡ್ಡ ಅನುಭವ ಕೊಡುವುದೇ ಈ ಪುಸ್ತಕದ ವಿಶೇಷತೆ. ಪ್ರತಿಯೊಂದು ಕತೆಯು ವೈಜ್ಞಾನಿಕ ಕತೆ ಆಗಿದ್ದು, ಓದಿದ ನಂತರ ಅದರಲ್ಲಿ ಚಿತ್ರಿಸಿದ ಪರಿಕಲ್ಪನೆಯ ಬಗ್ಗೆ ಯೋಚಿಸುವ ಮತ್ತು ವಿಶ್ಲೇಷಿಸುವ ಸ್ಥಿತಿಯಲ್ಲಿ ನಮ್ಮನ್ನು ಬಿಡುತ್ತದೆ. ಕೆಲವೊಂದು ಕತೆಗಳು ತಂತ್ರಜ್ಞಾನವು ಪ್ರಬಲವಾಗಿರುವ ಜಗತ್ತನ್ನು ತೋರಿಸುತ್ತದೆ. ಇನ್ನು ಕೆಲವು ಕತೆಗಳು ತಂತ್ರಜ್ಞಾನದ ಪ್ರಗತಿಯೊಂದಿಗೆ ಬರುವ ಅಪಾಯಗಳನ್ನು ತೋರಿಸುತ್ತದೆ. ಒಟ್ಟಾರೆ ವಿವಿಧ ವೈಜ್ಞಾನಿಕ ವಿಷಯಗಳನ್ನು ಕತೆಗಳ ರೂಪದಲ್ಲಿ ಅಂದವಾಗಿ ಜೋಡಿಸಿಟ್ಟಿದ್ದಾರೆ. ಶಾಂತಲ ಅವರು ಸರಳ ಬರವಣಿಗೆಯ ಮೂಲಕ ವೈಜ್ಞಾನಿಕ ವಿಷಯಗಳನ್ನು ಸುಲಭವಾಗಿ ವಿವರಿಸುತ್ತಾರೆ. ಒಂದೊಂದು ಕತೆಯು ಓದುವಾಗ ಅದರಲ್ಲಿ ನಾವು ತೊಡಗಿಸಿಕೊಳ್ಳುತ್ತೇವೆ.
ಹೆಚ್ಚಿನ ಸ್ಪಾಯ್ಲರ್ಗಳಿಲ್ಲದೆ ಪ್ರತಿ ಕತೆಯ ವಿಮರ್ಶೆಯನ್ನು ನೀಡಲು ಬಯಸುತ್ತೇನೆ. ಮೊದಲು ನನಗೆ ಬಹಳ ಇಷ್ಟವಾದ 'ಕನಸು ಕಾಣುವಿರ?' ಕತೆಯ ಬಗ್ಗೆ ಹೇಳುತ್ತೇನೆ. ಈ ಕತೆಯನ್ನು ಓದುವಾಗ ನನಗೆ ವರ್ಷಗಳಿಂದೆ Netflix ನಲ್ಲಿ ನೋಡಿದ 'ಬ್ಲಾಕ್ ಮಿರರ್' ಸರಣಿ ನೆನಪಿಗೆ ತಂದುಕೊಟ್ಟಿತು. ಈ ಕತೆಯಲ್ಲಿ 'ನೆನಹು ಬಲೆ' (thought catcher) ಹಾಗೂ 'ಸ್ವಪ್ನ ಯೋಜಕ' (dream developer) ಎಂಬ ತಂತ್ರಜ್ಞಾನದಿಂದ ಮಾನವರಿಗೆ ಸುಖವಾದ ನಿದ್ದೆ ಮತ್ತು ಸುಂದರ ಸ್ವಪ್ನಗಳು ಬೀಳುತ್ತಿದ್ದವು. ಈ ತಂತ್ರಜ್ಞಾನ ನಮ್ಮ ಯೋಚನೆ, ಚಿಂತನೆ, ಭಾವನೆಗಳಂತಹ ಖಾಸಗಿ ವಿಷಯಗಳನ್ನು ಬಳಕೆ ಮಾಡುವುದು ಮಾನವ ಹಕ್ಕಿನ ಉಲ್ಲಂಘನೆ ಎಂಬುದು ಕಥಾ ನಾಯಕ ಭುವನ್ ರಾಜ್ನ ವಾದ. Artificial intelligence ನಮ್ಮನ್ನು ಹೇಗೆ ಆಳಬಹುದು ಎಂಬುದೇ ಈ ಕತೆಯ ಸಾರ.
ಇತ್ತೀಚಿಗಷ್ಟೇ ದಿನಪತ್ರಿಕೆಗಳಲ್ಲಿ "artificial womb facility" ಬಗ್ಗೆ ಸುದ್ದಿ ಬಂದಿತ್ತು. ಇದು ಪೋಷಕರಿಗೆ ಕೃತಕ ಗರ್ಭಾಶಯದ ಸಹಾಯದಿಂದ ಕಸ್ಟಮೈಸ್ ಮಾಡಿದ ಶಿಶುಗಳನ್ನು ಉತ್ಪಾದಿಸಲು ನೀಡುವ ಪರಿಕಲ್ಪನೆಯಾಗಿದೆ. ತಂತ್ರಜ್ಞಾನದಿಂದ ಮುಂದಿನ ದಿನಗಳಲ್ಲಿ ಹೆರಿಗೆಯಲ್ಲಿ ಆಗುವ ಪ್ರಕ್ರಿಯದ ಕತೆಯೇ 'ಹೆರಿಗೆ'. ಇದರಲ್ಲಿ ಲೇಖಕಿ ಶಾಂತಲ ಅವರು ಕೇವಲ artificial womb facility ಬಗ್ಗೆ ಅಲ್ಲದೆ labor pain experiencer ಮತ್ತು robot- midwife ಬಗ್ಗೆನೂ ಕಲ್ಪಿಸಿ ಕುತೂಹಲ ಭರಿತ ಕತೆ ಹೆಣೆದಿದ್ದಾರೆ.
'ಮಾಯಾ ನೂರ್' ಕತೆಯಲ್ಲಿ ಉಕ್ಕಾಳುವಿಗೆ (ರೋಬೋಟ್) ಸಂವೇದನ ಶಕ್ತಿ ಬಂದಾಗ ಅದರ ಮನಸ್ಸಿನಲ್ಲಿ ಆಗುವ ತಳಮಳದ ಬಗ್ಗೆ ಬರೆಯುತ್ತಾರೆ. ಉಕ್ಕಾಳು ನಿಜವಾದ ತಿಳುವಳಿಕೆ ಹೊಂದಿದ್ದರೆ, ಕೇವಲ ಅನುಕರಣೆ ಮಾಡದೆ, ತನ್ನ ಭಾವನೆಗಳ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಏನು ಆಗಬಹುದು ಎಂಬುದು 'ಮಾಯಾ ನೂರ್' ಕತೆಯಿಂದ ತಿಳಿಯಬಹುದು.
'ಕ್ರೋಮೊಸೋಮ್ 4' ಕತೆಯಲ್ಲಿ ಸಂಶೋಧಕಿ ಡಾ. ಸಮೀಕ್ಷಾ ತಂತ್ರಜ್ಞಾನದ ಸಹಾಯದಿಂದ ಪೀಳಿಕಂತೆಗಳನ್ನ (chromosomes) ಬದಲಾಯಿಸುತ್ತಾರೆ. ಆದರೆ ಅವರಿಗೆ ನಿಸರ್ಗದ ವಿರುದ್ಧ ಕೆಲಸ ಮಾಡಿದ ಪಾಪಪ್ರಜ್ಞೆ ಕಾಡುತ್ತದೆ. ವಿಜ್ಞಾನದಿಂದ ಎಲ್ಲಾ ಸಾಧಿಸಬಹುದೆಂದು ಸುಮ್ಮನೆ ಮುನ್ನುಗಿದರೆ ಅದು ನಮಗೆ ಕಂಟಕವಾಗುತ್ತದೆ ಎನ್ನುವ ಸಂದೇಶ ಕೊಡುವ ಕತೆ ಇದು.
'ಕಲ್ ಸಂಜೀವಮ್ಮನ ಕತೆ'ಯಲ್ಲಿ ಪಳೆಯುಳಿಕೆಯಾಗಿದ್ದ (fossil) ಒಂದು ಜಂತು, ಸುಮಾರು ಎರಡು ಸಾವಿರ ವರ್ಷಗಳ ನಂತರ ಜೀವ ಪಡೆಯುತ್ತದೆ. ಅದನ್ನು ಕಂಡು ಯುವಕರಲ್ಲಿ ಮೊದಲು ಆಗುವ ಕುತೂಹಲ, ಎಲ್ಲರೊಂದಿಗೆ ಅದರ ವಿಷಯ ಹಂಚಿಕೊಳ್ಳಬೇಕೆನ್ನುವ ಉತ್ಸಾಹ, ತದನಂತರ ಆಗುವ ಭಯ ಎಲ್ಲವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
'ಮತ್ತೊಂದು ಶತಮಾನ' ಕ್ರಿ. ಶ 2100 ನಲ್ಲಿ ನಡೆಯುವ ಕತೆ. ಇಪ್ಪತ್ತೆರಡನೇ ಶತಮಾನದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಆಗುವ ಬದಲಾವಣೆಗಳ ಸಮಗ್ರ ಚಿತ್ರಣವನ್ನು ಲೇಖಕಿ ಕೊಟ್ಟಿದ್ದಾರೆ. Carbon nano ಟ್ಯೂಬ್ ಟೆಕ್ನಾಲಜಿಯಿಂದ ನಿರ್ಮಿಸಿರುವ ಆರ್ಕಲಾಜಿ, ಧೈಹಿಕ ಕ್ರಿಯೆಗಳ ಮೇಲೆ ಸದಾ ಲಕ್ಷ್ಯವಿಡುವ ಮೆಡಿಕಲ್ ಟ್ಯಾಟೊ, ವರ್ಚುವಲ್ ರಿಯಾಲಿಟಿ ಸೆಶನ್ ಅಲ್ಲಿ ನೆಡೆಯುವ ಚಿಕಿತ್ಸೆ, 3-ಡಿ ಬಯೋ ಪ್ರಿಂಟರ್ನಿಂದ ಔಷಧಿ ರವಾನಿಸುವ, ಕಿಟಕಿಯಿಂದ ಆಚೆ ಹಾರುವ ಫ್ಲೋಟಿಂಗ್ ಕಾರುಗಳು ಬಗ್ಗೆ ರೋಚಕವಾಗಿ ಮುಂದಿನ ಶತಮಾನವನ್ನು ಊಹಿಸಿ ವರ್ಣಿಸಿದ್ದಾರೆ. ಕತೆ ಓದಿದಾಗ ನಮ್ಮಲ್ಲಿ ನಾವು ಒಮ್ಮೆಯಾದರು ಮುಂದಿನ ಶತಮಾನವನ್ನು ನೋಡಬೇಕು ಎಂಬ ಆಸೆಯನ್ನು ಹುಟ್ಟಿಸುತ್ತದೆ.
ಕೋಮದಲ್ಲಿರುವ ವ್ಯಕ್ತಿಯ ಯೋಚನೆಯೇ 'ಕೋಮಾ' ಕತೆಯಾಗಿದೆ. ವಾರದಿಂದ ಕೋಮದಲ್ಲಿರುವ ಡಾ. ಕಲ್ಯಾಣಿಯವರು ಸಾಯುವ ಮುನ್ನ ಅವರಿಗೆ ಬರುವ ಯೋಚನೆಗಳ ಚಿತ್ರಣವು ಇದರಲ್ಲಿದೆ.
ಔಷಧಿ ಉತ್ಪಾದನೆ ಕಂಪನಿಯೊಂದು ಹೊಸ ಔಷಧಿಯನ್ನು ಕಂಡುಹಿಡಿದಾಗ, ಮಾರುಕಟ್ಟೆಗೆ ಪರಿಚಯಿಸುವ ಮುನ್ನ ನಡಿಯುವ volunteer ಸ್ಟಡಿಯಲ್ಲಿ ಅದರ ದುಷ್ಟಪರಿಣಾಮದಿಂದ ಆಗುವ ಅನಾಹುತ ಮತ್ತು ಅನ್ಯಾಯವನ್ನು ದಾಖಲಿಸುವ ಥ್ರಿಲಿಂಗ್ ಕತೆಯೇ 'ಮಾಯಾ ಮದ್ದಿನ ಮುಸುಕಿನಲ್ಲಿ'.
'ಸೈಬರ್ಗ್ ಶ್ರೀನಿವಾಸ' ಹಾಗೂ 'ಅವರು ಬಂದುಬಿಟ್ಟರು' ಕತೆಗಳಲ್ಲಿ ಮುಂದಿನ ಶತಮಾನಗಳಲ್ಲಿ ಬರಬಹುದಾದಂತಹ ಸೈಬರ್ಗ್ (cyber + organism ) ಮಾನವರ ಬಗ್ಗೆ ಬರೆಯುತ್ತಾ, ಈ ಜನರನ್ನು ಒಪ್ಪಿಕೊಂಡು ಸರ್ಕಾರಗಳು ಹೇಗೆ ಇವರ ಉಪಯೋಗ ಪಡೆಯುತ್ತಾರೆ ಎಂದು ಅದ್ಭುತವಾಗಿ ಕತೆಗಳನ್ನು ಬರೆದಿದ್ದಾರೆ.
ನಾವು ಬೆಳೆದಂತೆ ತಂತ್ರಜ್ಞಾನವು ಬೆಳೆಯುತ್ತಿದೆ. ಮಾನವ ತಂತ್ರಜ್ಞಾನವನ್ನು ಅವಲಂಬಿಸಿದ್ದಾನೆ. ತಂತ್ರಜ್ಞಾನವಿಲ್ಲದ ಜೀವನ ಊಹಿಸಲು ಅಸಾಧ್ಯ. ಬುದ್ಧಿವಂತ ಮತ್ತು ಚಿಂತನೆ-ಪ್ರಚೋದಕ ಕತೆಗಳ ಮಾಲೆ ಈ 'ಬಾನಂಚಿನ ಆಚೆ' ಪುಸ್ತಕ. ವಿಜ್ಞಾನದಿಂದ ಮುಂದೆ ಏನು ಆಗಬಹುದು ಎಂದು ಕಲ್ಪಿಸಿ ಅದಕ್ಕೆ ತಕ್ಕಂತಹ ಕತೆಗಳನ್ನು ಕಟ್ಟಿಕೊಟ್ಟಿರುವ ಲೇಖಕಿಗೊಂದು 'ಸಲಾಂ'.
ಬಾನಂಚಿನ ಆಚೆ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/kn/products/baanachina-aache-kannada-books
ಬಾನಂಚಿನ ಆಚೆ ಪುಸ್ತಕದ ಲೇಖಕಿಯಾದ ಡಾ.ಶಾಂತಲ ಅವರ ಸಂದರ್ಶನ - https://youtu.be/syknvMCqZvs
ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com
]]>ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದಲೇ ಹರಿವು ಬುಕ್ಸ್ 5 ಬಣ್ಣ ಬಣ್ಣದ ಮಕ್ಕಳ ಪುಸ್ತಕವನ್ನು ಹೊರತಂದಿದೆ. ಈಗಾಗಲೇ ಈ ಐದೂ ಪುಸ್ತಕಗಳ ಹಲವಾರು ಪ್ರತಿಗಳು ಮಾರಾಟವಾಗಿದ್ದು, ನಿಮ್ಮ ಮಗುವಿನ ಈ ಬೇಸಿಗೆಯ ಓದಿಗೆ ಹೇಳಿಮಾಡಿಸಿದಂತಿದೆ.
ಚಿಣ್ಣರ ಗೋಲಿ ಆಟ
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಮಗಳ “ಅಮ್ಮ, ಹೊಸ ಕತೆ” ಎಂಬ ಬೇಡಿಕೆಗೆ ‘ಚಿನ್ನಿಯ ರಜಾಯಿ’ ಹಾಗೂ ‘ಅಳಿಲು ಸೇವೆ’ ಎಂಬ ಎರಡು ಮುದ್ದಾದ ಮಕ್ಕಳ ಪುಸ್ತಕಗಳನ್ನು ಬರೆದ ಇವರು ಈಗ ಬಾಲ್ಯದ ದಿನಗಳಲ್ಲಿ ಎಲ್ಲರೂ ಆಡಿದ ಆಟವಾದ ಗೋಲಿ ಕುರಿತಾಗಿ ಬರೆದ ಮಕ್ಕಳ ಕತೆಯೇ ‘ಚಿಣ್ಣರ ಗೋಲಿ ಆಟ’. ಈ ಚಂದದ ಚಿಣ್ಣರ ಪುಸ್ತಕದ ಪ್ರತೀ ಪುಟದಲ್ಲೂ ಲಿಪ್ತಿ ರಾವ್ ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.
ಚಿಕ್ಕು ಬುಕ್ಕು
ಜಿ.ಆನಂದ್ ಅವರು ಚಿಣ್ಣರಿಗೋಸ್ಕರ ಬರೆದ ಈ ಪುಸ್ತಕದಲ್ಲಿ ಬಣ್ಣ ಬಣ್ಣದ ಚಿತ್ರಗಳಿದ್ದು ಕನ್ನಡದ ಪ್ರತಿಯೊಂದು ಅಕ್ಷರವನ್ನೂ ಪದ್ಯದ ರೂಪದಲ್ಲಿ ಹೇಳಲಾಗಿದೆ. ಆಟವಾಡುತ್ತಾ ವರ್ಣಮಾಲೆಯನ್ನು ಮತ್ತು ಕನ್ನಡ ಪದಗಳನ್ನು ಮಕ್ಕಳಿಗೆ ಪರಿಚಿಸುವ ಉದ್ದೇಶದಿಂದಲೇ ಹರಿವು ಬುಕ್ಸ್ ಈ ಪುಸ್ತಕವನ್ನು ಪ್ರಕಾಶನ ಮಾಡಿದೆ. 3 ವರ್ಷದಿಂದ 8 ವರ್ಷದ ಮಕ್ಕಳಿಗೆ ಈ ಪುಸ್ತಕ ಬಹಳ ಉಪಯೋಗಕಾರಿ. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ಪುಸ್ತಕ. ಹಾಗೆಯೇ, ಒಳ್ಳೆಯ ಗುಣಮಟ್ಟದ ಮುದ್ರಣ ಮಾಡಿರುವುದರಿಂದ, ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವುದಕ್ಕೂ ಇದು ತಕ್ಕನಾದ ಪುಸ್ತಕವಾಗಿದೆ.
https://harivubooks.com/products/chikku-bukku-kannada-childrens-book
ಚಿನ್ನಿಯ ರಜಾಯಿ
ಯಶಸ್ವಿನಿ ಎಸ್.ಎನ್. ಅವರು ಬರೆದ ಚಿನ್ನಿಯ ರಜಾಯಿ ಪುಸ್ತಕದಲ್ಲಿ ಚಿನ್ನಿ ಎಂಬ ಮುದ್ದಾದ ಹುಡುಗಿಯ ಕತೆಯಿದೆ. ಚಂದದ ಚಿತ್ರಗಳಿರುವ ಈ ಪುಸ್ತಕದಲ್ಲಿ ಮಕ್ಕಳಿಗೆ ಕೌದಿ ಕಲೆಯ ಬಗ್ಗೆ ತಿಳಿಸಿಕೊಡಲಾಗಿದೆ. ಪುಟಾಣಿ ಕತೆಯನ್ನು ಒಳಗೊಂಡಿರುವ ಈ ಪುಸ್ತಕ ಬರೀ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಮುದನೀಡುತ್ತದೆ.
https://harivubooks.com/kn/products/chinniya-rajaayi-kids-book-kannada
ರಿಕ್ಕು ರಿಕ್ಷಣ್ಣ
ಪ್ರಾಣಿ-ಪಕ್ಷಿಗಳೊಂದಿಗೆ ಮಾತನಾಡುವ ರಿಕ್ಷಾ ಇದ್ದಿದ್ದರೆ ಹೇಗಿರುತ್ತಿತ್ತು? ಎಂಬ ಎಳೆಯನ್ನಿಟ್ಟುಕೊಂಡು ಹುಟ್ಟಿದ ಮಕ್ಕಳ ಕತೆಯೇ ರಿಕ್ಕು ರಿಕ್ಷಣ್ಣ. ಅನುಪಮಾ ಕೆ ಬೆಣಚಿನಮರಡಿ ಅವರು ಬರೆದ ಈ ಚಿಣ್ಣರ ಮುದ್ದಾದ ಪುಸ್ತಕದಲ್ಲಿ ಪ್ರಾಣಿಗಳೊಂದಿಗೆ ಮಾತನಾಡಬಲ್ಲ ರಿಕ್ಷಣ್ಣನ ಕತೆಯನ್ನು ಹೇಳಲಾಗಿದೆ. ಬಣ್ಣ ಬಣ್ಣದ ಚಿತ್ರಗಳಿರುವ ಈ ಪುಸ್ತಕ ಮಕ್ಕಳ ಅಚ್ಚು ಮೆಚ್ಚು ಎನ್ನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
https://harivubooks.com/kn/products/rikku-rikshanna-kids-book-kannada
ಅಳಿಲು ಸೇವೆ
ರಾಮಾಯಣ ಕತೆಯಲ್ಲಿ ಅಳಿಲು ತನ್ನ ಕೈಲಾದ ಸಹಾಯವನ್ನು ಮಾಡಿ ಎಲ್ಲರ ಮೆಚ್ಚುಗೆ ಘಳಿಸಿದ ಕತೆಯನ್ನು ನಾವೆಲ್ಲರೂ ಕೇಳಿಯೇ ಕೇಳಿರುತ್ತೇವೆ. ಯಶಸ್ವಿನಿ ಎಸ್.ಎನ್, ಅವರು ಬರೆದ ‘ಅಳಿಲು ಸೇವೆ’ ಪುಸ್ತಕವೂ ಸಹ ಇನ್ನೊಬ್ಬರಿಗೆ ನೆರವಾಗುವ ಗುಣದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುತ್ತದೆ. ಅಂದದ ಚಿತ್ರಗಳನ್ನು ಹೊಂದಿದ ಈ ಪುಸ್ತಕವನ್ನು ಮಕ್ಕಳು ಮತ್ತೆ ಮತ್ತೆ ಓದುವುದಂತು ಖಚಿತ.
https://harivubooks.com/kn/products/alilu-seeve-kids-book-kannada
ಈಗಿನ ಕಾಲದ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಬೇಕು ಎನ್ನುವುದು ಹರಿವು ಬುಕ್ಸ್ನ ಆಶಯ. ಇದೇ ಕಾರಣದಿಂದಾಗೇ ಮಕ್ಕಳನ್ನು ಓದಿನ ಕಡೆ ಸೆಳೆಯುವುದಕ್ಕೆ ಬಣ್ಣ ಬಣ್ಣದ ಚಿತ್ರಗಳಿರುವ ಪುಸ್ತಕಗಳನ್ನು ಹರಿವು ಬುಕ್ಸ್ ಹೊರತರುತ್ತಿದೆ.
ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ - https://harivubooks.com/kn/collections/kids-books-kannada
ಬೇರೆ ಬೇರೆ ಬಗೆಯ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ - www.harivubooks.com
]]>ವಾಸುದೇವ ಮೂರ್ತಿಯವರು ಈ ಕಾಲ ಘಟ್ಟದ ಯುವಕ, ಯುವತಿಯರ ತಲೆಯಲ್ಲಿಟ್ಟುಕೊಂಡು ಬರೆದ ಪುಸ್ತಕವೇ ಪಾತಾಳ ಗರಡಿ. ಓದಿದ್ದು ಸಿವಿಲ್ ಇಂಜಿನಿಯರಿಂಗ್, ಇಪ್ಪತ್ತೈದು ವರ್ಷಗಳ ಕಾಲ ಕಾರ್ಪೊರೇಟ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು, ಆದರೂ ಅವರಲ್ಲಿದ್ದ ಬರೆಯುವ ಆಸಕ್ತಿ ಕಡಿಮೆಯಾಗಲಿಲ್ಲ. ಇಪ್ಪತ್ತೈದಕ್ಕೂ ಹೆಚ್ಚು ಸಣ್ಣ ಕಥೆಗಳು ತರಂಗ, ಮಯೂರ ಇತರ ಪತ್ರಿಕೆಗಳಲ್ಲಿ ಪ್ರಕಟಗೊಂಡು ಈಗ ಅವರ ಎರಡನೇ ಪುಸ್ತಕವಾದ ಪಾತಾಳ ಗರಡಿಯನ್ನು ಜನರಿಗೆ ಒಪ್ಪಿಸಿದ್ದಾರೆ.
ಪಾತಾಳ ಗರಡಿ ಪುಸ್ತಕವು ಒಟ್ಟು ಏಳು ಕಥೆಗಳನ್ನೊಳಗೊಂಡ ಕಥಾಸಂಕಲನ. ಪಾತಾಳ ಗರಡಿ, ಅಪರಾಧಿ ನಾನಲ್ಲ, ಮೂರನೇ ಆಯಾಮ, ತೆರೆದ ಕಿಟಕಿ, ಚಕ್ರಬಿಂಬ, ಛದ್ಮ, ವರ್ಣಜಾಲ. ವರ್ತಮಾನದಲ್ಲಿ ಇಂತ ಕಥೆಗಳು ಕಣ್ಮರೆಯಾಗುತ್ತೀರುವಾಗ ವಾಸುದೇವ ಮೂರ್ತಿಯವರ ಪಾತಾಳ ಗರಡಿ ಜನರ ಮನ ಗೆಲ್ಲುತ್ತದೆ. ಪತ್ತೇದಾರಿ ಎಂದರೇನು, ಒಬ್ಬ ಪೊಲೀಸ್ ಅಂದರೆ ಯಾರು, ಅವನ ಗುಣಲಕ್ಷಣಗಳೇನು, ಅವನ ಬುದ್ದಿ ಹೇಗಿರಬೇಕು, ಒಂದು ಕೇಸಿನಲ್ಲಿ ಅನುಭವ ಎಷ್ಟು ಮುಖ್ಯ, ಒಬ್ಬ ಅಪರಾಧಿ ತನ್ನ ಕೃತ್ಯವನ್ನು ಮುಚ್ಚಿಹಾಕಲು ಮಾಡುವ ಪ್ರಯತ್ನವೇನು, ಅಪರಾಧಿ ಎಂದು ಬಿಂಬಿಸಲು ಹುಡುಕಬೇಕಾದ ರೀತಿ, ಸತ್ಯ ಸುಳ್ಳುಗಳ ನಡುವೆ ಎಲ್ಲೊ ಅವಿತ ಸಾಕ್ಷಿ ಇದೆಲ್ಲವನ್ನು ಲೇಖಕರಾದ ವಾಸುದೇವ ಮೂರ್ತಿಯವರು ಅಚ್ಚುಕಟ್ಟಾಗಿ ಹೆಣೆದ್ದಿದ್ದಾರೆ.
ಒಂದೊಂದು ಕಥೆಯು ಹೊಸ ರೋಚಕತೆಯನ್ನು ಸೃಷ್ಟಿಸುತ್ತದೆ, ಪುಸ್ತಕ ಓದಿ ಮುಗಿಸಿದ ಮೇಲೆ ಅನ್ನಿಸುವುದಿಷ್ಟೇ ಎಲ್ಲೂ ನೋಡದ ಹೊಸ ರೀತಿಯ ಸವಿ, ಒಂದು ಕೃತ್ಯದ ಹಿಂದೆ ಇರುವ ನೋವು, ಆ ಕೃತ್ಯಕ್ಕೆ ಕಾರಣ ಅದರ ಹಿಂದಿನ ಕಥೆ, ಮಾಡಿದ್ದು ಕೃತ್ಯವೆಂದು ತಿಳಿದಮೇಲೆ ಅವಿತುಕೊಳ್ಳುವ ಪರಿ, ಸೃಷ್ಟಿಸುವ ಸುಳ್ಳು ಸಾಕ್ಷಿ, ಆದರೂ ಅದೆಲ್ಲವನ್ನು ಮೀರಿ ತನ್ನ ಬುದ್ದಿ ಬರಿದಾದರು ಅನುಭವದಿಂದ ಹಾಗೂ ಚಾಣಕ್ಷತೆಯಿಂದ ಸಮಯಕ್ಕಾಗಿ ಕಾದು ಅಪರಾಧಿಯನ್ನು ಗುರುತಿಸುವ ಪೊಲೀಸ್ ಎಲ್ಲರ ಚಿತ್ರವು ಹಾಗೆ ಕಣ್ಣ ಮುಂದೆ ಬಂದು ಹೋಗುತ್ತದೆ.
ಒಟ್ಟಾರೆ ಪಾತಾಳ ಗರಡಿ ಕಥಾ ಸಂಕಲನವು ಇಂದಿನ ಪೀಳಿಗೆಯ ಯುವಕ ಯುವತಿಯರ ಮನಸೆಳೆಯುವುದರಲ್ಲಿ ಅನುಮಾನವಿಲ್ಲ. ಲೇಖಕರು ಪಾತ್ರಗಳನ್ನು ಕಟ್ಟಿಕೊಂಡಿರುವ ರೀತಿ ರೋಚಕ, ದಿನ ನಿತ್ಯ ನಡೆಯುವ ಕೃತ್ಯಗಳ ಆಧಾರಿತದ ಮೇಲೆ ಪಾತ್ರ ತಯಾರಾಗಿದೆ ಹಾಗೂ ನೆನಪಿನಲ್ಲಿ ಉಳಿಯುವಂತ್ತದ್ದು, ಪಾತ್ರಕ್ಕೆ ತಕ್ಕ ತೂಕ, ಪಾತ್ರದ ಸಮಯ ಪ್ರಜ್ಞೆ, ಓದುಗರು ಅಪರಾಧಿಯನ್ನು ಒಮ್ಮೊಮ್ಮೆ ಕಂಡು ಹಿಡಿಯುವಷ್ಟು ಸುಲಭವಾಗಿ ಬರೆದ್ದಿದ್ದರು, ಒಮ್ಮೊಮ್ಮೆ ಓದುಗರಿಗೆ ನಿರಾಸೆ ಹುಟ್ಟಿಸಿ ಕಥೆಯನ್ನು ರೋಚಕವಾಗಿ ಕಟ್ಟಿದ್ದಾರೆ ಲೇಖಕರು.
ಅಪರಾಧಿ ನಾನಲ್ಲ ಹಾಗೂ ಚಕ್ರಬಿಂಬ ಕಥೆಗಳು ರೋಚಕವಾಗಿಯೂ ಹಾಗೂ ಬುದ್ದಿವಂತಿಕೆಯ ಕಥೆಯು ಹೌದು. ಒಬ್ಬ ಲಾಯರ್ ಗೆ ಇರಬೇಕಾದ ಚಾಣಕ್ಷತೆ, ಒಬ್ಬ ಪೊಲೀಸ್ ಅಧಿಕಾರಿಯು ಸಣ್ಣ ಲೋಪವನ್ನು ಹಿಡಿದು ಇಡೀ ಕೇಸಿಗೆ ತಿರುವು ಕೊಡುವುದು, ಸಮಾಜದಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಾರ್ಥಕ್ಕೋಸ್ಕರ ಅಪರಾಧಿಯನ್ನು ನಿರಪರಾಧಿಯನ್ನಾಗಿಸುವುದು, ಸತ್ಯ ತಿಳಿದಿದ್ದರೂ ತಕ್ಕ ಸಾಕ್ಷಿ ಸಿಗದೆ ಅಪರಾಧಿಯನ್ನು ಕೈಚೆಲ್ಲುವುದು, ಇದೆಲ್ಲವು ಇಂದಿನ ಸಮಾಜದಲ್ಲಿ ನಡೆಯುವ ಸತ್ಯ ಘಟನೆಯೇ ಹೊರತು ಸುಳ್ಳಲ್ಲ.
ಇನ್ನು ಚಕ್ರಬಿಂಬ ಕಥೆಯು ನಮ್ಮೆಲ್ಲರನ್ನೂ ರೋಲರ್ ಕೋಸ್ಟರ್ನಲ್ಲಿ ಕೂರಿಸಿದಂತಿದೆ, ಒಂದು ಸಿಹಿ ತಿಂಡಿಯ ಬಳಿ ನೂರಾರು ಜನರಿದ್ದರು ಅದನ್ನು ತಿಂದವರು ಯಾರು ಎಂದು ಹೇಳುವುದು ಕಷ್ಟ. ಒಬ್ಬನಿಗೆ ಸಿಹಿ ಇಷ್ಟವಿದ್ದರೂ ಶುಗರ್ ಸಮಸ್ಯೆ, ಒಬ್ಬನಿಗೆ ಸಿಹಿ ಕೈಗೆಟಾಕುವಂತಿದ್ದರು ನೂರಾರು ಜನ ಕಣ್ಣು ಅವನ ಮೇಲಿರುವುದ ತಿಳಿದು ಸುಮ್ಮನಾಗುವುದು, ಆದರೂ ಆ ಸಿಹಿಯನ್ನು ಅದೆಲ್ಲೋ ಕುಳಿತವ ತಿಂದು ಕೈ ತೊಳೆದದ್ದು ಯಾರ ಕಣ್ಣಿಗೂ ಬೀಳಲಿಲ್ಲ, ಆ ಸಿಹಿ ಅಲ್ಲಿ ಹೋದ್ದದ್ದಾದರು ಹೇಗೆ?ತಿಂದವನು ಯಾರು, ಸವಿದ ನಾಲಿಗೆಗೆಷ್ಟು ಗೊತ್ತು ಆ ಸತ್ಯ.ಹೀಗೆ ಒಂದು ಕೊಲೆಯ ಆಳವು ಎಷ್ಟು ಜನರ ಮೇಲಿನ ಅನುಮಾನಕ್ಕೆ ಅನುವು ಮಾಡಿಕೊಟ್ಟಿತ್ತು, ಸಿಹಿ ತಿಂದವನ ಆಕಾಂಕ್ಷೆ ಏನಾಗಿತ್ತು ಇದೆಲ್ಲವನ್ನು ನೀವು ಚಕ್ರಬಿಂಬ ಕಥೆಯಲ್ಲಿ ಓದಲೇಬೇಕು.
ಮಾನವೀಯತೆ ಹಾಗೂ ಕರ್ತವ್ಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕೆಂದರೆ ನಿಮ್ಮ ಆಯ್ಕೆ? ಇದು ಎಲ್ಲರ ಜೀವನವ ಬಿಂಬಿಸುವ ಕಥೆ “ಛದ್ಮ”. ಸನ್ನಿವೇಶಗಳು ಕೈ ಮೀರಿದಾಗ ಮಾನ, ಪ್ರಾಣ ಕಾಪಾಡಲು ಒಂದು ಹೆಣ್ಣು ತೆಗೆದುಕೊಳ್ಳುವ ನಿರ್ಧಾರ ಸರಿಯೋ? ತಪ್ಪೋ? ಸರಿಯಾದರೆ ಶಿಕ್ಷೆ ಕಾನೂನಿನ ಪ್ರಕಾರ ಕೊಡುವ ಬಹುಮಾನ, ತಪ್ಪಾದರೆ ಮಾನ ಹೋಗಿ ಜನ ಬಾಯಿಗೆ ಸಿಗುವ ಆಹಾರ. ಹಾಗಾದರೆ ಒಂದು ಹೆಣ್ಣು ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ? ತಮ್ಮ ಮಕ್ಕಳನ್ನು ತಂದೆ ತಾಯಿ ಕಾಪಾಡುವುದು ಹೇಗೆ? ಮಾನವೀಯತೆ ಹಾಗೂ ಕಾನೂನು ಎರಡರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯು ಸರಿಯಾದ ಆಯ್ಕೆ ಮಾಡುವುದಾದರೂ ಹೇಗೆ? ಆಯ್ಕೆಗಳ ಮಧ್ಯೇ ಸಿಲುಕಿದಾಗ ಆಗುವ ಸಂಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ಹಾಗಾಗಿ ನೀವು ಛದ್ಮ ಎಂಬ ಕಥೆಯನ್ನು ಓದಲೇಬೇಕು.
ಹೀಗೆನಾದರೂ ನೀವು ಒಂದೊಳ್ಳೆ ಪತ್ತೇದಾರಿ ಕಥೆಗಳನ್ನು ಹುಡುಕುತ್ತಿದ್ದರೆ ನಿಮಗೆ ಪಾತಾಳ ಗರಡಿ ಮೊದಲ ಆಯ್ಕೆ ಎಂದು ಹೇಳುತ್ತೇನೆ. ಲೇಖಕರಾದ ವಾಸುದೇವ ಮೂರ್ತಿಯವರು ಹೀಗೆ ತಮ್ಮ ಬರವಣಿಗೆಯನ್ನು ಮುಂದುವರೆಸಿ ಓದುಗರನ್ನು ಮತ್ತಷ್ಟು ರೋಚಕಗೊಳಿಸಬೇಕಾಗಿ ನನ್ನದೊಂದು ವಿನಂತಿ.
ಪಾತಾಳಗರಡಿ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/kn/products/pathala-garadi-kannada-book
ಥ್ರಿಲ್ಲರ್ ಕತೆಗಳ ಬಗ್ಗೆ ವಾಸುದೇವ್ ಮೂರ್ತಿ ಹಾಗು ಕೌಶಿಕ್ ಕೂಡುರಸ್ತೆ ಅವರ ಜೊತೆ ಮಾತುಕತೆಯನ್ನು ನೋಡಲು ಭೇಟಿಕೊಡಿ - https://youtu.be/uhClbIvxoMY
ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com
]]>ಚಿಣ್ಣರ ಈ ಪುಸ್ತಕದಲ್ಲಿ ಬಣ್ಣ ಬಣ್ಣದ ಚಿತ್ರಗಳಿದ್ದು ಪ್ರತಿಯೊಂದು ಅಕ್ಷರವನ್ನೂ ಪದ್ಯದ ರೂಪದಲ್ಲಿ ಹೇಳಲಾಗಿದೆ. ಆಟವಾಡುತ್ತಾ ವರ್ಣಮಾಲೆಯನ್ನು ಮತ್ತು ಕನ್ನಡ ಪದಗಳನ್ನು ಮಕ್ಕಳಿಗೆ ಪರಿಚಿಸುವ ಉದ್ದೇಶದಿಂದಲೇ ಹರಿವು ಬುಕ್ಸ್ ಈ ಪುಸ್ತಕವನ್ನು ಪ್ರಕಾಶನ ಮಾಡಿದೆ. 3 ವರ್ಷದಿಂದ 8 ವರ್ಷದ ಮಕ್ಕಳಿಗೆ ಈ ಪುಸ್ತಕ ಬಹಳ ಉಪಯೋಗಕಾರಿ. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ಪುಸ್ತಕ. ಹಾಗೆಯೇ, ಒಳ್ಳೆಯ ಗುಣಮಟ್ಟದ ಮುದ್ರಣ ಮಾಡಿರುವುದರಿಂದ, ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವುದಕ್ಕೂ ಇದು ತಕ್ಕನಾದ ಪುಸ್ತಕವಾಗಿದೆ.
ಕೆಳಗಿನ ಚಿತ್ರದಲ್ಲಿ ಕಾಣುವಂತೆಯೇ ಇಡೀ ಪುಸ್ತಕದಲ್ಲಿ ಕನ್ನಡ ವರ್ಣಮಾಲೆಯನ್ನು ಚಂದದ ಪದ್ಯದ ರೂಪದಲ್ಲಿ ಹೇಳಲಾಗಿದೆ 👇🏻
“ಚಿಕ್ಕು ಬುಕ್ಕು” ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ
https://harivubooks.com/products/chikku-bukku-kannada-childrens-book
ಹರಿವು ಬುಕ್ಸ್ ಪ್ರಕಾಶನದ ಮಕ್ಕಳ ಪುಸ್ತಕಗಳು
ರಿಕ್ಕು ರಿಕ್ಷಣ್ಣ – https://harivubooks.com/products/rikku-rikshanna-kids-book-kannada
ಚಿನ್ನಿಯ ರಜಾಯಿ – https://harivubooks.com/products/chinniya-rajaayi-kids-book-kannada
ಅಳಿಲು ಸೇವೆ – https://harivubooks.com/products/alilu-seeve-kids-book-kannada
ಇತರೆ ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com
]]>ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಮ್ಮದೇ ಆಫೀಸ್ ನ postman "ಬಾನಂಚಿನ ಆಚೆ" ಪುಸ್ತಕವನ್ನು ಕೈಗಿತ್ತ. ಕೈ ತಲುಪಿದ ಕೊಡಲೇ ಪುಸ್ತಕದ ಹಿಂಬದಿ ಪುಟದಲ್ಲಿ ಡಾ. ಶಾಂತಲ ಅವರ ಬಗೆಗಿನ 'ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.' ಎಂಬುದನ್ನು ಓದಿ "ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ"ಯಾದವರು ಬಾನಂಚಿನ ವಿಸ್ಮಯಗಳ ಕುರಿತು ಅದೆಷ್ಟು ಮನಮುಟ್ಟುವಂತೆ ಬರೆದಾರು ಎಂದು ಮನದಲ್ಲಿ ಅಂದುಕೊಂಡು ಪುಸ್ತಕವನ್ನು ಪಕ್ಕಕ್ಕಿಟ್ಟು ಕೆಲಸದಲ್ಲಿ ನಿರತನಾದೆ.
ಸಾಯಂಕಾಲದ 5 ಗಂಟೆಗೆ ಕೆಲಸ ಸ್ವಲ್ಪ ಕಡಿಮೆ ಆಗಿತ್ತು. "ನೋಡೋಣ" ಎಂದು ಪುಸ್ತಕ ಬಿಡಿಸಿದೆ "ಮನದಲ್ಲಿ ಅರಿವಿನ ಕಿಡಿ ಹೊತ್ತಿ ಉರಿಯುವಾಗ ಸಾವಿನ ಅಂಜಿಕೆ ಇಲ್ಲವಾಗುತ್ತದೆ" - ಅಥರ್ವ ವೇದ ಪುಟ ಕಣ್ಣಿಗೆ ಬಿತ್ತು.
ಪೆಟ್ರೋಲಿಗೆ ಬೆಂಕಿ ಸ್ಪರ್ಶಿಸಿದರೆ ಹೇಗೆ ಕ್ಷಣಾರ್ಧದಲ್ಲಿ ಸುಟ್ಟು ಬಿಡುತ್ತದೆಯೋ ಹಾಗೆ ಶುಕ್ರವಾರದ ರಾತ್ರಿಯೇ ಪುಸ್ತಕ ಮುಗಿಯಿತು.
ಬೆಳಿಗ್ಗೆ ಎದ್ದು ಹಲ್ಲುಜ್ಜಲು ಸಿಂಕ್ ಮುಂದೆ ನಿಂತೆ, ಮೊನ್ನೆ ಹೊಲದಲ್ಲಿ ವಿಶೇಷ ಕಲ್ಲೊಂದು ಸಿಕ್ಕಿತ್ತು, ಅದನ್ನು ತಂದು ನೀರಲ್ಲಿ ನೆನೆ ಇಟ್ಟಿದ್ದು ಕಣ್ಣಿಗೆ ಬಿತ್ತು ; ಕಲ್-ಸಂಜೀವಮ್ಮನ ಕತೆ ಸರ್ರ್ ನೆ ತಲೆಯಲ್ಲಿ ಓಡಿತು!!!
ಹಲ್ಲುಜ್ಜುತ್ತಲೇ, ಹೆಂಡತಿಯ ಹೆರಿಗೆಯ ದಿನ ನೆನಪಾಗಿ 05.04.2150 ರಂದು "ಹೆರಿಗೆ" ಪದ್ಧತಿ ಹೇಗೆಲ್ಲ ಬದಲಾಗಬಹುದು ಎಂದು ಹುಬ್ಬೇರಿತು. ಮುಖ ತೊಳೆಯಲು ನಡು ಬಗ್ಗಿಸಲಾಗದೆ ಸೊಂಟದ ನೋವಿನಿಂದ ಬಳಲುತ್ತಿರುವ ನಾನು ಸ್ಪೈನಲ್ ಆಪರೇಶನ್ ಸಮಯದಲ್ಲಿ ಬೆನ್ನುಹುರಿ ನರಗಳಲ್ಲಿ ಮೆದುಳಿಗೆ 'ಚಿಪ್' ಒಂದನ್ನು ಅಳವಡಿಸಿ ನಾನೂ ಸೈಬರ್ಗ್ ಸತೀಶ ಆದಂತೆ ಬಾಯಿ ಮುಕ್ಕಳಿಸುವಷ್ಟರಲ್ಲಿ ನಡೆದುಹೋಗಿತ್ತು.
ಇಷ್ಟೆಲ್ಲ ಕನಸು ಕಾಣುತ್ತಲೇ "quick ಆಗಿರಬೇಕು, quick ಆಗಿರಬೇಕು..." ಎಂದು ಆಫೀಸ್ನ ಸಾಹೇಬ ನನ್ನನ್ನು ಒಂದು ರೀತಿಯಲ್ಲಿ ಯಂತ್ರದಂತೆ ಮಾಡಿದ್ದು ಮನದಲ್ಲಿ ಸುಳಿಯದೇ ಇರಲಿಲ್ಲ !
ಮನುಷ್ಯ ಹೆಚ್ಚು ದಿನ ಬದುಕಲು ಅವಕಾಶ ಸಿಕ್ಕರೆ ಏನೆಲ್ಲ ಯೋಚ(ಜ)ನೆ ಮಾಡುವನಲ್ಲಾ..!?! ಕೊನೆಗೆ ಅಮೃತವೇ ವಿಷವಾಗಿ ಪರಿಣಮಿಸುತ್ತದೆ.
ಲೆಕ್ಕ ಪಕ್ಕಾ ಇದೆ ಎನ್ನುವಾಗಲೇ ಪಕ್ಕದಲ್ಲಿ ಯಾರೋ ಬಂದಂತೆ - ಅವರು ಬಂದು ಬಿಟ್ಟರು ! ನಮ್ಮೊಳಗಿದ್ದು ನಮ್ಮಂತಲ್ಲದ ಮಾಯೆ, ನಮ್ಮನ್ನೇ ಮಾಯೆಗೆ ತಳ್ಳುವುದು ಅತಿಶಯೋಕ್ತಿಯೇನಲ್ಲ. ಯಾಕೆಂದರೆ ಸೃಷ್ಟಿರುವ ಮನುಷ್ಯ ಅದಕ್ಕೆ ಬುದ್ಧಿಮತ್ತೆ ಅಭಿವೃದ್ಧಿ ಪಡಿಸುವಾಗ ಸ್ವಾರ್ಥಕ್ಕಾಗಿ ಮಾಡಿದರೂ ತನ್ನನ್ನು ತಾನು ಮುಕ್ತಿಗೊಳಿಸಿಕೊಂಡಿದ್ದು "ನೂರ್"ಳ ಪುಣ್ಯವೇ ಸರಿ.
ಅರ್ಕಾಲಜಿ ಬೆಳೆದ ಯುಗದಲ್ಲಿ ಅರೆರೆ ಆಯಸ್ಸನ್ನು ಅಗಲಿಸಿಕೊಳ್ಳುತ್ತ ಹೋಗುವ ನಾನು ಯಾವುದನ್ನೂ ಹೇಗೆ ಬೇಕಾದರೂ ಸಮಯಕ್ಕೆ ಮತ್ತು ಅವಶ್ಯಕತೆಗೆ ತಕ್ಕಂತೆ ಅಚ್ಚುಕಟ್ಟಾಗಿ ಬಳಸಿಕೊಳ್ಳುವ ತೀಕ್ಷ್ಣತೆ ಪಡೆದು ಬೆಳೆದವನಾಗಿದ್ದೆ..
ತೆಳ್ಳಗಾಗುವ 'ಮಾಯಾ ಮದ್ದು' ಮುದ್ದಾಗಿ ಕಂಡು ಮನುಷ್ಯನ ಹಣ, ಪ್ರಸಿದ್ಧಿ, ಹೆಸರು ಗಳಿಸುವ, ಪ್ರತಿಷ್ಠೆಗಾಗಿ ಬದುಕಲು ಹೋಗಿ ಮಣ್ಣಾದ ಅಮಾಯಕರನ್ನು ನೋಡಿ 'ಕೋಮಾ'ಗೆ ಹೋಗಿ ನನ್ನ ಅಸ್ತಿತ್ವಕ್ಕೂ ಮುನ್ನ ನಾನು ಎಲ್ಲೆಲ್ಲಿ ಏನೇನು ಕಂಡೆ, ಉಂಡೆ ಎಲ್ಲವೂ 'ಸ್ಮೃತಿ ಪಟಲ'ದಲ್ಲಿ ಭಿತ್ತರವಾಯಿತು.
ಮರಳುಗಾಡಿನಲ್ಲಿ ನೀರಿಗಾಗಿ ಅಲೆಯುವಂತೆ ಇತ್ತೀಚಿನ ಕೆಲ ದಿನಗಳಿಂದ ಇಂತಹ ಪುಸ್ತಕಕ್ಕಾಗಿ ಅಲೆಯುತ್ತಿದ್ದೆ. ತಂದಿದ್ದ ಬೇರೆಲ್ಲ ಪುಸ್ತಕಗಳನ್ನು ಓದುವ ಮನಸ್ಸಿಲ್ಲದೆ ಕಪಾಟಿನಲ್ಲಿ ಹಾಗೆ ಎಸೆದಿದ್ದೆ. ಈ ಬಾನಂಚಿನ ಆಚೆ ಎಂಬ ಪುಸ್ತಕ ನನ್ನನ್ನು ಅಮ್ಮನಿಗೆ ಗೋಗರೆವ ಕರುವನ್ನು ತಾಯಿ ಸಂತೈಸಿದಂತೆ ಎನಿಸಿತು.
ಡಾ. ಶಾಂತಲ ಅವರಿಂದ ಈ ರೀತಿಯ ನೂರಾರು ಪುಸ್ತಕಗಳು ಬಂದು ಜನರಲ್ಲಿ ಮೂಢನಂಬಿಕೆ, ಕಂದಾಚಾರ, ಅಂಧ ಆನುಕರಣೆಗಳು ತೊಡೆದು ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಪ್ರವೃತ್ತಿ ಹೆಚ್ಚಿಗೆ ಬೆಳೆಯಲಿ ಎಂದು ಆಶಿಸುತ್ತೇನೆ.
ಧನ್ಯವಾದಗಳು.
ಬಾನಂಚಿನ ಆಚೆ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/kn/products/baanachina-aache-kannada-books
ಬಾನಂಚಿನ ಆಚೆ ಪುಸ್ತಕದ ಲೇಖಕಿಯಾದ ಡಾ.ಶಾಂತಲ ಅವರ ಸಂದರ್ಶನ - https://youtu.be/syknvMCqZvs
ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com
]]>ಈಗ ಇಂತದ್ದೇ ಒಂದು ಪ್ರಯತ್ನವನ್ನು ಹರಿವು ಬುಕ್ಸ್ ಮಾಡುತ್ತಿದೆ. ರೋಚಕ ಕತೆಗಳ ಪುಸ್ತಕವಾದ ‘ಪಾತಾಳಗರಡಿ’, ಸೈನ್ಸ್ ಫಿಕ್ಷನ್ ಕತೆಗಳ ಪುಸ್ತಕ ‘ಬಾನಂಚಿನ ಆಚೆ’, ಬಣ್ಣ ಬಣ್ಣದ ಮಕ್ಕಳ ಪುಸ್ತಕಗಳಾದ ‘ರಿಕ್ಕು ರಿಕ್ಷಣ್ಣ’, ‘ಚಿನ್ನಿಯ ರಜಾಯಿ’ ಮತ್ತು ‘ಅಳಿಲು ಸೇವೆ’, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ‘ನಮ್ಮ ಭಾರತ’, 60ಕ್ಕೂ ಹೆಚ್ಚು ವೈದ್ಯ ಬರಹಗಾರರು ಬರೆದ ‘ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ’ ಹೀಗೇ ಹತ್ತು ಹಲವು ಪುಸ್ತಕಗಳನ್ನು ಪ್ರಕಟಿಸಿರುವ ನಾವು ಈಗ ಇದೇ ಫೆಬ್ರವರಿ 18ರಂದು ನಮ್ಮ ಮೊಟ್ಟ ಮೊದಲ ಕವನ ಸಂಕಲನವನ್ನು ಹೊರತರುತ್ತಿದ್ದೇವೆ.
ಸೌಮ್ಯಕಾಶಿ ಅವರು ಬರೆದ ‘ಹೇಳದೇ ಉಳಿದದ್ದು!’ ಎಂಬ ಒಲವ ಕವಿತೆಗಳ ಸಂಗ್ರಹವು ನಮ್ಮ ಪ್ರಕಾಶನದ ಮೊಟ್ಟ ಮೊದಲ ಕವನ ಸಂಕಲನ. ಒಲವ ಕವಿತೆಗಳು ಹಾಗು ಚಂದದ ಚಿತ್ರಗಳಿರುವ ಈ ಮುದ್ದಾದ ಪುಸ್ತಕವನ್ನು ಒಂದು ಕಪ್ ಕಾಫಿ ಹೀರುತ್ತಾ ಸವಿಯಬಹುದು ಅಥವಾ ನಿಮ್ಮ ಹುಡುಗನಿಗೋ/ಹುಡುಗಿಗೋ ಉಡುಗೊರೆಯಾಗಿ ಕೊಟ್ಟು ನಿಮ್ಮ ಭಾವನೆಗಳನ್ನು ಕವಿತೆಯ ರೂಪದಲ್ಲಿ ಹಂಚಿಕೊಳ್ಳಬಹುದು.
‘ಹೇಳದೇ ಉಳಿದದ್ದು!’ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/products/helade-uliddaddu-harivu-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com
]]>
ಉಡುಗೊರೆ ಆಪ್ತವೆನಿಸುವುದು ಅದರ ಬೆಲೆಯಿಂದಾಗಿ ಅಲ್ಲ. ಉಡುಗೊರೆ ಆಪ್ತವೆನಿಸುವುದಕ್ಕೆ ಕಾರಣ ಅದನ್ನು ಕೊಡಲು ಬಯಸುವ ವ್ಯಕ್ತಿಯ ಭಾವನೆ ಹಾಗು ನಿಮಗೆ ಆ ವ್ಯಕ್ತಿಯ ಮೇಲೆಯಿರುವ ಪ್ರೀತಿ. ಹಾಗಾದ್ರೆ ಉಡುಗೊರೆಯಾಗಿ ಕೊಡಬಹುದಾದ ವಸ್ತು ಯಾವ್ದು ಗೊತ್ತಾ? ನಿಮ್ಮ ಪ್ರೀತಿ ಪಾತ್ರರಿಗೆ ನೀವು ಕೊಡಬಹುದಾದ ಒಂದು ಒಳ್ಳೆ ಉಡುಗೊರೆ ಅಂದ್ರೆ ಅದು ಪುಸ್ತಕಗಳು. ಯಾಕೆ ಅಂತ ಯೋಚ್ನೆ ಮಾಡ್ತಾ ಇದೀರಾ? ನಿಮಗೆ ಹೇಳಿಕೊಳ್ಳೋಕೆ ಆಗದೇ ಇರೋ ಅಂತಾ ಭಾವನೆಗಳನ್ನ, ನೀವು ಕೊಡೋ ಪುಸ್ತಕದಲ್ಲಿ ಇರೋ ಪಾತ್ರದ ಮೂಲಕ ಅವರಿಗೆ ತಿಳಿಸಬಹುದು ಅಲ್ವಾ? ಮತ್ತೆ ಯಾಕೆ ತಡ ನಿಮ್ಮ ಪ್ರೀತಿಪಾತ್ರರಿಗೆ ಈಗಲೇ ಪುಸ್ತಕಗಳನ್ನ ಉಡುಗೊರೆಯಾಗಿ ಕೊಡಿ, ನಿಮ್ಮ ಭಾವನೆಗಳನ್ನ ಅವರಿಗೆ ತಿಳಿಸಿ.
ಹಾಗಾದ್ರೆ ಯಾವ ಯಾವ ಪುಸ್ತಕಗಳನ್ನು ನೀವು ಉಡುಗೊರೆಯಾಗಿ ಕೊಡಬಹುದು?
ರವಿ ಬೆಳಗೆರೆ ಅವರು ಬರೆದಿರುವ ‘ಹೇಳಿ ಹೋಗು ಕಾರಣ’ ಒಂದು ಸುಂದರವಾದ ಪ್ರೇಮ ಕಾದಂಬರಿ. ಯಾವುದೇ ನಿರೀಕ್ಷೆಗಳಿಲ್ಲದೆ ಪ್ರೀತಿ ಮಾಡುವ ಹುಡುಗ ಹಿಮವಂತ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ ರೀತಿ ಓದುವವರನ್ನು ಕಾಡುತ್ತದೆ. ಜೊತೆಗೆ ಕಾದಂಬರಿಯಲ್ಲಿ ಬರುವ ಇತರೆ ಪಾತ್ರಗಳಾದ ಪ್ರಾರ್ಥನಾ, ಊರ್ಮಿಳಾ ನಮ್ಮ ನಿಮ್ಮ ನಡುವೆಯೇ ಇರುವಂತೆ ಕಾಣುತ್ತದೆ. ಓದುತ್ತಾ ಹೋದಂತೆ ಕಾದಂಬರಿಯಲ್ಲಿ ಬರುವ ಪಾತ್ರಗಳ ಜೊತೆ ನಮ್ಮನ್ನು ನಾವು ಹೋಲಿಸಿಕೊಳ್ಳುವಂತೆ ಮಾಡುವ ಈ ಪುಸ್ತಕ ಒಂದೊಳ್ಳೆ ಪ್ರೇಮ ಕಾದಂಬರಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
https://harivubooks.com/kn/products/heli-hogu-karana
ಮಾನವ ಸಂಬಂಧಗಳ ನುಡುವೆ ಇರುವ ಪ್ರೀತಿ ವಿಶ್ವಾಸ ವಂಚನೆಗಳ ಸುತ್ತ ಹೆಣೆಯಲಾಗಿರುವ ಈ ಕಾದಂಬರಿ ಎಷ್ಟು ಗಾಢವಾಗಿ ನಮ್ಮನ್ನು ಆವರಿಸುತ್ತದೆ ಎಂದರೆ, ಓದುತ್ತಾ ಹೋದಂತೆ ನಾಯಕ ಶಿಶಿರಚಂದ್ರನನ್ನು ನಮ್ಮಲ್ಲಿ ನಾವು ಕಲ್ವಿಸಿಕೊಳ್ಳುತ್ತಾ ಹೋಗುತ್ತೇವೆ. ರವಿ ಬೆಳಗೆರೆ ಅವರು ಬರೆದಿರುವ ಈ ಪ್ರೇಮ ಕಾದಂಬರಿಯನ್ನು ಓದಿದರೆ ನಿಮ್ಮೊಳಗೂ ಒಬ್ಬ ಪ್ರೀಮಿ ಹುಟ್ಟಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ.
https://harivubooks.com/kn/products/nee-hinga-nodabyadananna-ravi-belagere
ಪೂರ್ಣಿಮಾ ಮಾಳಗಿಮನಿ ಅವರು ಬರೆದಿರುವ ‘ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ’ ಪುಸ್ತಕವು ಪ್ರೇಮ ಮತ್ತು ಯಾತನೆಯನ್ನು ಒಳಗೊಂಡ ಸುಂದರ ಕೃತಿ. ಪುಸ್ತಕದ ಅಡಿ ಬರಹವೇ ಹೇಳುವಂತೆ ಈ ಪುಸ್ತಕವನ್ನು ಓದುತ್ತಿದ್ದರೆ ನಿಮಗೆ ಕಾಲಡಿಯ ಕಡಲಂಚು ಕುಸಿಯುವಾಗ ಕೊಡುವ ಕಚಗುಳಿಯ ಅನುಭವ ಆಗುವುದರಲ್ಲಿ ಅನುಮಾನವೇ ಇಲ್ಲ.
https://harivubooks.com/kn/products/preethi-prema-pustakadacheya-badanekaayi-book
ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಉತ್ತಮ ಉಡುಗೊರೆ ಎಂದರೆ ಅದು ಪುಸ್ತಕ, ಆದರೆ ಒಬ್ಬರು ಇನ್ನೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ ಅದು ಸಮಯ. ಆದರೆ ಬರೀ ಸಮಯವನ್ನಷ್ಟೇ ಕೊಟ್ಟರೆ ಹೇಗೆ? ಆಗಾಗ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅವರಿಗೆ ಏನಾದ್ರೂ ಒಂದು ಉಡುಗೊರೆ ಕೊಡಬೇಕಲ್ಲ? ಅದಕ್ಕೆ ಪರ್ಫೆಕ್ಟ್ ಈ ‘ದಿ ಗಿಫ್ಟ್’.
https://harivubooks.com/kn/products/the-gift-ravi-belagere-kannada-book
ಮೇಘನಾ ಸುಧೀಂದ್ರ ಅವರು ಬರೆದ ಈ ಕಾಲದ ಪ್ರೀತಿ ಕತೆಗಳ ಸಂಗ್ರಹವೇ ‘ಪ್ರೀತಿ ಗೀತಿ ಇತ್ಯಾದಿ’ ಪುಸ್ತಕ.
https://harivubooks.com/kn/products/preethi-geethi-ityadi-meghana-sudhindra-kannada-stories
ಬೇರೆ ಬೇರೆ ಮನಸ್ಥಿತಿಯನ್ನು ಹೊಂದಿರುವ ಇಬ್ಬರು ಒಟ್ಟಿಗೇ, ಒಂದೇ ಸೂರಿನ ಕೆಳಗೆ ಬದುಕುವುದು ಸುಲಭದ ಮಾತಲ್ಲ. ಇದು ಜೀವನದ ‘ವನ್ ಆಫ್ ದ ಟಫೆಸ್ಟ್ ಕಾಂಟ್ರಕ್ಟ್ಸ್’. ಜೋಗಿ ಅವರು ಬರೆದ ‘ಐ ಹೇಟ್ ಮೈ ವೈಫ್’ ಪುಸ್ತಕವು ದಾಂಪತ್ಯದ ಕತೆಗಳ ಕುರಿತಾದ ಪ್ರಸಂಗಗಳ ಸುತ್ತ ಹೆಣೆಯಲಾಗಿದೆ.
https://harivubooks.com/kn/products/ihate-my-life-jogi-sawanna
ಉಷಾ ನವರತ್ನರಾಮ್ ಅವರು ಬರೆದ ‘ಪ್ರೀತಿಸಿ ನೋಡು’ ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕೆನಿಸುವ, ಮನಸ್ಸಿನಲ್ಲಿ ಆಳವಾಗಿ ಬೇರೂರಿ ಬಿಡುವಂತಹಾ ಪುಸ್ತಕ. https://harivubooks.com/kn/products/preetisi-nodu-kannada-novel
ಕನ್ನಡ ಚಲನಚಿತ್ರ ರಂಗದಲ್ಲಿ ನವಿರಾದ ಪ್ರೇಮ ಕವಿತೆಗಳನ್ನು ಬರೆದು ಖ್ಯಾತರಾದ ಜಯಂತ ಕಾಯ್ಕಿಣಿ ಅವರ ಬರಹಗಳ ಸಂಗ್ರಹವಾದ ‘ಗುಲ್ ಮೊಹರ್’ ಪುಸ್ತಕವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಒಂದು ಅದ್ಭುತ ಪುಸ್ತಕಗಳಲ್ಲಿ ಒಂದು.
https://harivubooks.com/kn/products/gulmohar-kannada-articles-jayant-kaikini-ankita
ವಸುಮತಿ ಉಡುಪ ಅವರು ಬರೆದ ‘ಬೊಗಸೆ ತುಂಬಾ ನಕ್ಷತ್ರ’ ಕಥಾ ಸಂಕಲನದಲ್ಲಿ ಮಹಿಳೆಯರೇ ಕೇಂದ್ರ ಪಾತ್ರಗಳಾಗಿದ್ದರೂ, ಈ ಪುಸ್ತದಲ್ಲಿ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸಲಾಗಿದೆ.
https://harivubooks.com/kn/products/bogase-tumbaa-nadshatragalu-kannada-story-book
ಮುಗ್ಧತೆ ಕೂಡ ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು 'ಪ್ರೀತಿ, ಪ್ರಣಯ, ಪುಕಾರು' ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಸಾಂಗತ್ಯ, ಪ್ರೀತಿ ಆಕಾರಣವಾದದ್ದು, ದಾಂಪತ್ಯದಲ್ಲಿ ದ್ವೇಷಿಸಲು ನಮ್ಮ ಸಮಾಜ ನಮಗೆ ಹಾದರದಂತ ಕಾರಣಗಳನ್ನು ಕಟ್ಟಿಕೊಡುತ್ತದೆ. ಆದರೆ ಪ್ರೀತಿಸುವುದನ್ನು ನಾವೇ ಕಲಿತುಕೊಳ್ಳಬೇಕು. ಮೈ ಮತ್ತು ಮನಸ್ಸಿನ ಅವಶ್ಯಕತೆಗಳನ್ನು ಬೇರೆಬೇರೆ ಎಂದು ಭಾವಿಸುವ ಮತ್ತು ಈ ರೀತಿ ಬಾಳುವುದರಿಂದ ಪರಸ್ಪರರಿಗೆ ಆಗುವ ಸುಖ-ದುಃಖಗಳ ಪರಿಕಲ್ಪನೆಯನ್ನು ಅವರದೇ ರೀತಿಯಲ್ಲಿ ಪರಿಭಾವಿಸಿಕೊಂಡು, ಅದಕ್ಕೆ ತಕ್ಕನಾಗಿ ಬಾಳುವ ಮುಗ್ಧ ದಂಪತಿಗಳ ಕತೆಯಿದು, ಪಾತ್ರಗಳ ಮುಗ್ಧತೆ ಈ ಕತೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
https://harivubooks.com/kn/products/preeti-pranaya-pukaaru-kannada-book
ಈ ಪ್ರೇಮಿಗಳ ದಿನಾಚರಣೆಗೆ, ಇದಿಷ್ಟೂ ಪುಸ್ತಕಗಳನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದು. ಇದಿಷ್ಟೇ ಅಲ್ಲದೆ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಬೇರೆ ಯಾವುದಾದರೂ ಪುಸ್ತಕಗಳ ನಿಮಗೆ ತಿಳಿದಿದ್ದರೆ ಕಮೆಂಟ್ ಮೂಲಕ ನಮಗೆ ತಿಳಿಸಿ!
]]>"ಮನೆಯಲ್ಲಿ ಇರುವಂತಹ ಮೇಷ್ಟ್ರುಗಳೆಂದರೆ ಪುಸ್ತಕಗಳು. ಅದಕ್ಕಿಂತ ದೊಡ್ಡ ಟೀಚರ್ ಇಲ್ಲ. ಸರಿಯಾದ ಪುಸ್ತಕ ಓದುವುದರಿಂದ ನಿಮ್ಮ ಮನಸ್ಸು, ನಿಮ್ಮ ಅಭಿಪ್ರಾಯ, ಯೋಚನೆ ಮಾಡುವ ರೀತಿ ಬದಲಾಗುತ್ತದೆ. ಅದಕ್ಕಿಂತ ಶಕ್ತಿಯುತವಾದ ವಿಷಯ ಇನ್ನೊಂದಿಲ್ಲ"
- ರಮೇಶ್ ಅರವಿಂದ, ಲೇಖಕ ಮತ್ತು ನಟ
ನನ್ನ ಮಗಳು ಹುಟ್ಟಿದಾಗ ನಾನು ಅವಳಿಗಾಗಿ ಮಕ್ಕಳ ಕತೆ ಪುಸ್ತಕಗಳನ್ನು ಕೊಂಡುಕೊಂಡು ಓದುವಾಗ, ಕೆಲ ಗೆಳತಿಯರು ಹಾಗೂ ಸಂಬಂಧಿಕರು ಕೇಳಿದ್ದು "ಈಗ್ಲೇ ಓದಿಸಿ ಐಎಎಸ್ ಪಾಸ್ ಮಾಡಸ್ತ್ಯ?" ಅಂತ. ಆದರೆ ನಾನು ನನ್ನ ಮಗಳಿಗೆ ಪುಸ್ತಕಗಳನ್ನು ಪರಿಚಯಿಸಿದ್ದು ಅವಳಿಗೆ ಪುಸ್ತಕಗಳ ಮೇಲೆ ಪ್ರೀತಿ ಹುಟ್ಟಲಿ, ಪುಸ್ತಕ ಓದುವುದರ ಬಗ್ಗೆ ಆಸಕ್ತಿ ಹುಟ್ಟಲಿ ಅಂತ. ನಿಮಿಗೊತ್ತಾ? ಮಕ್ಕಳಿಗೆ ಕತೆ ಪುಸ್ತಕ ಓದುವುದರಿಂದ ತುಂಬ ಪ್ರಯೋಜನಗಳಿವೆ. ಅದರ ಬಗ್ಗೆ ನನಗೆ ತಿಳಿದಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
"ಜರ್ನಲ್ ಒಫ್ ಡೆವಲಪ್ಮೆಂಟ್ ಅಂಡ್ ಬೆಹವಿಯರ್ ಪೀಡಿಯಾಟ್ರಿಕ್ಸ್" ಅವರ ಅಧ್ಯಯನ ಪ್ರಕಾರ ಮಗುವಿಗೆ ದಿನಕ್ಕೆ ಒಂದು ಪಿಕ್ಚರ್ ಪುಸ್ತಕ ಓದುವುದರಿಂದ ವರ್ಷದಲ್ಲಿ ಆ ಮಗುವಿಗೆ 78,000 ಪದಗಳ ಪರಿಚಯವಾಗಿರುತ್ತದೆ.
ಓದುವುದರಿಂದ ಸೃಷ್ಟಿಯಾಗುವ ಕಲಿಕೆಯ ವಾತಾವರಣದಲ್ಲಿ ಶಿಶುಗಳು ಮತ್ತು ಮಕ್ಕಳು ಸಂಭಾಷಣೆ ಮೂಲಕ ಎಂದಿಗೂ ಎದುರಿಸದ ಪದಗಳಿಗೆ ಒಡ್ಡಿಕೊಳ್ಳುತ್ತಾರೆ.
ನಾವು ಮನೆಯಲ್ಲಿ ಮಗಳೊಂದಿಗೆ ಕನ್ನಡದಲ್ಲಿ ಅಷ್ಟೇ ಸಂಭಾಷಿಸಿದರು, ಜಾಸ್ತಿ ಇಂಗ್ಲಿಷ್ ಪುಸ್ತಕಗಳನ್ನು ಓದಿದ್ದರಿಂದ ಅವಳ ಇಂಗ್ಲಿಷ್ ಶಬ್ದಕೋಶ ನಾನ್ -ನೇಟಿವ್ ಸ್ಪೀಕರ್ ಗೆ ಉತ್ತಮವಾಗಿದೆ.
ಓದುವಾಗ ಉಪಯೋಗಿಸುವ ಬೇರೆ ಶಬ್ದಗಳು ಮತ್ತು ದನಿ ಮಾಡುಲೇಷನಿಂದ ಮಕ್ಕಳಿಗೆ ಶಬ್ದದ ಹಿಂದಿರುವ ಭಾವನೆಗಳು ಅರ್ಥವಾಗುತ್ತದೆ. ನಾನು ನನ್ನ ಮಗಳಿಗೆ ಓದುವಾಗ ಅವಳು ನನ್ನ ಧ್ವನಿಯಿಂದಲೇ ಪುಸ್ತಕದಲ್ಲಿ ಬರುವ ಪಾತ್ರ ಖುಷಿಯಾಗಿದೆಯೋ, ಬೇಜಾರಾಗಿದೆಯೋ ಅಥವಾ ಕೋಪ ಮಾಡಿಕೊಂಡಿದೆಯೋ ಎಂದು ತಿಳಿದು ಆ ಪಾತ್ರ ಆ ರೀತಿ ಯಾಕೆ ಇದೆ ಎಂದು ಪ್ರೆಶ್ನಿಸುತ್ತಾಳೆ, ಕೆಲವೊಮ್ಮೆ ಅವಳೇ ಕಾರಣವನ್ನು ಕೊಡುತ್ತಾಳೆ.
ಮಕ್ಕಳಿಗೆ ಪುಸ್ತಕಗಳು ಓದುವುದರಿಂದ ಪೋಷಕರ ಹಾಗೂ ಮಗುವಿನ ಭಾವನಾತ್ಮಕ ಬಾಂಧವ್ಯ ವೃದ್ಧಿಸುತ್ತದೆ. ಸದಾ ಕೆಲಸದಲ್ಲಿ ಬ್ಯುಸಿ ಇರುವ ಪೋಷಕರು, ಮಗುವಿಗೆ ಪುಸ್ತಕ ಓದುವುದರಿಂದ ಮಗುವಿನೊಂದಿಗೆ "ಕ್ವಾಲಿಟಿ ಟೈಮ್" ಕಳೆಯಬಹುದು. ಮಗುವಿಗೆ ತಂದೆ ತಾಯಿಯ ಧ್ವನಿ ಕೇಳಲು ಹಿತವೆನ್ನಿಸುತ್ತದೆ. ಮಗುವಿಗೆ ಪೋಷಕರೊಂದಿಗೆ ಕಾಲ ಕಳಿಯುವುದರಿಂದ ಸಿಗುವ ಸೊಂತೋಷ ನೂರುಪಟ್ಟು.
ಮಗಳಿಗೆ ಹುಷಾರಿಲ್ಲದಿದ್ದರೆ, ಯಾವುದೋ ವಿಷಯಕ್ಕೆ ಬೇಜಾರ್ ಆಗಿದ್ದರೆ ಅವಳು ತನ್ನಷ್ಟಿಗೆ ತಾನೇ ಪುಸ್ತಕ ತಗೊಂಡು ಪುಟ ತಿರುವಿ ಹಾಕುತ್ತಿರುತ್ತಾಳೆ ಅಥವಾ ಪುಸ್ತಕ ಓದುತ್ತೀರಾ ಎಂದು ಕೇಳಿ ಓದಿಸಿ ಕೊಳ್ಳುತ್ತಾಳೆ.
ಕೇವಲ ಪರೀಕ್ಷೆಗೆ ಓದುವುದಾದರೆ ಮಕ್ಕಳು ಓದುವುದನ್ನು ಒಂದು ಕೆಲಸ ಎಂದು ತಿಳಿದು ಆಸಕ್ತಿ ತೋರುವುದಿಲ್ಲ.
ಕತೆ ಪುಸ್ತಕ ಓದುವುದನ್ನು ದಿನಚರಿಯ ಒಂದು ಭಾಗ ಮಾಡಿಕೊಂಡಾಗ, ಮಕ್ಕಳಿಗೆ ಓದುವುದು ಒಂದು ಮೋಜಾಗುತ್ತದೆ. ಕತೆ ಪುಸ್ತಕಗಳನ್ನು ಓದುವ ಮನೋಭಾವ ಅವರು ಬೆಳೆದ ನಂತರವೂ ಒಂದು ಹವ್ಯಾಸವಾಗಿ ಉಳಿಯುತ್ತದೆ. ಜೀವನ ಪಾಠವಿಲ್ಲದ ಕೇವಲ ಸಿಲ್ಲಿ ಪಾತ್ರಗಳಿಂದ, ಕತೆಯಿಂದ ಕೂಡಿರುವ ಪುಸ್ತಕ ಓದುವುದು ಮಕ್ಕಳಿಗೆ ಮೋಜು ಕೊಡುತ್ತದೆ.
ಎಷ್ಟೋ ಸಲ ಮಗಳು ನಾನ್-ಸೆನ್ಸ್ genre ಪುಸ್ತಕಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತಾಳೆ ಹಾಗೂ ಓದುವಾಗ ನಗುತ್ತಿರುತ್ತಾಳೆ. ಓದಿದ ಮೇಲೆ "ಈ ಪುಸ್ತಕ ಎಷ್ಟು ಮಜಾ ಇದೆ ಅಲ್ವಾ. ಇನ್ನೊಂದ್ ಸಲ ಹೇಳಿ" ಎನ್ನುತ್ತಾಳೆ.
ಪುಸ್ತಕಗಳಲ್ಲಿ ಮಕ್ಕಳು ಅವರಂತೆ ಇರುವ, ಅವರ ಸುತ್ತಾ ಮುತ್ತಾ ಇರುವ ಪಾತ್ರಗಳನ್ನು ಹಾಗು ಸಂಸ್ಕೃತಿಯನ್ನು ನೋಡುತ್ತಾರೆ. ಇದರಿಂದ ಅವರಿಗೆ ಹೊಂದಿಕೊಳ್ಳುವ ಭಾವ ಬೆಳೆಯುತ್ತದೆ. ಬೇರೆ ಸಂಸ್ಕೃತಿ, ದೇಶದ ಕಥೆಗಳನ್ನು ಓದುವುದರಿಂದ ಮಕ್ಕಳಿಗೆ ಹೊಸ ಪ್ರಪಂಚದ ಪರಿಚಯವಾಗುತ್ತದೆ.
ಪಿಕ್ಚರ್ ಪುಸ್ತಕಗಳು ಸಂವಾದತ್ಮಕ ಕತೆ ಹೇಳುವಿಕೆಗೆ ವೇದಿಕೆ ಸೃಷ್ಟಿಸುತ್ತದೆ. ಮಕ್ಕಳು ಚಿತ್ರಗಳನ್ನು ಗಮನಿಸುತ್ತ ಪ್ರಶ್ನೆ ಕೇಳುತ್ತಾರೆ ಹಾಗೂ ಕಥೆಯನ್ನು ನೆನಪಿಟ್ಟು ಕೊಳ್ಳುತ್ತಾರೆ. ಕೆಲವೊಮ್ಮೆ ಕತೆ ಗೊತ್ತಿಲ್ಲದಿದ್ದರೂ ಇಲ್ಲುಸ್ಟ್ರೇಷನ್ಸ್ ನೋಡಿ ಅವರೇ ಅವರಿಗೆ ಅರ್ಥವಾದಂತೆ ಕತೆ ಹೇಳಲು ಶುರು ಮಾಡುತ್ತಾರೆ.
ಹೊಸ ಪುಸ್ತಕ ಕೊಂಡಾಗ ಮಗಳಿಗೆ ನೀನೆ ಕತೆ ಹೇಳು ಅಂದರೆ ಚಿತ್ರಗಳನ್ನು ನೋಡುತ್ತಾ ಕತೆ ಹೇಳಲು ಶುರು ಮಾಡುತ್ತಾಳೆ. ಎಷ್ಟೋ ಸಲ ಅವಳು ಊಹಿಸಿ ಹೇಳುವ ಕತೆ ಸರಿಯಾಗಿ ಇರುತ್ತದೆ.
ಯಾವಾಗ ಮತ್ತು ಹೇಗೆ ಓದಬೇಕು?
ಮಕ್ಕಳಿಗಾಗಿ ಓದುವುದಕ್ಕೆ ವಿಶೇಷವಾದ ಕೌಶಲ್ಯಗಳು ಬೇಡ. ನೀವು, ನಿಮ್ಮ ಮಗು ಮತ್ತು ಕೆಲವು ಪುಸ್ತಕಗಳು ಸಾಕು.
ಮಕ್ಕಳಿಗಿಂತ ಶಿಶುಗಳಿಗೆ ಓದುವುದು ತುಂಬಾ ಸುಲಭದ ಕೆಲಸ. ಅಂಬೇಗಾಲಿಡುವ ಅಥವಾ ಪುಟ್ಟ ಮಕ್ಕಳಂತೆ ಶಿಶುಗಳು ಓದುವಾಗ ಓಡಿ ಹೋಗುವುದಿಲ್ಲ ಮತ್ತು ಓದಿದ ಪುಸ್ತಕವನ್ನೇ ಪುನಃ ಪುನಃ ಓದಲು ಪೀಡಿಸುವುದಿಲ್ಲ 😜 ಶಿಶುಗಳಿಗೆ ನೀವು ಓದುವ ಪುಸ್ತಕಕಿಂತ ನಿಮ್ಮ ಪ್ರೀತಿಯ ಧ್ವನಿ, ನಿಮ್ಮೊಂದಿಗೆ ಕಳೆಯುವ ಸಮಯ ಅವರಿಗೆ ಇಷ್ಟವಾಗುತ್ತದೆ. ತುಂಬಾ ಬೇಗ ಅಥವಾ ತುಂಬಾ ತಡವಾಗಿ ಓದುವುದನ್ನು ಶುರು ಮಾಡಿದೀವಿ ಎನ್ನುವ ಚಿಂತೆ ಬಿಡಿ. ಯಾವಾಗ ಓದಲು ಶುರು ಮಾಡಿದರು ಅದು ಸರಿಯಾದ ಸಮಯವೇ.
ನಮ್ಮ ಪ್ರಕಾಶನದ ಮಕ್ಕಳ ಪುಸ್ತಕಗಳು - https://harivubooks.com/kn/products/chinnara-bannada-pustakagalu
ನಮ್ಮ ಮಳಿಗೆಯಲ್ಲಿ ಸಿಗುವ ಇನ್ನಷ್ಟು ಬಣ್ಣ ಬಣ್ಣದ ಪುಸ್ತಕಗಳನ್ನು ಇಲ್ಲಿ ಕೊಳ್ಳಿ - https://harivubooks.com/kn/collections/kids-books-kannada
]]>ಹೊಸ ಪೀಳಿಗೆಯ ಜನರಲ್ಲಿ ಓದುವ ಹವ್ಯಾಸ ಸಾಕಷ್ಟು ಕಡಿಮೆಯಾಗಿದೆ. ಓದುಗರು ಸಿಗುವುದೇ ಅಪರೂಪ. ತನ್ನ ದಿನನಿತ್ಯದ ಕೆಲಸಗಳ ಮಧ್ಯೆ ಹಾಗೂ ಸಾಮಾಜಿಕ ಜಾಲತಾಣದ ವ್ಯೂಹದ ನಡುವೆ ಆತನಿಗಾಗಿ ಒಂದೊಳ್ಳೆಯ ಬರಹವನ್ನು ಕಟ್ಟಿಕೊಟ್ಟು ಆತನನ್ನು ಮತ್ತೆ ಓದಿನತ್ತ ಸೆಳೆಯುವುದು ನಿಜವಾದ ಸವಾಲಿನ ಕೆಲಸವಾಗಿದೆ. ಕಡಿಮೆಯೆಂದರೆ ದಿನಕ್ಕೆ ನಾಲ್ಕು ಪುಟಗಳನ್ನು ಓದುವಷ್ಟು ತಾಳ್ಮೆಯನ್ನು ಈಗಿನ ಪೀಳಿಗೆ ಕಳೆದುಕೊಂಡಿದೆ. ಅಂತಹವರು ಒಂದು ಕಾದಂಬರಿಯನ್ನು ಪೂರ್ತಿಯಾಗಿ ಓದಿ ಮುಗಿಸುವುದು ದೂರದ ಮಾತಾಗಿದೆ.
ಇಂತಹ ಸಂದರ್ಭದಲ್ಲಿ ಅವರ ಅಭಿರುಚಿಗೆ ತಕ್ಕಂತೆ ಬರಹಗಳನ್ನು ಬರೆದು ತಲುಪಿಸಿ ಅವರನ್ನು ಮೆಚ್ಚಿಸುವುದು ಬರಹಗಾರನಿಗೆ ಬೇಕಾದ ಇನ್ನೊಂದು ದೊಡ್ಡ ಶಕ್ತಿ. ಅವನು ಅದನ್ನು ಸಾಧಿಸಿದರೆ ಓದುಗ ಮತ್ತೆ ಪುಸ್ತಕಗಳಲ್ಲಿ ಸೆರೆಯಾಗುತ್ತಾನೆ.
ಈಗಿನ ಅಂತರ್ಜಾಲ ಯುಗದಲ್ಲಿ ಓದುಗ ಬಯಸುವುದು ತಾನು ಎಲ್ಲೂ ನೋಡಿರದ, ಕೇಳಿರದ, ಅನುಭವಿಸಿರದ ಕಥೆಯನ್ನು. ಮೊದಲೆಲ್ಲ ಇವು ಕೇವಲ ಪುಸ್ತಕಗಳಲ್ಲಿ ಮಾತ್ರ ಇದ್ದವು. ಏಕೆಂದರೆ ಆಗ ತಂತ್ರಜ್ಞಾನ ಎನ್ನುವುದು ಇರಲಿಲ್ಲ. ಈಗ ಅಂತರ್ಜಾಲ, ಸಾಮಾಜಿಕ ಜಾಲತಾಣ ಅಥವಾ ತಂತ್ರಜ್ಞಾನಗಳು ಅವನ್ನೆಲ್ಲಾ ಮಂಕಾಗಿಸಿದೆ. ಬರಹಗಾರನ ಬರವಣಿಗೆಯಲ್ಲಿ ಸಿಗುವ ರುಚಿ ಇವುಗಳಲ್ಲಿ ಸಿಗುವುದಿಲ್ಲ ಎಂದು ತಿಳಿದುಬಂದರೆ ಮತ್ತೆ ಅವರೆಲ್ಲ ಓದಿನ ಕಡೆ ಮುಖ ಮಾಡುತ್ತಾರೆ, ಆ ರುಚಿಯನ್ನು ಸವಿಯುತ್ತಾರೆ. ಆದರೆ ಅಂತಹ ರುಚಿಕರವಾದ ಬರಹವನ್ನು ಬಡಿಸುವ ಜವಾಬ್ದಾರಿ ಒಬ್ಬ ಒಳ್ಳೆಯ ಬರಹಗಾರನ ಮೇಲಿದೆ.
ಈಗ ಪತ್ತೆದಾರಿ ಕಾದಂಬರಿಯ ವಿಚಾರವನ್ನು ತೆಗೆದುಕೊಂಡರೆ ಈಗಿನವರಿಗೆ ಅದನ್ನು ಬರೆದು ಒಪ್ಪಿಸುವುದು ದೊಡ್ಡ ಸವಾಲು. ಕಾರಣ ಪ್ರತಿಯೊಬ್ಬ ಕೂಡ ಪ್ರತಿಯೊಂದಕ್ಕೂ ಸಾಕ್ಷಿ ಹುಡುಕುತ್ತಾನೆ. ತಾನು ನೋಡಿದ ಕೇಳಿದ ತಂತ್ರಜ್ಞಾನ, ಆವಿಷ್ಕಾರಗಳನ್ನು ಬರವಣಿಗೆಯ ಜೊತೆ ತುಲನೆ ಮಾಡುತ್ತಾನೆ. ಅದು ಸಹಜ ಕೂಡ. ಅದಕ್ಕಾಗಿ ಒಬ್ಬ ಪತ್ತೇದಾರಿ ಕಾದಂಬರಿಕಾರ ತನ್ನ ಕಥೆಯ ಜೊತೆ ಈಗಿನ ತಲೆಮಾರಿನ ಓದುಗನ ನಿರೀಕ್ಷೆಯನ್ನು ಮೀರಿ ಕಥೆಯನ್ನು ಬರೆಯುತ್ತಾ, ಅದರಲ್ಲಿ ಸಾಧ್ಯವಾದಷ್ಟು ರೋಚಕ ತಿರುವುಗಳನ್ನು ಇಟ್ಟು ಕಾದಂಬರಿಯನ್ನು ಸಿದ್ಧಪಡಿಸಿ ಓದುಗನ ಮುಂದಿಟ್ಟರೆ ಅದು ಓದುಗನಿಗೆ ಖುಷಿಕೊಡುತ್ತದೆ. ಅದಕ್ಕೆ ಬರಹಗಾರ ಸಾಕಷ್ಟು ಹುಡುಕಾಟ ನಡೆಸಬೇಕಾಗುತ್ತದೆ. ಪ್ರತಿಯೊಂದು ವಿಷಯಕ್ಕೆ ಸಾಕಷ್ಟು ಅನ್ವೇಷಣೆ ನಡೆಸಿರಬೇಕಾಗುತ್ತದೆ. ಅದು ಅವನ ಜವಾಬ್ದಾರಿ ಕೂಡ. ಓದುಗ ಬಯಸುವುದನ್ನು ಬರಹಗಾರ ಕೊಡುವುದು ಅವನ ಹೊಣೆ . ಹಾಗಿದ್ದರೆ ಮಾತ್ರ ಒಬ್ಬ ವ್ಯಕ್ತಿ ಮೊಬೈಲನ್ನು ಬಿಟ್ಟು ಪುಸ್ತಕದ ಕಡೆ ಮುಖ ಮಾಡುತ್ತಾನೆ.
ಥ್ರಿಲ್ಲರ್ ಇಷ್ಟಪಡುವ ಓದುಗನು ಆಂಗ್ಲ ಕಾದಂಬರಿಗಳತ್ತ ಹೊರಳುವುದೇಕೆ??
ನನ್ನ ಅನಿಸಿಕೆಯ ಪ್ರಕಾರ ಒಂದು ಕಾಲದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದ ನರಸಿಂಹಯ್ಯ, ಸುದರ್ಶನ್ ದೇಸಾಯಿ, ಜಿಂದೆ ನಂಜುಂಡಸ್ವಾಮಿ ಯವರ ನಂತರ ಅವರು ಸೃಷ್ಟಿಸಿ ಹೋಗಿದ್ದ ಓದುಗ ಸಮುದಾಯವನ್ನು ಉಳಿಸಿಕೊಳ್ಳಲು ನಾವು ವಿಫಲವಾಗಿದ್ದೇವೆ. ಬಹುಶಃ ನೀರಸ ಕಥಾವಸ್ತು ಅಥವಾ ಕಥಾಶೈಲಿಯು ಒಂದು ಕಾರಣವಾಗಿರಬಹುದು. ಇಲ್ಲವೇ ಇದ್ದಕ್ಕಿದ್ದಂತೆ ಪತ್ತೇದಾರಿ ಕಾದಂಬರಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಇರಬಹುದು. ಪತ್ತೇದಾರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದ ಕಾಲಾವಿದ್ದ ಇಲ್ಲಿ ಇದೀಗ ಓದೋಣವೆಂದರೆ ಒಂದೊಳ್ಳೆ ಕಾದಂಬರಿಗಳು ಸಿಗದಿರುವುದು ಸೋಜಿಗವೇ ಸರಿ. ಆದ್ದರಿಂದ ಥ್ರಿಲ್ಲರ್ ಕಾದಂಬರಿಗಳೆಡೆಗೆ ಆಸಕ್ತಿಯಿರುವವನಿಗೆ ತಕ್ಷಣಕ್ಕೆ ಎದುರಾಗುವುದೇ ಆಂಗ್ಲ ಭಾಷೆಯ ಕಾದಂಬರಿಗಳು. ಅಲ್ಲಿನ ಅದ್ಭುತ ಥ್ರಿಲ್ಲರ್ ಕಾದಂಬರಿಗಳನ್ನು ಓದಿ ರುಚಿ ಹತ್ತಿಸಿ ಕೊಂಡವನಿಗೆ ಇಲ್ಲಿನ ಕಾದಂಬರಿಗಳು ಬಾಲಿಷ ಅನಿಸಬಹುದು. ಆದ್ದರಿಂದ ಇಲ್ಲಿ ಬರೆಯಲು ಹೊರಡುವ ಪತ್ತೇದಾರಿ ಕಾದಂಬರಿಕಾರರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಓದುಗನನ್ನು ತನ್ನೆಡೆಗೆ ಸೆಳೆದುಕೊಳ್ಳುವ ಚಾಣಾಕ್ಷತೆ ಇರಬೇಕಾಗುತ್ತದೆ. ಹೊಸ ಹೊಸ ವಿಷಯಗಳೊಂದಿಗೆ ಮತ್ತು ಕಥಾವಸ್ತುಗಳೊಡನೆ ಓದುಗನೆದುರಿಗೆ ಪದೇ ಪದೇ ನಿಲ್ಲಬೇಕಾಗುತ್ತದೆ. ಓದುಗನ ಡಿಮ್ಯಾಂಡಿಗೆ ತಕ್ಕಂತೆ supply ನ ಅವಶ್ಯಕತೆ ಇರುವುದರಿಂದ ಹೆಚ್ಚಿನ ಕಾದಂಬರಿಕಾರರ ಅವಶ್ಯಕತೆ ಇಲ್ಲಿದೆ. ವರ್ಷಕ್ಕೆ ಕನಿಷ್ಠವೆಂದರೂ ಹತ್ತಾದರು ರೋಚಕ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಬಂದರೆ ಓದುಗ ಇಲ್ಲೇ ಉಳಿದುಕೊಳ್ಳುತ್ತಾನೆ.
ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ವಿಷಯದ ಆಯ್ಕೆಯ ಕುರಿತು...
ಥ್ರಿಲ್ಲರ್ ಕತೆಗಳನ್ನು ಬರೆಯಲು ಹೊರಡುವವನು ಸಾಕಷ್ಟು ಓದಿಕೊಂಡಿರಬೇಕಾಗುತ್ತದೆ. ಪೋಲಿಸ್ ಇನ್ವೆಸ್ಟಿಗೇಶನ್ ವಿಧಾನಗಳು, ಫೊರೆಂಸಿಕ್ ಮತ್ತು ಕೋರ್ಟ್ ಸಂಬಂಧ ಪಟ್ಟ ವಿಚಾರಗಳನ್ನು ತಿಳಿದುಕೊಳ್ಳವ ಅವಶ್ಯಕತೆಯಿರುತ್ತದೆ. ರೋಚಕತೆಯನ್ನು ನೀಡುವ ಒಂದು ಚಿಕ್ಕ ವಿಷಯವು ಕೂಡ ಕಾದಂಬರಿಗೆ ಕಥಾವಸ್ತುವಾಗಬಲ್ಲದು. ಉದಾಹರಣೆಗೆ ಇಂಡೋನೇಷ್ಯಾದಲ್ಲಿರುವ ಕಾಡುಬೆಕ್ಕಿನ ಜಾತಿಗೆ ಸೇರಿದ ಕೋಪಿ ಲುವಾಕ್ ಎಂಬ ಪ್ರಾಣಿಯ ಕುರಿತಾದ ಮಾಹಿತಿ. ನನ್ನ ಥ್ರಿಲ್ಲರ್ ಕಾದಂಬರಿಯೊಂದರ ಕಥಾವಸ್ತುವಿನ ಪ್ರಮುಖ ವಿಚಾರವೇ ಇದು. ಈ ಪ್ರಾಣಿಯ ಕುರಿತಾದ ವಿಚಾರವನ್ನಿಟ್ಟುಕ್ಕೊಂಡು ಅದಕ್ಕೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಹುಟ್ಟಿದ ಕಾದಂಬರಿಯೇ "ಒಂದು ಕೋಪಿಯ ಕಥೆ". ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ಕಾಫಿಯನ್ನು ಈ ಕೋಪಿ ಲುವಾಕ್ ಎನ್ನುವ ಕಾಡುಬೆಕ್ಕಿನ ಮಲದಿಂದ ತಯಾರಿಸುತ್ತಾರೆ ಎಂಬ ವಿಚಾರವೇ ನನ್ನನ್ನು ಅಚ್ಚರಿಗೊಳಿಸಿತ್ತು. ಒಂದು ವೇಳೆ ಆ ಕಾಡುಬೆಕ್ಕು ನಮ್ಮ ಕೊಡಗಿಗೆ ಬಂದರೆ?? ಅದು ಇಲ್ಲಿಗೆ ಬಂದ ಮೇಲೆ ಆ ಊರಿನಲ್ಲಿ ಒಂದಿಷ್ಟು ಕೊಲೆಗಳಾದರೆ?? ಹೀಗೆ ಒಂದು ಚಿಕ್ಕ ವಿಷಯಕ್ಕೂ ಕೂಡ ಕಾದಂಬರಿಯನ್ನು ಹುಟ್ಟಿಸುವ ತಾಕತ್ತಿದೆ. ಆದ್ದರಿಂದ ಹೊಸ ಬರಹಗಾರನಿಗೆ ಓದಿನ ಅವಶ್ಯಕತೆಯಿದೆ. ಆಗಾಗ ದಿನಪತ್ರಿಕೆಗಳಲ್ಲಿ ಬರುವ ಹೊಸ ಕ್ರೈಮ್ ವಿಚಾರಗಳೆಡೆಗೆ ಅಥವಾ ಬೆರಗುಗೊಳಿಸುವ ವಿಚಾರಗಳೆಡೆಗೆ ಗಮನ ಹರಿಸಬೇಕು. ಯಾರಿಗೆ ಗೊತ್ತು ಅದೂ ಕೂಡ ನಿಮ್ಮ ಕಾದಂಬರಿಯ ಕಥಾವಸ್ತುವಾಗಿರಬಹುದು!!
ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಹೊರಡುವ ಯುವ ಬರಹಗಾರರಿಗೆ ಕೆಲವು ಸಲಹೆಗಳು:-
ಸಾಮಾನ್ಯವಾಗಿ ಥ್ರಿಲ್ಲರ್ ಕತೆಗಳನ್ನು ಬರೆಯಲು ಹೊರಡುವವನು ಒಂದೇ ಪ್ಯಾಟರ್ನ್ ನತ್ತ ಹೊರಳಿಕೊಳ್ಳುತ್ತಾನೆ. ಒಂದು ಕೊಲೆಯಾಗುತ್ತದೆ ತದನಂತರ ಆ ಕೊಲೆಗಾರನನ್ನು ಹುಡುಕುತ್ತಾ ಹೋಗುವುದು. ಅಥಾವ ಒಂದು ಕಡೆ ಸೀರಿಯಲ್ ಕಿಲ್ಲಿಂಗಳು ನಡೆಯುತ್ತಿರುತ್ತದೆ ತದನಂತರ ಆ ಸೀರಿಯಲ್ ಕಿಲ್ಲರ್ನನ್ನು ಹುಡುಕುತ್ತಾ ಹೊರಡುವುದು. ಇದು ಆಗಬಾರದು. ಮತ್ತಿದು ಈಗಿನ ಯುವ ಪೀಳಿಗೆಗೆ ಅಷ್ಟಾಗಿ ರುಚಿಸುವುದಿಲ್ಲ. ಹಿಂದಿನಿಂದಲೂ ಇದೇ ರೀತಿಯ ಕತೆಗಳು ಸಾಕಷ್ಟು ಬಂದಿರುವುದರಿಂದ ಓದುಗನಿಗೆ monotonous ಅನಿಸಿಬಿಡುತ್ತದೆ. ಆದ್ದರಿಂದ ಈ ಪ್ರಸ್ತುತ ಕಾಲಘಟ್ಟದಲ್ಲಿ ಬರೆಯಲು ಹೊರಡುವ ಬರಹಗಾರನ ಮುಂದೆ ಸಾಕಷ್ಟು ಸವಾಲುಗಳಿವೆ. ತಾನು ಕೇಳಿರದ, ನೋಡಿರದ ಹಾಗೂ ತನ್ನನ್ನು excite ಮಾಡುವ ಕತೆಗಳಿಗೆ ಆತ ಹುಡುಕಾಟ ನಡೆಸುತ್ತಿರುತ್ತಾನೆ.
ಆದ್ದರಿಂದ ಬರಹಗಾರನು ತಾನು ಬರೆಯುವ ಮುನ್ನ ಸಾಕಷ್ಟು ಅಧ್ಯಯನ ನಡೆಸುವ ಅವಶ್ಯಕತೆ ಯಿರುತ್ತದೆ. ಪ್ರಸ್ತುತ ವಿದ್ಯಮಾನಗಳೆಡೆಗೆ ಮತ್ತು ಹೊಸ ತಂತ್ರಜ್ಞಾನದೆಡೆಗೆ ಆತ ತನ್ನನ್ನು ತಾನು ತೆರೆದುಕೊಳ್ಳಬೇಕಾಗುತ್ತದೆ.
ಆ ತಂತ್ರಜ್ಞಾನಗಳನ್ನು ತನ್ನ ಕತೆಗಳಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬ ಬುದ್ಧಿವಂತಿಕೆಯು ಬೇಕಾಗುತ್ತದೆ. ಹಾಗೆ ಥ್ರಿಲ್ಲರ್ ಕಾದಂಬರಿಗಳಲ್ಲಿ ಕಥಾವಸ್ತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಒಂದೊಳ್ಳೆ ರುಚಿಸುವ ಕಥಾವಸ್ತುವನ್ನು ರೋಚಕವಾಗಿ ಹೇಳಿದರೆ ಓದುಗ ಮೆಚ್ಚಿಕೊಳ್ಳುತ್ತಾನೆ. ಮತ್ತು ಆ ಲೇಖಕನಿಂದ ಬರುವ ಮುಂದಿನ ಕತೆಗಳಿಗೆ ಕಾಯುತ್ತಾನೆ.
ಹೊಸದಾಗಿ ಥ್ರಿಲ್ಲರ್ ಕತೆಯನ್ನು ಬರೆಯಲು ಹೊರಡುವವನು ಮೊದಲು ತಾನು ಆಯ್ದು ಕೊಳ್ಳುವ ವಿಷಯದೆಡೆಗೆ ಗಮನ ಹರಿಸಬೇಕು. ಆ ವಿಷಯದಲ್ಲೆಷ್ಟು ಹೊಸತನವಿದೆ ಮತ್ತು ಆ ವಿಷಯದ ಅಧ್ಯಯನದಿಂದ ಸಿಗುವ ಒಂದಿಷ್ಟು ಮಾಹಿತಿಗಳನ್ನು ತನ್ನ ಕತೆಯಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದು ತಿಳಿದಿರಬೇಕು. ಒಂದು ಕ್ರೈಮ್ ಆರ್ಟಿಕಲ್ ಕೂಡ ಒಂದು ಕಾದಂಬರಿಗೆ ಕಥಾವಸ್ತುವಾಗಬಲ್ಲದು. ಅದನ್ನು ರೋಚಕ ಕಾದಂಬರಿಯನ್ನಾಗಿ ಹೆಣೆಯುವ ಕಲೆ ಲೇಖಕನಿಗಿರಬೇಕಾಗುತ್ತದೆ. ಸಾಧ್ಯವಾದರೆ ಒಂದಿಷ್ಟು ಥ್ರಿಲ್ಲರ್ ಕಾದಂಬರಿಗಳನ್ನು ಓದಿಕೊಳ್ಳುವುದು ಮತ್ತು ಒಂದಿಷ್ಟು ಥ್ರಿಲ್ಲರ್ ಸಿನಿಮಾಗಳನ್ನು ನೋಡಿದರೆ ರೋಚಕವಾಗಿ ಕತೆ ಹೆಣೆಯುವ ಶೈಲಿ ತಿಳಿಯುತ್ತದೆ. ಎಷ್ಟೇ ಒಳ್ಳೆಯ ಕಥಾವಸ್ತುವಿದ್ದರೂ ನಿರೂಪಣೆಯು ಪ್ರಮುಖವಾಗುತ್ತದೆ. ಆಗಷ್ಟೇ ಪುಸ್ತಕ ಲೋಕಕ್ಕೆ ಆಗಮಿಸುವ ಯುವ ಓದುಗರು ಪತ್ತೇದಾರಿ ಕಾದಂಬರಿಗಳೆಡೆಗೆ ತಮ್ಮನ್ನು ತಾವು ಒಪ್ಪಿಸುಕೊಳ್ಳುವುದರಿಂದ ಆದಷ್ಟು ಸರಳ ಭಾಷೆಯಲ್ಲಿ ನಿರೂಪಣೆ ಮಾಡುವುದು ಒಳ್ಳೆಯದು. ಹಾಗೆ ತಾನು ಕತೆ ಹೇಳುವ ಸ್ಥಳದ ಜೊತೆ ಕತೆ ಬೆರೆತರೆ ಓದುಗನಿಗೆ ಕತೆಯು ಇನ್ನಷ್ಟು ಹತ್ತಿರವಾಗುತ್ತದೆ. ಹಾಗೇಯೇ ಮೈ ರೋಮಾಂಚನಗೊಳಿಸುವ ದೃಶ್ಯಗಳ ಜೊತೆಗೆ ಒಂದು ಅದ್ಭುತ ಕ್ಲೈಮ್ಯಾಕ್ಸ್ ಇದ್ದರೆ ಮಾತ್ರ ಆ ಥ್ರಿಲ್ಲರ್ ಕಾದಂಬರಿ ಗೆಲ್ಲುತ್ತದೆ. ಥ್ರಿಲ್ಲರ್ ಕಾದಂಬರಿಗಳು ಕೇವಲ ಆ ಹೊತ್ತಿನ ಓದಿಗಷ್ಟೆ ಆಗದೆ ಅದರಿಂದ ಓದುಗನಿಗೆ ಒಂದಷ್ಟು ಮಾಹಿತಿ ಸಿಕ್ಕರೆ ಇನ್ನೂ ಒಳ್ಳೆಯದು.
ಕೊನೆಯದಾಗಿ, ನಾನು ಸ್ವತಃ ಪತ್ತೇದಾರಿ ಕಾದಂಬರಿಕಾರನಾಗಿ ಹೇಳುವುದಾದರೆ ಪತ್ತೇದಾರಿ ಕಾದಂಬರಿಗಳನ್ನು ಇಷ್ಟಪಡುವ ಓದುಗರು ಸಾಕಷ್ಟಿದ್ದಾರೆ. ಅದರಲ್ಲೂ ಥ್ರಿಲ್ಲರ್ ಕತೆಗಳನ್ನು ಓದಬಯಸುವವರಲ್ಲಿ ಯುವ ಓದುಗರೇ ಹೆಚ್ಚು. ಅವರಿಗೆ ಪ್ರತಿ ಪುಟಕ್ಕೂ ಥ್ರಿಲ್ ನೀಡುವ ಮತ್ತು ರುಚಿಸುವ ಕತೆ ನೀಡಿದರೆ ಖಂಡಿತಾ ಒಪ್ಪಿ ಅಪ್ಪುತ್ತಾರೆ. ಆದರೆ ಅವರನ್ನು ತೃಪ್ತಿ ಪಡಿಸುವ ಕಾದಂಬರಿಗಳು ಹೆಚ್ಚಾಗಿ ಬರುತ್ತಿಲ್ಲ ಜೊತೆಗೆ ಬರೆಯುವವರ ಸಂಖ್ಯೆಯೂ ಕಡಿಮೆಯಿದೆ. ಆದ್ದರಿಂದ ಪತ್ತೇದಾರಿ ಕಾದಂಬರಿಗಳನ್ನು ಬರೆಯುವವರು ಹೆಚ್ಚಾಗಬೇಕು. ಥ್ರಿಲ್ ನೀಡುವ ಕಥಾವಸ್ತು ಗಳೊಂದಿಗೆ ಕಾದಂಬರಿಕಾರ ಬರಬೇಕು. ಹೆಚ್ಚೆಚ್ಚು ಕಾದಂಬರಿಗಳು ಬರುವುದರಿಂದ ಹೊಸ ಓದುಗರ ಸೃಷ್ಟಿಯಾಗುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಓದುಗರನ್ನು ಪರಿಚಯಿಸುವುದರ ಹಿಂದೆ ಪತ್ತೇದಾರಿ ಕಾದಂಬರಿಗಳ ಕೊಡುಗೆ ಬಹಳಷ್ಟಿರುವುದರಿಂದ ಮತ್ತು ಪತ್ತೇದಾರಿ ಕಾದಂಬರಿಗಳು ಸಾಹಿತ್ಯ ಲೋಕಕ್ಕೆ ಬಾಗಿಲಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಈಗೀನ ಯುವ ಬರಹಗಾರರಿಂದ ನಾನು ಥ್ರಿಲ್ಲರ್ ಪುಸ್ತಕಗಳ ಪ್ರೇಮಿಯಾಗಿ ಬಯಸುತ್ತೇನೆ.
ಧನ್ಯವಾದಗಳು,
ಕೌಶಿಕ್ ಕೂಡುರಸ್ತೆ
ಕೌಶಿಕ್ ಕೂಡುರಸ್ತೆ ಅವರ ಪುಸ್ತಕಗಳು - https://harivubooks.com/collections/koushik_koduraste_kannada_books
ಬೆಸ್ಟ್ ಸೆಲ್ಲಿಂಗ್ ಥ್ರಿಲ್ಲರ್ ಪುಸ್ತಕಗಳು - https://harivubooks.com/kn/collections/kannada-suspense-thriller-books
]]>
‘ನಾನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇನೆ’ ಎಂದು ನೀವು ಯಾರಿಗಾದರೂ ಹೇಳಿದರೆ, ತಕ್ಷಣ ಅವರ ಬಾಯಿಯಿಂದ ಬರುವ ಮಾತು ಎಂದರೆ ‘ಅದೆಲ್ಲ ತುಂಬಾ ರಿಸ್ಕ್, ಅದ್ರಲ್ಲಿ ದುಡ್ಡು ಬರೋದಕ್ಕಿಂತಾ ಹೋಗೋದೇ ಜಾಸ್ತಿ’ ಅನ್ನುವುದು. ಆದರೆ ಸರಿಯಾದ ಮಾಹಿತಿ ಇದ್ದರೆ ಖಂಡಿತಾ ಹೂಡಿಕೆಯನ್ನು ಮಾಡಬಹುದು. ಇದಕ್ಕೆ ನಮಗೆ ಮಾರ್ಗದರ್ಶಿ ಎನಿಸುವ ಪುಸ್ತಕವೇ ‘ಷೇರು ಮಾರುಕಟ್ಟೆ’. ಈ ಪುಸ್ತಕದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಪ್ರಮುಖ ಅಂಶಗಳಾದ ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್ ಜೊತೆಗೆ ಹೆಚ್ಚಾಗಿ ಪ್ರಸ್ತಾಪವಾಗದೆ ಇರುವ, ಆದರೆ ಬಹುಮುಖ್ಯವಾದ ಸೆಂಟಿಮೆಂಟ್ ಅನಾಲಿಸಿಸ್ ಬಗ್ಗೆ ಕೂಡ ಮಾಹಿತಿಯನ್ನು ನೀಡಲಾಗಿದೆ. ಇದರ ಜೊತೆಗೆ ಪ್ರೈಮರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಡಿರೈವೆಟಿವ್ಸ್ ಮಾರುಕಟ್ಟೆಯ ಫ್ಯೂಚರ್ ಮತ್ತು ಆಪ್ಶನ್ ಮಾರುಕಟ್ಟೆ ಬಗ್ಗೆ ಕೂಡ ಒಂದಷ್ಟು ತಿಳಿಸುವ ಪ್ರಯತ್ನವಿದೆ. ಹೂಡಿಕೆಯಿಂದ ಬರುವ ಅಪಾಯಗಳೇನು? ಷೇರುದಾರನ ಹಕ್ಕುಗಳೇನು? ಷೇರಿನ ಮೇಲಿನ ತೆರಿಗೆ ನೀತಿಯೇನಿದೆ? ಆಲ್ಗೊ ಟ್ರೇಡಿಂಗ್, ಪಿಎಂಎಸ್, ಸೆಕ್ಯುರಿಟೀಸ್, ಷೇರು ಮಾರುಕಟ್ಟೆ ಟರ್ಮಿನಾಲಜಿಗಳು, ಹೂಡಿಕೆದಾರನ ರಕ್ಷಣೆ, ಅಹವಾಲು, ಪರಿಹಾರದ ತನಕ ಷೇರು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಇವೆಲ್ಲ ಮಾಹಿತಿಗಳ ಜೊತೆಗೆ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವಾಗ ಮಾಡಬೇಕಾದ ಕೆಲಸಗಳು, ಸಾಮಾನ್ಯವಾಗಿ ಜನರು ಮಾಡುವ ತಪ್ಪುಗಳು, ಹಾಗೇ ಹೂಡಿಕೆಯ ಅವಶ್ಯಕತೆ ಏನು ಎನ್ನುವುದನ್ನೂ ಸಹ ಈ ಪುಸ್ತಕ ತಿಳಿಸಿಕೊಡುತ್ತದೆ.
ಹಾಗಾಗಿ ಹೂಡಿಕೆ ಬಗ್ಗೆ ತಿಳಿದುಕೊಳ್ಳಲು, ಷೇರು ಹೂಡಿಕೆಯನ್ನು ಸುಲಭ ಮಾಡಿಕೊಳ್ಳಲು ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ‘ಷೇರು ಮಾರುಕಟ್ಟೆ’ ತುಂಬಾ ಉಪಯುಕ್ತವಾದ ಪುಸ್ತಕ.
ಷೇರು ಮಾರುಕಟ್ಟೆ – https://harivubooks.com/kn/products/sheru-maarukatte-stock-market-kannada-books
ಷೇರು ಮಾರುಕಟ್ಟೆ ಬಗ್ಗೆ ತಿಳಿಯಲು ಓದಬಹುದಾದ ಇನ್ನಷ್ಟು ಪುಸ್ತಕಗಳು,
ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿ – https://harivubooks.com/kn/products/sheru-samrajya-kalitawane-adhipati-kannada-book
ಷೇರು ಸಂಪತ್ತು - https://harivubooks.com/kn/products/sheru-sampattu-kannada-book
]]>ನಿಮ್ಮ ಶಾಲೆಯ ಗ್ರಂಥಾಲಯಕ್ಕೆ ಎಂತಹಾ ಪುಸ್ತಕಗಳನ್ನು ಸೇರಿಸಬಹುದು?
ನೀವು ಓದಿದ ಶಾಲಾ-ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಯೋಚಿಸುತ್ತಿದ್ದರೆ – ಮಕ್ಕಳ ಬಣ್ಣ ಬಣ್ಣದ ಪುಸ್ತಕಗಳು, ಭಾರತದ ಇತಿಹಾಸದ ಬಗೆಗಿನ ಪುಸ್ತಕಗಳು, ನಾಡು-ನುಡಿ, ವ್ಯಕ್ತಿತ್ವ ವಿಕಸನ ಪುಸ್ತಕಗಳು, ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಇರುವ ಪುಸ್ತಕಗಳು, ಸಣ್ಣ ಕಥೆಗಳ ಪುಸ್ತಕಗಳು, ವಿಜ್ಞಾನ-ತಂತ್ರಜ್ಞಾನ, ಪಠ್ಯ-ಪುಸ್ತಕಗಳು, ಶಾಲಾ ಗೈಡ್ಗಳು, ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಬೇಕಾಗುವ ಪುಸ್ತಕಗಳು ಹೀಗೇ ಮಕ್ಕಳಿಗೆ ಓದುವ ಹವ್ಯಾಸದೆಡೆ ಆಸಕ್ತಿ ಮೂಡಿಸುವಂತಹಾ ಹಾಗೂ ಅವರಿಗೆ ಬೇರೆ ಬೇರೆ ವಿಷಯದ ಬಗೆಗೆ ಅರಿವು ಮೂಡಿಸುವಂತಹಾ ಪುಸ್ತಕಗಳನ್ನು ಕೊಡಬಹುದು.
ನಿಮ್ಮ ಊರಿನ ಗ್ರಂಥಾಲಯಕ್ಕೆ ಎಂತಹಾ ಪುಸ್ತಕಗಳನ್ನು ಸೇರಿಸಬಹುದು?
ಯಾವುದೇ ವಯಸ್ಸಿನ ಮಿತಿ ಇಲ್ಲದೇ ಓದುವ ಆಸಕ್ತಿ ಇರುವ ಪ್ರತಿಯೊಬ್ಬರೂ ಬಂದು ಕೂರುವ ಜಾಗ ಇದಾಗಿರುವುದರಿಂದ ನೀವು ನಿಮ್ಮ ಊರಿನ ಗ್ರಂಥಾಲಯಕ್ಕೆ ಕೊಡುಗೆ ನೀಡುವುದಾದರೆ, ಸಣ್ಣ ಮಕ್ಕಳು ಓದುವ ಬಣ್ಣ ಬಣ್ಣದ ಪುಸ್ತಕದಿಂದ ಹಿಡಿದು, ಕತೆ, ಕಾದಂಬರಿ, ಕವಿತೆ. ನಾಟಕ, ಪ್ರಬಂಧಗಳು, ಆಧ್ಯಾತ್ಮ, ಇತಿಹಾಸ, ಪೌರಾಣಿಕ, ನಾಡು-ನುಡಿ, ಜೀವನಶೈಲಿ, ಕಲಿಕೆ, ಸಿನಿಮಾ, ವ್ಯಕ್ತಿತ್ವ ವಿಕಸನ, ವಿಜ್ಞಾನ-ತಂತ್ರಜ್ಞಾನ ಹೀಗೇ ಎಲ್ಲಾ ತರಹದ ಪುಸ್ತಕಗಳನ್ನು ಕೊಡಬಹುದು.
ನಿಮ್ಮ ನೆಚ್ಚಿನ ಗ್ರಂಥಾಲಯಕ್ಕೆ ನಿಮ್ಮ ಕೊಡುಗೆಯನ್ನು ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ!
ನೀವು ಓದಿದ ಶಾಲೆಗೋ ಅಥವಾ ಊರಿನ ನಿಮ್ಮ ನೆಚ್ಚಿನ ಗ್ರಂಥಾಲಯಕ್ಕೋ ಪುಸ್ತಕಗಳನ್ನು ಕೊಳ್ಳುವುದು ನಿಮ್ಮ ಬಯಕೆಯಾಗಿದ್ದರೆ, ನಿಮ್ಮ ನೆರವಿಗೆ ಹರಿವು ಬುಕ್ಸ್ ಸದಾ ಸಿದ್ದ. ನೀವು ಕೊಡುಗೆಯಾಗಿ ಕೊಡಲು ಇಷ್ಟಪಡುವ ಪುಸ್ತಕಗಳ ಪಟ್ಟಿಯನ್ನು ನಮಗೆ ಕೊಡಿ. ಇಲ್ಲವೇ ಯಾವ ತರಹದ ಪುಸ್ತಕಗಳು ಗ್ರಂಥಾಲಯವನ್ನು ಸೇರಬೇಕೆಂದು ಹೇಳಿದರೂ ಸಾಕು. ನಿಮ್ಮ ನೆಚ್ಚಿನ ಆ ಎಲ್ಲ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಯಾವುದೇ ಸಾಗಾಣಿಕೆಯ ವೆಚ್ಚವಿಲ್ಲದೆ ತಲುಪಿಸುವುದು ನಮ್ಮ ಕೆಲಸ. ಇದಿಷ್ಟೇ ಅಲ್ಲದೇ ಒಳ್ಳೆಯ ಉದ್ದೇಶದಿಂದ ಪುಸ್ತಕಗಳನ್ನು ಕೊಳ್ಳುತ್ತಿರುವ ನಿಮಗೆ ರಿಯಾಯಿತಿ ದರದಲ್ಲೇ ಪುಸ್ತಕಗಳನ್ನು ಕೊಡಲಾಗುವುದು.
ಈ ಎಲ್ಲ ಸೌಲಭ್ಯಗಳು ನಮ್ಮ ಆನ್ಲೈನ್ ಮಳಿಗೆ ಹಾಗೂ ಬೆಂಗಳೂರಿನ ನಮ್ಮ ಮಳಿಗೆಯಲ್ಲಿ ಲಭ್ಯ!
ಹೆಚ್ಚಿನ ಮಾಹಿತಿಗಾಗಿ support@harivubooks.com ಅನ್ನು ಸಂಪರ್ಕಿಸಿ ಹಾಗೂ ಪುಸ್ತಕಗಳನ್ನು ಖರೀದಿಸಲು www.harivubooks.com ಗೆ ಭೇಟಿ ನೀಡಿ.
]]>“ಇತಿಹಾಸ ಉದ್ದಕ್ಕೂ ಎಷ್ಟೇ ಒಳಿತು ಕೆಡಕುಗಳಿಗೆ ಸಾಕ್ಷಿಯಾಗಿದ್ದರೂ ಮನುಷ್ಯ ಜನಾಂಗದ ನಾಗರೀಕತೆಯನ್ನಂತೂ ಇವತ್ತಿನ ಈ ಹಂತಕ್ಕೆ ತಲುಪಿಸಿರುವುದು ಸುಳ್ಳಲ್ಲ. ಮಾನವ ಸಮಾಜ ಇವತ್ತು ಅನುಭವಿಸುತ್ತಿರುವ ಹಲವು ಸುಖ ಸೌಲಭ್ಯಗಳು ಹಿಂದಿನ ಹಲವು ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಕಾಣ್ಕೆ ಮತ್ತು ಪ್ರಯತ್ನಗಳ ಫಲ. ಅಂತಹ ಒಂದು ಮಹಾನ್ ಮನುಷ್ಯ ಪ್ರಯತ್ನವೇ ಟ್ರಿಗ್ನಾಮೆಟ್ರಿಕ್ ಸರ್ವೆ.
ಬ್ರಿಟಿಷರು ನಮ್ಮ ನೆಲವನ್ನು ಆಳಿದ ಕತೆ ನಮಗೆ ಗೊತ್ತು. ಅಳೆದ ಕತೆ ಹೆಚ್ಚು ಗೊತ್ತಿಲ್ಲ. ಆಳುವಾಗ ಅವರು ನಮ್ಮನ್ನು ಹುರಿದು ಮುಕ್ಕಿದ್ದು, ಅಹಂಕಾರ ತೋರಿದ್ದು, ಅನಾಚಾರ ನಡೆಸಿದ್ದು ಗೊತ್ತು. ಆದರೆ ಅಳೆಯುವಾಗ ಅವರು ತೋರಿದ ಶ್ರದ್ಧೆ, ಬದ್ಧತೆ ಮತ್ತು ನಿಸ್ಪೃಹತೆ ನಮಗೆ ಗೊತ್ತಿಲ್ಲ. ಇವತ್ತು ಗೂಗಲ್ ಮ್ಯಾಪ್ ಮೂಲಕ ಬೇಕೆನಿಸಿದ ಸ್ಥಳ (ಲೊಕೇಶನ್ನು)ಗಳ ವಿಳಾಸವನ್ನು ಅತ್ಯಂತ ಸುಲಭವಾಗಿ ಪಡೆಯಬಲ್ಲೆವು. ಅದಕ್ಕೆಲ್ಲ ಜಿಪಿಎಸ್, ಜಿ ಐ ಎಸ್ ಮುಂತಾದ ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆ ಮತ್ತು ನವತಾಂತ್ರಿಕ ಪ್ರಗತಿ ಕಾರಣವೆಂದು ಹೇಳುತ್ತೇವೆ. ನಿಜ, ಆದರೆ, ಅಂತಹ ವ್ಯವಸ್ಥೆಗಳು ಅಸ್ತಿತ್ವ ಬರುವುದರ ಹಿಂದೆ, ಇಡೀ ಭೂಗೋಳದ ನಿಖರ ಆಕಾರ, ಗಾತ್ರ, ಮತ್ತು ವಕ್ರತೆಗಳನ್ನು ಗುರುತಿಸಿ, ಅಕ್ಷಾಂಶ ರೇಖಾಂಶಗಳ ಮೂಲಕ ಇಡೀ ಭೂಗೋಳವನ್ನು ಭೌತಿಕವಾಗಿ ಹೆಣೆದು, ಆ ಮೂಲಕ ಪ್ರತಿ ತಾಣವನ್ನು ಗುರುತಿಸುವ ಭೂಮಾಪನ ವ್ಯವಸ್ಥೆ ಎಷ್ಟು ಕಾರಣ ಎಂಬ ಸೂಕ್ಷ್ಮ ಸಂಗತಿ ಹೆಚ್ಚು ತಿಳಿದಿಲ್ಲ.
ಹಿಂದೆ ನಮ್ಮಲ್ಲಿ ಭೂಮಾಪನ ಅಥವಾ ಮೋಜಣಿ ಕೂಗಳತೆ, ಕಣ್ಣಳತೆ ಮತ್ತು ಕೋಲಳತೆಗಳ ಮೂಲಕ ನಡೆಯುತ್ತಿತ್ತು. ಮುಂದೆ, ಅದಕ್ಕೊಂದು ವೈಜ್ಞಾನಿಕ ಸ್ವರೂಪ ಸಿಕ್ಕಿದ್ದು ಬ್ರಿಟಿಷರ ಕಾಲದಲ್ಲಿ. ಲಭ್ಯ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ನಮ್ಮ ನೆಲದಲ್ಲಿ ಮೊಟ್ಟಮೊದಲಿಗೆ ವೈಜ್ಞಾನಿಕ ಭೂಮಾಪನವನ್ನು ಆರಂಭಿಸಿದ್ದೇ ಬ್ರಿಟಿಷರು. ಅದನ್ನು "ದಿ ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ" ಎಂದು ಜಗತ್ತು ಕರೆಯಿತಲ್ಲದೆ, ಅದು ವೈಜ್ಞಾನಿಕ ಇತಿಹಾಸದಲ್ಲಿ ದಾಖಲಾದ ಮಹಾನ್ ಸಾಹಸವೆಂದು ಶ್ಲಾಘಿಸಿತು. ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ, ಪ್ರತಿದಿನ ಸರಾಸರಿ ಆರುನೂರಕ್ಕೂ ಹೆಚ್ಚು ಮಂದಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದ ತುದಿಯವರೆಗೆ ನಡೆಸಿದ ಟ್ರಿಗ್ನಾಮೆಟ್ರಿಕ್ ಸರ್ವೆ ಭಾರತದ ಪ್ರತಿ ಇಂಚಿಂಚು ನೆಲವನ್ನೂ ಭೂಗೋಳದ ಅಕ್ಷಾಂಶ ರೇಖಾಂಶಗಳ ಜೊತೆಗೆ ಬೆಸೆದು, ಖಚಿತ ಗಡಿಗಳನ್ನು ಗುರುತಿಸಿ, ದೇಶದ ನಿಖರ ನಕ್ಷೆಯ ರಚನೆಗೆ ಕಾರಣವಾಯಿತಲ್ಲದೆ ಇಂದು ನಮ್ಮ ಮೊಬೈಲ್ ತುದಿಯಲ್ಲಿ ದೇಶದ ಪ್ರತಿ ತಾಣದ ಲೊಕೇಶನ್ ಗುರುತಿಸುವ ಮ್ಯಾಪಿಂಗ್ ಸೌಲಭ್ಯಕ್ಕೂ ಮೂಲ ಕಾರಣವಾದದ್ದು ಸುಳ್ಳಲ್ಲ. ಅಂತಹ ನಿಖರ ಸರ್ವೆಯ ಕಾರಣದಿಂದಲೇ ರೈಲ್ವೆ ಮತ್ತು ಟೆಲಿಗ್ರಾಫ್ ಮಾರ್ಗ, ನೀರಾವರಿ ಕಾಲುವೆ, ರಸ್ತೆಗಳ ನಿರ್ಮಾಣ... ಮುಂತಾದವುಗಳೆಲ್ಲ ಸುಲಲಿತವಾಗಿದ್ದು.
ಆದರೆ ಒಂದೂವರೆ ಶತಮಾನಕ್ಕೂ ಹಿಂದೆ, ದೇಶವಿನ್ನೂ ಪಾರತಂತ್ರ್ಯದಲ್ಲಿದ್ದ ಕಾಲಘಟ್ಟದಲ್ಲಿ ಸಾಮ್ರಾಜ್ಯಶಾಹಿಗಳು ನಡೆಸಿದ್ದ ಟ್ರಿಗ್ನಾಮೆಟ್ರಿಕ್ ಸರ್ವೆಯೆಂಬ ಆ ಪುರಾತನ ಚರಿತ್ರೆಯನ್ನು ತಿಳಿದು ಈಗ ಮಾಡುವುದೇನು? ಇದು, ಸೆಟಲೈಟ್, ಡ್ರೋನ್ ಮುಂತಾದ ಗಗನಗಾಮೀ ಉಪಕರಣಗಳ ಮೂಲಕ ಸಾಕಷ್ಟು ವಿಸ್ತೀರ್ಣದ ನೆಲ, ಸಾಗರ, ಗಿರಿ, ಕಾನನ, ಕಣಿವೆಗಳನ್ನು, ಇಂಚು, ಸೆಂಟಿಮೀಟರುಗಳ ಖಚಿತತೆಗೆ ದೂರದಿಂದಲೇ ಸರ್ವೆ ಮಾಡುವ ಡಿಜಿಟಲ್ ತಂತ್ರಜ್ಞಾನದ ಕಾಲಘಟ್ಟ. ಪ್ರತಿಕ್ಷಣವೂ ಜಿ ಪಿ ಎಸ್ ಮೂಲಕ ಇಡೀ ಭೂಮಿ ಇಂಚುಗಳ ಮಟ್ಟದ ಕಾರ್ಯಕ್ಷಮತೆಯಲ್ಲಿ ಸರ್ವೇಕ್ಷಣೆಗೆ ಒಳಪಡುತ್ತಿರುವಾಗ, ಗೂಗಲ್ ಪ್ರತಿಕ್ಷಣ ಬೇಕುಬೇಕೆಂದ ಊರು, ಕೇರಿ, ಮಾರ್ಗ, ಮನೆ, ಕಾರ್ಖಾನೆ, ಕಛೇರಿಗಳ ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿರುವಾಗ, ಹುಟ್ಟು, ವಿವಾಹ, ವಿನೋದ, ಕ್ರೀಡೆ, ಮನೋರಂಜನೆ ಉತ್ಸವ, ಜಾತ್ರೆ, ಸಭೆ ಸಮಾರಂಭಗಳಷ್ಟೇ ಅಲ್ಲದೆ ಸಾವನ್ನು ಕೂಡ ಜೀವಂತವಾಗಿ ತೋರಿಸುವ ಲೈವ್ ಸ್ಟ್ರೀಮುಗಳು ಲಭ್ಯವಿರುವಾಗ, ಸಮುದ್ರ, ಸರೋವರ, ಪರ್ವತ, ಕಣಿವೆ, ನೀರ್ಗಲ್ಲು, ನದಿಗಳೆಲ್ಲ ಜಿ ಪಿ ಎಸ್ ಮತ್ತು ಜಿ ಐ ಎಸ್ ಸೆಟಲೈಟುಗಳ ಮೂಲಕ ಕಣ್ಣೆದುರು ಕಡುಬೆತ್ತಲಾಗಿ ಗೋಚರಿಸುವಾಗ, ಎಂದೋ ಯಾರೋ ಎಲ್ಲಿಯೋ ಸರಪಣಿ, ಕಂಪಾಸ್, ಸೆಕ್ಸ್ಟೆಂಟ್, ಕಂಪನ್ಸೇಟಿಂಗ್ ಬಾರ್, ಥಿಯೋಡಲೈಟ್ ಹಿಡಿದು ಅಳೆದದ್ದನ್ನು ಮಹಾನ್ ಸಾಹಸವೆಂಬಂತೆ ಪರಿಗಣಿಸಿ ಓದುವ ಅಗತ್ಯವಿದೆಯೇ? ಅದನ್ನು ತಿಳಿದುಕೊಳ್ಳುವ ಅಗತ್ಯ, ಆಸಕ್ತಿ ಮತ್ತು ಸಮಯ ಈ ಪೀಳಿಗೆಗೆ ಇದೆಯೇ? ಬೇಕಾದ್ದೆಲ್ಲ ಬೆರಳತುದಿಯಲ್ಲಿ ಗುಂಡಿಯೊತ್ತಿದರೆ ಗ್ಯಾಜೆಟ್ಟುಗಳ ಬಣ್ಣದ ಪರದೆಯಲ್ಲಿ ಬಿತ್ತರಗೊಳ್ಳುವಾಗ, ಅಂತಹ ಗೊಡ್ಡುಕತೆಗಳನ್ನೆಲ್ಲ ಆಧರಿಸಿದ ಅಧ್ಯಯನ ಅಗತ್ಯವೇ?
ಈ ಪ್ರಶ್ನೆ ಮೇಲ್ನೋಟಕ್ಕೆ ಒಂದಿಷ್ಟು ನಿಜವೆನ್ನಿಸುವಂತೆ ಕಂಡರೂ, ಕೊಡಚಾದ್ರಿ ಶಿಖರದ ನೆತ್ತಿಯಲ್ಲೋ, ಹಿಮಗಿರಿಯ ಭಿತ್ತಿಯಲ್ಲೋ, ಭಾರತ ಚೀನ ಗಡಿಯ ನೀರ್ಗಲ್ಲ ನಡುವಿನ ಸರೋವರ ತಟದಲ್ಲೋ, ರಾಜಸ್ಥಾನದ ಸುಡು ಮರುಭೂಮಿಯ ಮರಳು ರಾಶಿಯ ಒಡಲಲ್ಲೋ, ಅಳತೆಯ ಕಲ್ಲನ್ನು ಕಂಡಾಗ, ಬಿಸಲೆಯಂತಹ ರಿಡ್ಜ್ ಪಾಯಿಂಟಿನಲ್ಲಿ ನೆಟ್ಟ ಶಿಲೆಯೊಂದರ ತಲೆಯ ಮೇಲೆ ಸುರಿದ ಮಳೆ ನೀರು, ಒಂದಿಷ್ಟು ಅರಬ್ಬೀ ಸಮುದ್ರವನ್ನೂ ಮತ್ತೊಂದಿಷ್ಟು ಬಂಗಾಳಕೊಲ್ಲಿಯನ್ನೂ ಸೇರುವುದೆಂಬ ರೋಚಕ ಸಂಗತಿಯನ್ನು ಕೇಳಿದಾಗ, ಭೂಗೋಳದ ಕುರಿತು ಒಂದಿಷ್ಟು ಕುತೂಹಲ ಕೆಲವರಿಗಾದರೂ ಹುಟ್ಟೀತಲ್ಲವೇ? ಜಮ್ಮೂ ಕಾಶ್ಮೀರದ ಹರ್ಮುಖ ಪರ್ವತದ ಮೇಲಿನ ಸರೋವರ ತೀರದ ಚಳಿಗಾಳಿಯಲ್ಲಿ ಮಾಂಟ್ಗೊಮರಿ ಎಂಬಾತ 1856ರಷ್ಟು ಹಿಂದೆ ಶಿಬಿರವನ್ನು ಹಾಕಿಕೊಂಡು ರಾತ್ರಿ ನಕ್ಷತ್ರ ವೀಕ್ಷಣೆ, ಹಗಲು ಸರ್ವೆಯಲ್ಲಿ ತೊಡಗಿಕೊಂಡಿದ್ದ, ಮಧ್ಯಭಾರತದ ಗೋದಾವರಿ ತೀರದ ಘನಘೋರ ಅಡವಿಯಂಚಿನ ಹಿಂಗನ್ ಘಾಟಿನಲ್ಲಿ ಲ್ಯಾಂಬ್ಟನ್ ಎಂಬ ಸರ್ವೆ ಅಧಿಕಾರಿ ಅನಾಮಿಕನಂತೆ ಕೊನೆಯುಸಿರೆಳೆದಿದ್ದ, ಗೋದಾವರಿ ತೀರದ ಕಾಡಿನಲ್ಲಿ ಜಾರ್ಜ್ ಎವರೆಸ್ಟ್ ಮಾರಣಾಂತಿಕ ಯಲ್ಲಾಪುರಂ ರೋಗಕ್ಕೆ ತುತ್ತಾಗಿದ್ದ, ಎಂಬಂತಹ ಸಂಗತಿಗಳನ್ನು ತಿಳಿದಾಗ, ಅಲ್ಲಿಗೆ ಹೋಗಿ ನೋಡುವ ಅಥವಾ ಆ ಕುರಿತು ಓದುವ ಆಸಕ್ತಿ ಕೆಲವರಿಗಾದರೂ ಕುದುರೀತಲ್ಲವೇ? ಹಿಮಗಿರಿಯ ಅಗಲ ಉದ್ದ ಎತ್ತರವೆಷ್ಟು ತಿಳಿಯದೇ ಅದರ ಅಪರಂಪಾರ ಅಗಾಧತೆಗೆ ನಿಬ್ಬೆರಗಾಗಿ ಅದು ಅಪ್ರಮೇಯವೆಂದು ಭಾವಿಸಿದ ಮನುಷ್ಯನೆದುರು, ಅದರ ಅಳತೆಯ ವಿವರಗಳು ಮೈತೆರೆದು ನಿಂತಾಗ ಅಚ್ಚರಿಯೆನ್ನಿಸದೇ?
ಎರಡು ಶತಮಾನಗಳ ಹಿಂದೆ, ರಸ್ತೆ, ಸೇತುವೆ, ವಾಹನ, ಕಿರುದಾರಿಗಳೂ ಸರಿಯಿಲ್ಲದ ಕಾಲದಲ್ಲಿ ಸಾವಿರಾರು ಪರ್ವತಗಳನ್ನು ಪರಿಶ್ರಮದಿಂದ ಹತ್ತಿ, ಅದರ ನೆತ್ತಿಯಲ್ಲಿ ಶಿಬಿರ ಹೂಡಿ, ಎತ್ತರವನ್ನು ಅಳೆದದ್ದು ಸಾಮಾನ್ಯ ಸಾಹಸವಲ್ಲ. ಹದಿನೈದು ಇಪ್ಪತ್ತು ಸಾವಿರ ಅಡಿ ಎತ್ತರದ ಪರ್ವತದ ನೆತ್ತಿಯಲ್ಲಿ ಬೀಸುವ ಬಿರುಗಾಳಿಗೆ ಬೆಚ್ಚದೆ ವಾರಗಟ್ಟಲ್ಲೇ ಶಿಬಿರ ಹೂಡಿ, ಹಗಲಿರುಳೂ ಹೆಣಗಾಡಿದ್ದು ಹುಡುಗಾಟಿಕೆಯಲ್ಲ. ಬೋರ್ಗರೆದು ಹರಿಯುತ್ತಿದ್ದ ನೂರಾರು ಮೀಟರ್ ಅಗಲದ ನದಿಯನ್ನು ದೋಣಿ, ಹರಿಗೋಲುಗಳ ಮೂಲಕ ದಾಟಿದ್ದು, ಹೊರಲು ಕನಿಷ್ಠ ಹದಿನಾಲ್ಕು ಮಂದಿ ಬೇಕಾಗುತ್ತಿದ್ದ ಅರ್ಧ ಟನ್ನಿಗೂ ಹೆಚ್ಚು ಭಾರದ ಥಿಯೋಡಲೈಟ್, ಕಂಪನ್ಸೇಟಿಂಗ್ ಬಾರ್ ಮೊದಲಾದ ಉಪಕರಣಗಳನ್ನು ಹೇರಿದ ಎತ್ತು, ಆನೆ ಕುದುರೆಗಳನ್ನು ಹೊಳೆ ದಾಟಿಸಿ ಸರ್ವೆ ನಡೆಸಿದ್ದು, ರೋಚಕ ಮಾತ್ರವಲ್ಲ ಭಯಾನಕ ಕೂಡ. ಪಟ್ಟಣಗಳಿಂದ ಬಹುದೂರದ, ಕೃಷ್ಣಾ ನದೀತೀರದ ದಟ್ಟಾರಣ್ಯದಲ್ಲೋ, ಹಿಮಗಿರಿಯ ಮಧ್ಯದ ಬಿರ್ಚ್, ದೇವದಾರು ವೃಕ್ಷಗಳ ದಟ್ಟಡವಿಯ ನಡುವಲ್ಲೋ ಶಿಬಿರ ಹೂಡಿಕೊಂಡು ತಿಂಗಳುಗಟ್ಟಲೆ ಇರುತ್ತಿದ್ದ ಅವರು, ಏನು ತಿನ್ನುತ್ತಿದ್ದರು, ಏನು ಕುಡಿಯುತ್ತಿದ್ದರು, ಹೇಗೆ ಬದುಕುತ್ತಿದ್ದರು? ಚಳಿ ಮಳೆ ಬಿಸಿಲು ಬೆಂಕಿ ಹಿಮಪಾತ, ಬಿರುಗಾಳಿಗಳನ್ನು ಹೇಗೆ ಎದುರಿಸುತಿದ್ದರು? ಹಾವು ಚೇಳು ಕಾಡುಪ್ರಾಣಿಗಳ ದಾಳಿಯಿಂದ ಹೇಗೆ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು, ಅವರಿಗೆ ಕತ್ತಲಲ್ಲಿ ಬೆಳಕು ಹೇಗೆ, ಅನ್ನ, ಔಷಧ, ಸ್ನಾನ, ಪಾನಗಳು ಹೇಗೆ ಎಂಬ ಕುತೂಹಲ ಕೆರಳುವುದಿಲ್ಲವೇ? ಅವರು ಸರ್ವೆ ನಡೆಸಿದ ಕಾಲದಲ್ಲಿ ಕನಿಷ್ಠ ಬೆಂಕಿಪೊಟ್ಟಣ ಮತ್ತು ಹ್ಯಾಂಡ್ ಟಾರ್ಚ್ ಕೂಡ ಲಭ್ಯವಿರಲಿಲ್ಲ ಎನ್ನುವಾಗ ಅವರು ಎದುರಿಸಿದ ಸಂಕಷ್ಟ ಹೇಗಿದ್ದೀತು?
ಏಳೆಂಟು ನೂರು ಮಂದಿಯ ತಂಡ, ಉಪಕರಣಗಳ ಹೊರೆ ಹೊತ್ತು ಆನೆ, ಮೇನೆ ಒಂಟೆ ಕುದುರೆ ಕತ್ತೆ ಹೇರೆತ್ತು ಕುದುರೆ ಗಾಡಿ ಎತ್ತಿನ ಬಂಡಿ, ದೋಣಿ, ಹರಿಗೋಲುಗಳಲ್ಲಿ, ಈ ದೇಶದ ಬೆಟ್ಟ ಗುಡ್ಡ ಕಾಡು ಕಣಿವೆ ಪರ್ವತ ಕಂದರ, ಮರುಭೂಮಿ ನೀರ್ಗಲ್ಲು ಹೊಳೆ ಹಳ್ಳ ಕೆರೆ ಸರೋವರಗಳನ್ನು, ಬಿಸಿಲು ಬೆಂಕಿ ಹಿಮಪಾತ ಬಿರುಗಾಳಿಗಳ ನಡುವೆ, ಕಾಡುಪ್ರಾಣಿಗಳು ಕ್ರಿಮಿಕೀಟಗಳು ಹಾವು ಹಲ್ಲಿ ಚೇಳು ವಿಷಕ್ರಿಮಿ, ರೋಗರುಜಿನಗಳ ಬಾಧೆಗಳನ್ನು ಲೆಕ್ಕಿಸದೆ ಸರ್ವೆ ನಡೆಸಿದ ಸಾಹಸ ಅನುಪಮ. ನಂಬಲಸದಳವಾದದ್ದು.
ಟ್ರಿಗ್ನಾಮೆಟ್ರಿಕ್ ಸರ್ವೆ ಆರಂಭಿಸಿದ ಲ್ಯಾಂಬ್ಟನ್ ಅಡವಿಯ ನಡುವೆ ಸತ್ತ. ಎವರೆಸ್ಟ್ ಪಾರ್ಶವಾಯು ಪೀಡಿತನಾಗಿ ಜೀವನದುದ್ದಕ್ಕೂ ನರಳಿದ. ಕಾಶ್ಮೀರದ ತೇವಾಂಶ ತುಂಬಿದ ಕಗ್ಗಾಡಿನಲ್ಲಿ ಮೆಟ್ಟಿಕೊಂಡ ಬೆನ್ನುನೋವು ಮಾಂಟ್ಗೊಮರಿಯ ವೃತ್ತಿಜೀವನವನ್ನು ಇಪ್ಪತ್ತು ವರ್ಷಕ್ಕೆ ಮತ್ತು ಬದುಕನ್ನು ನಲವತ್ತೆಂಟು ವರ್ಷಕ್ಕೇ ಕೊನೆಗೊಳಿಸಿತು. ಡಾ ವಾಯ್ಸೆಯ ಎದುರೇ ಆತನ ನೆಚ್ಚಿನ ಶಿಷ್ಯನನ್ನೂ, ನಾಲ್ವರು ಸಿಬ್ಬಂದಿಯನ್ನೂ ಹುಲಿ ಹೊತ್ತು ಕೊಂಡು ಹೋಯಿತು. ಆತನೂ ಯಲ್ಲಾಪುರಂ ರೋಗಕ್ಕೆ ತುತ್ತಾಗಿ ಕಲ್ಕತ್ತೆಯ ದಾರಿಯಲ್ಲಿ ಸತ್ತ. ಸರ್ವೆ ಸಂದರ್ಭದಲ್ಲಿ ತಗುಲಿದ ರೋಗದ ಶುಶ್ರೂಶೆಗೆ ಮಸ್ಸೂರಿಗೆ ಹೋಗಿದ್ದ ಜಾರ್ಜ್ ಲೋಗೋನ್ ಅಲ್ಲಿಯೇ ಶವವಾದ. ಟೆರಾಯ್ ಪ್ರದೇಶದಲ್ಲಿ ಇಬ್ಬರು ಸೈನ್ಯಾಧಿಕಾರಿಗಳು ಉರುಳಿ ಬಿದ್ದು ಸತ್ತರು. ಹೊಳೆಯಲ್ಲಿ ತೇಲಿಹೋದವರು, ಪ್ರಪಾತಕ್ಕೆ ಬಿದ್ದು ಸತ್ತವರು, ಹಿಮಪಾತಕ್ಕೆ ಸಿಕ್ಕವರು, ಪರ್ವತಾಗ್ರದಲ್ಲಿ ವಿದ್ಯುತ್ ಆಘಾತಕ್ಕೆ ತುತ್ತಾದವರು, ಹತ್ಯೆಯಾದವರು, ಪೆಟ್ಟು ತಿಂದವರು ನೂರಾರು ಮಂದಿ. ಒಟ್ಟೂ ಸರ್ವೆಯಲ್ಲಿ ಐನೂರಕ್ಕೂ ಹೆಚ್ಚು ಕಾರ್ಮಿಕರು, ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳು ಪ್ರಾಣತೆತ್ತರು.
ಹಾಗೆಂದು ಕಂಪನಿ ಸರ್ಕಾರ ಸರ್ವೆಯನ್ನು ಆರಂಭಿಸಿದ್ದು ಭಾರತದ ಉದ್ಧಾರಕ್ಕಾಗಿ ಎನ್ನುವುದಕ್ಕಿಂತ ತನ್ನ ಸ್ವಾರ್ಥಕ್ಕೆ ಎಂಬುದು ಅಕ್ಷರಶಃ ಸತ್ಯ. ಅದು, ಭಾರತದಲ್ಲಿ ತನ್ನ ಪ್ರಭುತ್ವವನ್ನು ಶಾಶ್ವತಗೊಳಿಸಲು, ಸಾಮ್ರಾಜ್ಯವನ್ನು ವಿಸ್ತರಿಸಲು ಅಗತ್ಯವಾದ ರಕ್ಷಣಾತ್ಮಕ ಅಗತ್ಯಗಳ ಪೂರೈಕೆಗಾಗಿ ಮತ್ತು ಸಾಧ್ಯವಾದಷ್ಟೂ ಹೆಚ್ಚು ಕಂದಾಯ ಸಂಗ್ರಹಕ್ಕಾಗಿ. ಜೊತೆಗೆ ಆಯಕಟ್ಟಿನ ತಾಣಗಳನ್ನು ಗುರುತಿಸಿ ಸೈನಿಕ ನೆಲೆ ಸ್ಥಾಪಿಸಿ ಭಾರತೀಯರನ್ನು ನಿಗ್ರಹಿಸಲು ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲು. ಅವರ ಉದ್ದೇಶ ಎಷ್ಟೇ ಋಣಾತ್ಮಕವಾಗಿದ್ದರೂ ಪರಿಣಾಮ ನಮಗೆ ಉಪಯುಕ್ತವಾಗಿತ್ತು. ಲಾಭಕರವಾಗಿತ್ತು. ಅದರ ಅನುಷ್ಠಾನದಲ್ಲಿ ಬ್ರಿಟಿಷ್ ಅಧಿಕಾರಿಗಳು ತೋರಿದ ಅನುಪಮ ಶ್ರದ್ಧೆ ಮತ್ತು ಪ್ರಾಮಾಣಿಕತೆಗಳು ಮಾತ್ರ ಅನುಕರಣೀಯವಾಗಿದ್ದವು.
ಒಟ್ಟಿನಲ್ಲಿ ಇತಿಹಾಸವೆಂಬುದು ತಪ್ಪು ಒಪ್ಪುಗಳ ಮಿಶ್ರಣವಾಗಿದ್ದರೂ ಅದು ನಮ್ಮ ಇಂದಿನ ಬದುಕು ಹೀಗಿರಲು ಕಾರಣ ಎಂಬುದಂತೂ ಸುಳ್ಳಲ್ಲ. ಹಾಗಾಗಿ ಕೆಡುಕುಗಳನ್ನು ಆದಷ್ಟೂ ನಿರ್ಲಕ್ಷಿಸಿ, ನಮಗೆ ಒಳಿತುಗೈದು ಉಪಕರಿಸಿದಂತಹ ಐತಿಹಾಸಿಕ ಸಂಗತಿಗಳ ಕುರಿತು ತಿಳಿದರೆ ನಾವು ಅನುಭವಿಸುತ್ತಿರುವ ಸುಖ ಸೌಲಭ್ಯಗಳ ಸೊಗಸು, ರುಚಿ ಹೆಚ್ಚುತ್ತದೆ. ಟ್ರಿಗ್ನಾಮೆಟ್ರಿಕ್ ಸರ್ವೆಯ ಉದ್ದೇಶ ಏನೇ ಆಗಿದ್ದರೂ ಅದರ ಪರಿಣಾಮ ನಮ್ಮ ನೆಲಕ್ಕೆ ನೂರಕ್ಕೆ ನೂರು ಒಳಿತುಗೈದದ್ದು ಸತ್ಯ. ನಮಗೆ ಉಪಕರಿಸಿದ ಇಂತಹ ಐತಿಹಾಸಿಕ ಸಾಹಸವೊಂದರ ವಿವರಣೆಯೇ ಈ "ಪ್ರಮೇಯ" ಎಂಬ ಕೃತಿ.”
ಜನವರಿ 22ರಂದು ಬಿಡುಗಡೆಯಾಗಲಿರುವ ಮಹಾಮಾಪನದ ಬಗೆಗಿನ ಕಾದಂಬರಿ ‘ಪ್ರಮೇಯ’ ವನ್ನು ರಿಯಾಯಿತಿಯೊಂದಿಗೆ ಈಗಲೇ ಕಾಯ್ದಿರಿಸಿ!👇🏻
ಪ್ರಮೇಯ - https://harivubooks.com/kn/products/gajananasharma-prameya
ಚೆನ್ನಭೈರಾದೇವಿ - https://harivubooks.com/kn/products/chenna-bhaira-devi
ಪುನರ್ವಸು - https://harivubooks.com/kn/products/punarvasu-kannada-novel
]]>
ಹೆಚ್ಚಿನದನ್ನು ಇಲ್ಲಿ ಓದಿ.
]]>
ನಮ್ಮ ಪ್ರಕಾಶನದ ಪುಸ್ತಕಗಳ ಜೊತೆಗೆ ಸಾವಿರಾರು ಕನ್ನಡ ಪುಸ್ತಕಗಳನ್ನು ಹೊತ್ತೊಯ್ದು, ನಮಗೆಂದು ಮೀಸಲಾಗಿದ್ದ “E11-E13” ಮಳಿಗೆಯಲ್ಲಿ ಒಪ್ಪವಾಗಿ ಜೋಡಿಸಿಟ್ಟು, ಪುಸ್ತಕ ಪ್ರೇಮಿಗಳಿಗಾಗಿ ಕಾದುನಿಂತಿದ್ದೆವು. ಅಬ್ಬಬ್ಬಾ, ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಸಾವಿರಾರು ಜನ ಎಡೆಬಿಡದೇ ಬರುತ್ತಿದ್ದರು! ಮೊದಲ ದಿನ ಹರಿದು ಬಂದ ಪುಸ್ತಕ ಪ್ರೇಮಿಗಳು ನದಿಯಂತೆ ಕಂಡರೆ, ಎರಡನೇ ಹಾಗೂ ಮೂರನೇ ದಿನಕ್ಕೆ ಹೆಗ್ಗಡಲಂತೆ ಕಂಡದ್ದು ನಿಜ! ಬಗೆ ಬಗೆಯ ಪುಸ್ತಕಗಳನ್ನು ನೋಡಿ ಹಲವರು ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು. ನಮ್ಮ ಬಳಿ ಇಲ್ಲದ ಕೆಲವು ಪುಸ್ತಕಗಳನ್ನೂ ನಮ್ಮ ಅಂಗಡಿಗೆ ಸೇರಿಸಲು ತಿಳಿಸಿದರು. ಇದರಿಂದ ನಮಗೆ ಸಾಕಷ್ಟು ಕಲಿಕೆಯೂ ಆಯಿತು. ಹೆಚ್ಚಿನವರು ಪುಸ್ತಕಗಳನ್ನು ಕೊಂಡು ಹಾರೈಸಿದರು. ನಮಗದು ವಿಶೇಷವಾಗಿತ್ತು.
ಮಕ್ಕಳು ಮೆಚ್ಚಿದ ಬಣ್ಣದ ಪುಸ್ತಕಗಳು!
ಚಿನ್ನಿಯ ರಜಾಯಿ, ಅಳಿಲು ಸೇವೆ, ರಿಕ್ಕು ರಿಕ್ಷಣ್ಣಾ ಎಂಬ ಮಕ್ಕಳ ಚಿತ್ರ ಪುಸ್ತಕಗಳು ನಮ್ಮ ಪ್ರಕಾಶನದಿಂದ ಹೊರಬಂದಿರುವುದು ಹೆಚ್ಚಿನವರಿಗೆ ತಿಳಿದಿದೆ. ಆ ಪುಸ್ತಕಗಳು ಮಕ್ಕಳ ಕಣ್ಮನಗಳನ್ನು ಸೆಳೆದವು. ಮಳಿಗೆಗೆ ಬಂದ ಪ್ರತಿಯೊಂದು ಮಗುವು ಈ ಮೂರು ಪುಸ್ತಕಗಳ ಪುಟಗಳನ್ನು ತಿರುವಿ ಹಾಕದೇ ಮಳಿಗೆಯಿಂದ ಹೊರಹೋಗಲಿಲ್ಲ! ಮಕ್ಕಳು ಮೆಚ್ಚುವಂತಹ ಪುಸ್ತಕ ಇಟ್ಟ ನಲಿವು ನಮ್ಮದಾಗಿತ್ತು.
ಹರಟೆ, ಹಾಸ್ಯ, ಜೊತೆಗೆ ಗಂಭೀರ ಚರ್ಚೆ!
ಮಳಿಗೆಗೆ ಬಂದವರಿಂದ ಪುಸ್ತಕ ಮಾರಾಟದ ಇಂದಿನ ಸ್ಥಿತಿ, ಯಾವ್ಯಾವ ಬಗೆಯ ಪುಸ್ತಕಗಳು ಹೋಗುತ್ತವೆ ಅಂತೆಲ್ಲಾ ಬಗೆ ಬಗೆಯ ಮಾತುಕತೆಗಳು ಸಾಗಿದ್ದವು. ಒಂದು ಕಡೆ ಕೆಲವೊಂದು ಪುಸ್ತಕದ ಕುರಿತು ಒಂದಿಷ್ಟು ಹರಟೆ ನಡೆಯುತ್ತಿದ್ದರೆ, ಇನ್ನೊಂದು ಕಡೆ 10% ರಿಯಾಯಿತಿಗೆಂದು ಹಾಕಿದ್ದ “10%” ಪಟ್ಟಿಯನ್ನು ನೋಡಿ “ಬರೀ ಹತ್ತು ರೂಪಾಯಿಗೆ ಈ ಪುಸ್ತಕಗಳಾ?” “ನಿಮ್ಮಲ್ಲಿ Free Shipping ಅಲ್ವಾ, ನನ್ನದೊಂದು ಪರ್ಸನಲ್ ಲಗೇಜ್ ಇದೆ ಫ್ರೀಯಾಗಿ ಕೊರಿಯರ್ ಮಾಡುತ್ತೀರಾ?” ಎಂದು ನಮ್ಮ ಕಾಲೆಳೆಯುತ್ತಿದ್ದರು ಕೊನೆಗೆ ನಕ್ಕು ಬೇಕಾದ ಪುಸ್ತಕ ಕೊಂಡು ಹೋಗುತ್ತಿದ್ದರು. ಮತ್ತಷ್ಟು ಓದುಗರು ಕೆಲವು ಪುಸ್ತಕಗಳ ಕುರಿತು ಆಳವಾಗಿ ನಮ್ಮೊಡನೆ ಚರ್ಚೆ ನಡೆಸಿ, ನಮಗೆ ತಿಳಿದಿರದ ಹಲವಾರು ಸಾಹಿತ್ಯದ ವಿಷಯಗಳನ್ನು ನಮ್ಮೊಡನೆ ಹಂಚಿಕೊಂಡರು. ಹೀಗೆ ಇಡೀ ಮಳಿಗೆಯಲ್ಲಿ ಒಂದಲ್ಲ ಒಂದು ರೀತಿಯ ಚಟುವಟಿಕೆಗಳು ನಡೆದು ಮಳಿಗೆಯ ಉಲ್ಲಾಸ ಹೆಚ್ಚಿತ್ತು.
ಹರಿವು ಬುಕ್ಸ್ ಗ್ರಾಹಕರ ಭೇಟಿ!
ಹಾವೇರಿಯ ಸಮ್ಮೇಳನಕ್ಕೆ ಸುತ್ತಲಿನ ಹುಬ್ಬಳ್ಳಿ, ಧಾರವಾಡ, ಶಿರಸಿ, ಹೊನ್ನಾವರ ದಾವಣಗೆರೆಯಿಂದಲೂ ಹಲವು ಓದುಗರು ಬಂದಿದ್ದರು. ಅದರಲ್ಲಿ ಹಲವರು harivubooks.com ಮೂಲಕ ಆನ್ಲೈನ್ನಲ್ಲಿ ಪುಸ್ತಕಗಳನ್ನು ಕೊಂಡಿದ್ದವರು. ಅಂತಹ ಹಲವಾರು ಹರಿವು ಬುಕ್ಸ್ ಗ್ರಾಹಕರು ಬಂದು ಮಾತನಾಡಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ! ನೇರವಾಗಿ ನಮ್ಮ ಆನ್ಲೈನ್ ಗ್ರಾಹಕರನ್ನು ಭೇಟಿಯಾಗಿ ಮಾತನಾಡಿಸುವುದು, ಅವರ ಅನಿಸಿಕೆಗಳನ್ನು ಕೇಳುವುದು ಅಪರೂಪದ ಸಂಗತಿ. ಅಂತಹ ಅಪರೂಪದ ಕ್ಷಣಕ್ಕೆ ನಮ್ಮ ಮಳಿಗೆ ಸಾಕ್ಷಿಯಾಗಿತ್ತು.
ಮಳಿಗೆಗೆ ಬಂದ ಮಿರ್ಚಿ ಮಂಡಕ್ಕಿ!
ದಿನವಿಡೀ ನಿಂತು, ಬಂದವರನ್ನು ಮಾತನಾಡಿಸುತ್ತಾ, ಪುಸ್ತಕ ಮಾರಾಟ ಮಾಡುತ್ತಾ ಕಾಲ ಕಳೆಯುತ್ತಿದ್ದ ನಮಗೆ ಹಾವೇರಿಯ ಊಟದ ರುಚಿಯನ್ನು ಸವಿಯಲು ಸಾಧ್ಯವಾಗಿರಲಿಲ್ಲ. ಆದರೂ ಅಲ್ಲಿ ಹೆಸರಾಗಿರುವ “ಮಿರ್ಚಿ ಮಂಡಕ್ಕಿ”ಯನ್ನು ಸವಿಯುವ ಅದೃಷ್ಟ ನಮಗೆ ಒದಗಿ ಬಂದಿತ್ತು. ಹರಿವು ಬುಕ್ಸ್ನ ಪ್ರೀತಿಯ ಗ್ರಾಹಕರು, ನಮ್ಮ ಹಿತೈಶಿಗಳೂ ಆದ ಹಾವೇರಿಯ ಒಬ್ಬರು ನಮಗಾಗಿ ಸಂಜೆಯ ಹೊತ್ತಿಗೆ ಮಿರ್ಚಿ-ಮಂಡಕ್ಕಿಯನ್ನು ತಂದು ನಮ್ಮ ನಾಲಿಗೆಯ ರುಚಿಮೊಗ್ಗುಗಳಿಗೆ ಕೆಲಸ ಕೊಟ್ಟಿದ್ದು ಮರೆಯಲಾಗದ ಕ್ಷಣ! ಒಂದು ಪುಸ್ತಕದ ಅಂಗಡಿಯ ಮೇಲೆ ಇಟ್ಟಿರುವ ಇಂತಹ ಅಕ್ಕರೆಯನ್ನು ನೋಡಿ ಎದೆತುಂಬಿ ಬಾರದೇ? ಮೆಣಸಿನಕಾಯಿ ಬಜ್ಜಿ ಖಡಕ್ಕಾಗಿತ್ತು, ಅವರ ಪ್ರೀತಿ ಮಾತ್ರ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿತ್ತು.
ಹಾವೇರಿಯವರ ಮಾತು ಗಟ್ಟಿಚಟ್ನಿ, ಮನಸ್ಸು ಮಲ್ಲಿಗೆ ಇಡ್ಲಿ!
ಹಾವೇರಿ ಊರಿನ ಭಾಷೆಯ ಸೊಗಡು ಅಲ್ಲಿ ಬೀರುವ ಯಾಲಕ್ಕಿಯ ಕಂಪಿನಂತೆ. ಬೆಂಗಳೂರಿನಲ್ಲಿ ಬೆಳೆದ ನಮಗೆ ಅಲ್ಲಿ ಭಾಷೆಯ ಗಡಸುತನ ಬೇರೆ ಅನಿಸಿದರು, ಅವರು ಮಾತನಾಡುವ ಧಾಟಿ ಹೆಚ್ಚು ಹಿಡಿಸಿತು. ಅವರು ಮಾತನಾಡುವ ಧಾಟಿ ಎಷ್ಟು ಗಡುಸಾಗಿದೆಯೋ ಅಷ್ಟೇ ಮೆದುವಾಗಿ ಅವರ ಮನಸ್ಸಿದೆ ಎಂಬುದು ನಮ್ಮ ಅನುಭವದ ಮಾತು. ಪುಸ್ತಕ ಮಳಿಗೆಯಲ್ಲಿ ಅವರು ನಡೆದುಕೊಂಡ ರೀತಿ, ಮಳಿಗೆಯಲ್ಲಿ ಬಿಲ್ಲಿಂಗ್ ಆಗುವುದು ಕೊಂಚ ತಡವಾದರೂ ಸಹಿಸಿಕೊಂಡು ನಮ್ಮೊಂದಿಗೆ ಸಹಕರಿಸಿದ್ದು, ಎಲ್ಲವೂ ನಮಗೆ ನೆನಪಿನಲ್ಲಿ ಉಳಿಯುವಂತದ್ದು.
ಬೇರೆ ಬೇರೆ ಪ್ರಕಾಶಕರು, ಪುಸ್ತಕದ ಅಂಗಡಿಗಳು ಒಂದೆಡೆ ಸೇರುವ ಅಪರೂಪದ ಜಾಗವೇ ಸಾಹಿತ್ಯ ಸಮ್ಮೇಳನ. “ಹೆಂಗಿದೆ ವ್ಯಾಪಾರ?” ಎಂದು ಉಳಿದ ಮಳಿಗೆಯವರನ್ನೆಲ್ಲಾ ಮಾತನಾಡಿಸಿ ಎಲ್ಲರೊಡನೆ ಬೆರೆಯಲು ನಮಗೊಂದು ದೊಡ್ಡ ಅವಕಾಶ ಸಿಕ್ಕಿದ್ದು ಸುಳ್ಳಲ್ಲ. ಓದುಗರ ಅಭಿರುಚಿಗಳು ಏನು ಎಂದು ಅರಿಯಲು ಈ ಸಮ್ಮೇಳನ ನಮಗೆ ಸಾಕಷ್ಟು ನೆರವಾಯಿತು. ಇಂತಹ ಸಮ್ಮೇಳನದ ರೂವಾರಿಯಾದ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು. ಹರಿವು ಬುಕ್ಸ್ ಮಳಿಗೆಗೆ ಭೇಟಿಕೊಟ್ಟ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದಗಳು. ನೇರವಾಗಿ ಇಲ್ಲವೇ ತೆರೆ-ಮರೆಯಲ್ಲಿ ನಮಗೆ ನೆರವಾದ ಎಲ್ಲರಿಗೂ ನಮನಗಳು! ನಿಮ್ಮೆಲ್ಲರ ಹಾರೈಕೆ, ಅಕ್ಕರೆ ಹೀಗೆ ಇರಲಿ. ಮುಂದಿನ ಸಮ್ಮೇಳನದಲ್ಲಿ ಮತ್ತೆ ಸಿಗೋಣ.
]]>